ಆ್ಯಪ್ನಗರ

ಚುನಾವಣೆ ಬಳಿಕ ದೋಸ್ತಿ ಸರಕಾರ ಪತನ

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ರಾಜ್ಯದಲ್ಲಿ ಮೈತ್ರಿ ಸರಕಾರ ಪತನವಾಗಲಿದ್ದು, ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಮುರುಗೇಶ್‌ ನಿರಾಣಿ ಹೇಳಿದರು.

Vijaya Karnataka 12 Apr 2019, 5:00 am
ದಾವಣಗೆರೆ : ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ರಾಜ್ಯದಲ್ಲಿ ಮೈತ್ರಿ ಸರಕಾರ ಪತನವಾಗಲಿದ್ದು, ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಮುರುಗೇಶ್‌ ನಿರಾಣಿ ಹೇಳಿದರು.
Vijaya Karnataka Web after the election the dosti government collapsed
ಚುನಾವಣೆ ಬಳಿಕ ದೋಸ್ತಿ ಸರಕಾರ ಪತನ


ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇ 23ರ ನಂತರ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 22 ಸ್ಥಾನ ಗೆಲ್ಲಲಿದೆ. ನಂತರ ಕಾಂಗ್ರೆಸ್‌, ಜೆಡಿಎಸ್‌ ನೀಡಿರುವ ಬೆಂಬಲ ಹಿಂದಕ್ಕೆ ಪಡೆಯಲಿದೆ ಎಂದರು.

ಆಪರೇಷನ್‌ ಕಮಲದ ಪ್ರಶ್ನೆ ಇಲ್ಲ. ಕೆಲವರು ಸ್ವ ಇಚ್ಛೆಯಿಂದ ಬಿಜೆಪಿಗೆ ಬರಲು ಸಿದ್ಧರಾಗಿದ್ದಾರೆ. ಈಗಾಗಲೇ ಬಿಜೆಪಿಯ ಸಂಪರ್ಕದಲ್ಲಿದ್ದಾರೆ. ಯಾರು ಬರಲಿದ್ದಾರೆ ಎಂಬುದನ್ನು ಕಾದು ನೋಡಬೇಕು ಎಂದು ತಿಳಿಸಿದರು.

ದಿನೇಶ್‌ ಅಸಮರ್ಥ:


ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅಸಮರ್ಥ ನಾಯಕ. 2005ರಲ್ಲಿ ರಾಜ್ಯದಲ್ಲಿ ಆಹಾರ ಮತ್ತು ಸರಬರಾಜು ಮಂತ್ರಿಯಾಗಿದ್ದ ವೇಳೆ ಗುಂಡುರಾವ್‌ಗೆ ಪಡಿತರ ಗುರುತಿನ ಚೀಟಿ ನಕಲಿ ತಡೆಯುವುದಕ್ಕೆ ಸಾಧ್ಯವಾಗಲಿಲ್ಲ. ಆ ಸ್ಥಾನಕ್ಕೆ ರಾಜೀನಾಮೆ ನೀಡದೆ ಬೇಜವಾಬ್ದಾರಿತನದ ಹೇಳಿಕೆಯಿಂದಾಗಿ ತಮ್ಮ ಮಂತ್ರಿ ಸ್ಥಾನ ಕಳೆದುಕೊಂಡಿದ್ದರು. ಇದನ್ನು ಅಧ್ಯಕ್ಷರು ಮರೆಯಬಾರದು ಎಂದರು.

ಜಿ.ಎಂ. ಸಿದ್ದೇಶ್ವರ್‌ ಸಮರ್ಥ ಆಡಳಿತ ನೀಡಿದ್ದು, ಇನ್ನೊಬ್ಬರಿಗೂ ಅವಕಾಶ ನೀಡಬೇಕೆಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಹೊರತು ಅವರೇನು ಅಸಮರ್ಥರು ಅಲ್ಲ. ಈ ಬಗ್ಗೆ ದಿನೇಶ್‌ ಗುಂಡುರಾವ್‌ ಅರಿತುಕೊಳ್ಳಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಸಿದ್ಧೇಶ್ವರ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಹರಿಹರದಲ್ಲಿ 960 ಕೋಟಿ ರೂ. ಇಥೆನಾಲ್‌ ಕೈಗಾರಿಕಾ ಘಟಕ, ಸ್ಮಾರ್ಟ್‌ಸಿಟಿ, ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಿಸಿದ್ದಾರೆ. ಸಾವಿರಾರು ಬಡವರಿಗೆ ಗ್ಯಾಸ್‌ ಸಿಲೆಂಡರ್‌ ನೀಡಿದ್ದಾರೆ ಎಂದರು.

ಗೋಷ್ಠಿಯಲ್ಲಿ ಮಾಜಿ ಶಾಸಕ ಬಸವರಾಜ್‌ ನಾಯ್ಕ್‌, ಮೋಹನ್‌ ಜಾಧವ್‌, ರಾಜಶೇಖರ್‌, ಕೊಂಡಜ್ಜಿ ಜಯಪ್ರಕಾಶ್‌, ಅಜಯ್‌, ಧನುಷ್‌ ರೆಡ್ಡಿ, ಪ್ರವೀಣ್‌ ಜಾಧವ್‌ ಇದ್ದರು.

ಕಾಂಗ್ರೆಸ್‌ ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡುತ್ತಿದ್ದು, ಮೂರು ತಿಂಗಳ ಹಿಂದೆ ಎಚ್‌.ಎಂ. ರೇವಣ್ಣ ದಾವಣಗೆರೆಗೆ ಟಿಕೆಟ್‌ ಕೇಳಿದ್ರು, ಯಾಕೆ ಕೊಡಲಿಲ್ಲ. ಕೊನೆ ಹಂತದಲ್ಲಿ ಎಚ್‌.ಬಿ. ಮಂಜಪ್ಪಗೆ ಟಿಕೆಟ್‌ ನೀಡಿ ಬಲಿ ಕುರಿ ಮಾಡಿದ್ದಾರೆ. ಆಡಳಿತ ತಮ್ಮ ಕೈಯಲ್ಲಿ ಇರಬೇಕು ಎನ್ನುವ ಕಾರಣಕ್ಕೆ ಹಿಂದುಳಿದ ವರ್ಗಕ್ಕೆ ಟಿಕೆಟ್‌ ನೀಡಿದ್ದಾರೆ ಅಷ್ಟೇ.
-ಯಶವಂತರಾವ್‌ ಜಾಧವ್‌. ಬಿಜೆಪಿ ಜಿಲ್ಲಾಧ್ಯಕ್ಷ.

ಕಳೆದ ಮೂರು ತಿಂಗಳ ಹಿಂದೆ ಸಮ್ಮಿಶ್ರ ಸರಕಾರದಲ್ಲಿ 12 ಸಾವಿರ ಕೋಟಿ ರೂ. ಬಿಡುಗಡೆಯಾಗಿದ್ದು, ಆ ಹಣ ದುರುಪಯೋಗ ಆಗಬಾರದು ಎನ್ನುವ ಕಾರಣಕ್ಕೆ ಐಟಿ ದಾಳಿ ಮಾಡುತ್ತಿದೆ. ಬ್ಯಾಂಕ್‌ಗಳಲ್ಲಿ ಹೆಚ್ಚಿನ ಹಣ ಪಡೆದುಕೊಳ್ಳುವವರ ವಿರುದ್ಧ ಐಟಿ ದಾಳಿ ಮಾಡಿದ್ದಾರೆ ಅಷ್ಟೇ.
- ಮೋಹನ್‌ ಲಿಂಬಿಕಾಯಿ, ವಿಧಾನ ಪರಿಷತ್‌ ಸದಸ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ