ಆ್ಯಪ್ನಗರ

ಭದ್ರಾ ನೀರಿಗೆ ಖಾಲಿ ಕೊಡಗಳ ಹಿಡಿದು ಧರಣಿ

ಭದ್ರಾ ಮೇಲ್ದಂಡೆ ಯೋಜನೆಯಡಿ ತಾಲೂಕಿಗೆ 2.5 ಟಿಎಂಸಿ ನೀರು ಹರಿಸುವುದು ಹಾಗೂ ಸಂಗೇನಹಳ್ಳಿ ಕೆರೆಯ ಮಾರ್ಗವಾಗಿಯೇ ಕಾಲುವೆ ನಿರ್ಮಿಸಬೇಕೆಂದು ಆಗ್ರಹಿಸಿ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಆಶಾ ಕಾರ್ಯಕರ್ತರು, ಮಹಿಳೆಯರು ಖಾಲಿಕೊಡಗಳ ಹಿಡಿದು ಬುಧವಾರ ವಿನೂತನ ರೀತಿ ಧರಣಿ ನಡೆಸಿದರು.

Vijaya Karnataka 20 Jun 2019, 5:00 am
ಜಗಳೂರು : ಭದ್ರಾ ಮೇಲ್ದಂಡೆ ಯೋಜನೆಯಡಿ ತಾಲೂಕಿಗೆ 2.5 ಟಿಎಂಸಿ ನೀರು ಹರಿಸುವುದು ಹಾಗೂ ಸಂಗೇನಹಳ್ಳಿ ಕೆರೆಯ ಮಾರ್ಗವಾಗಿಯೇ ಕಾಲುವೆ ನಿರ್ಮಿಸಬೇಕೆಂದು ಆಗ್ರಹಿಸಿ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಆಶಾ ಕಾರ್ಯಕರ್ತರು, ಮಹಿಳೆಯರು ಖಾಲಿಕೊಡಗಳ ಹಿಡಿದು ಬುಧವಾರ ವಿನೂತನ ರೀತಿ ಧರಣಿ ನಡೆಸಿದರು.
Vijaya Karnataka Web bhadra holding water to empty beds
ಭದ್ರಾ ನೀರಿಗೆ ಖಾಲಿ ಕೊಡಗಳ ಹಿಡಿದು ಧರಣಿ


ಪಟ್ಟಣದ ತಾಲೂಕು ಕಚೇರಿ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿತು. 'ನಮ್ಮ ಪಾಲಿನ ನೀರು ನಮಗೆ ಕೊಡಿ' ಎಂದು ಘೋಷಣೆ ಕೂಗಿ ಮಹಿಳೆಯರು ಭದ್ರಾ ನೀರಿಗೆ ಹಕ್ಕೋತ್ತಾಯ ಮಂಡಿಸಿದರು.

ಸರಕಾರದ ನಿರ್ಲಕ್ಷ್ಯಕ್ಕೆ ಆಕ್ರೋಶ:

ಆಶಾ ಕಾರ್ಯಕರ್ತೆ ಇಂದಿರಮ್ಮ ಮಾತನಾಡಿ, ಕಳೆದ 70 ದಶಕಗಳಿಂದ ಬರಪೀಡಿತ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ತಾಲೂಕಿನಲ್ಲಿ ಕುಡಿಯುವ ನೀರಿಗೂ ತತ್ವಾರವಿದ್ದು, ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ತಾಲೂಕಿನ ಜನತೆ ಹನಿ ನೀರಿಗೂ ಪರಿತಪಿಸುವಂತಾಗಿದ್ದರೂ ಈ ಭಾಗಕ್ಕೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸುವಲ್ಲಿ ಸರಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಸಕಾಲಕ್ಕೆ ಮಳೆ ಬೀಳದೆ ಸದಾ ಬರಗಾಲ ಅನುಭವಿಸುತ್ತಾ ಬಂದಿರುವ ಜನತೆಗೆ ಬರಗಾಲ ಶಾಶ್ವತವಾಗಿದ್ದು, ಪ್ರತಿ ವರ್ಷ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಪ್ರತಿ ದಿನ ಹಳ್ಳಿ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಕಿಮೀಗಟ್ಟಲೇ ದೂರದ ಜಮೀನುಗಳಿಗೆ ತೆರಳಿ ಪಂಪ್‌ಸೆಟ್‌ ನೀರನ್ನು ಸಂಗ್ರಹಿಸಿಕೊಂಡು ಬರುವಂತಾಗಿದೆ ಎಂದು ಆಶಾ ಕಾರ್ಯಕರ್ತೆಯರು ಅಳಲು ತೊಡಿಕೊಂಡರು.

ನೀರು ಕಬಳಿಸಲು ಬೀಡಲ್ಲ:
ಅನೇಕ ವರ್ಷಗಳಿಂದ ರಾಜೀವ್‌ಗಾಂಧಿ ಸಬ್‌ ಮಿಷನ್‌ ಯೋಜನೆಯಡಿ ತಾಲೂಕಿನ 173 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಯೋಜನೆ 10 ವರ್ಷವಾದರೂ ಜಾರಿಗೆ ಬಂದಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯಡಿ ತಾಲೂಕಿಗೆ 2.5 ಟಿಎಂಸಿ ನೀರು ಹರಿಸಲು ಸರಕಾರ ಮಂಜೂರಾತಿ ನೀಡಿದ್ದರೂ ಕಾಲುವೆ ಮಾರ್ಗ ಸೇರಿ ತಾಲೂಕಿಗೆ ಬರುವ ನೀರಿನ ಪಾಲಿನಲ್ಲಿ ಬೇರೆ ಜಿಲ್ಲೆಯವರು ಕಬಳಿಸುವ ಹುನ್ನಾರ ಸರಿಯಲ್ಲ. ಪೂರ್ಣ ಪ್ರಮಾಣದ ಭದ್ರೆ ನೀರು ಜಗಳೂರಿಗೆ ಹರಿಸಲು ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಧರಣಿಯಲ್ಲಿ ಹೋರಾಟ ಸಮಿತಿಯ ಸದಸ್ಯ ಆರ್‌.ಓಬಳೇಶ್‌, ಪ್ರಕಾಶರೆಡ್ಡಿ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಜೆ.ಮಹಾಲಿಂಗಪ್ಪ, ದಸಂಸ ಸಂಚಾಲಕ ಸತೀಶ್‌, ಮುಖಂಡ ಸತ್ಯಮೂರ್ತಿ, ಬಸವರಾಜ್‌, ಕಾನನಕಟ್ಟೆ ತಿಪ್ಪೇಸ್ವಾಮಿ, ವಾಲಿಬಾಲ್‌ ತಿಮ್ಮಾರೆಡ್ಡಿ, ಎಂ.ಬಿ.ಲಿಂಗರಾಜ್‌, ಹನುಮಂತರೆಡ್ಡಿ, ಮಹಮದ್‌ಅನ್ವರ್‌, ಲುಕ್ಮಾನ್‌ಖಾನ್‌, ಕೆ.ಟಿ. ವೀರಸ್ವಾಮಿ, ಅನಂತ್‌, ವ್ಯಾಸಗೊಂಡನಹಳ್ಳಿ ಎಂ.ರಾಜಪ್ಪ ಸೇರಿ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಮಹಿಳೆಯರ ಆಕ್ರೋಶ
ಮಳೆ ಬೀಳದೆ ಅಂತರ್ಜಲ ಕುಸಿತದಿಂದಾಗಿ ಬೋರ್‌ವೆಲ್‌ಗಳಲ್ಲಿ ಸಹ ನೀರಿಲ್ಲದೆ ಹಾಹಾಕಾರ ಉಂಟಾಗಿದೆ. ಹನಿ ನೀರಿಗೂ ಪರದಾಡುವಂತಾಗಿದ್ದರೂ ಸಹ ಈ ಭಾಗಕ್ಕೆ ಜನಪ್ರತಿನಿಧಿಗಳಾಗಲೀ ಅಧಿಕಾರಿ ವರ್ಗದವರಾಗಲೀ ಶಾಶ್ವತ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ಚುನಾವಣೆಯಲ್ಲಿ ಮಾತ್ರ ಮತ ಬ್ಯಾಂಕ್‌ನ್ನಾಗಿ ಬಳಸಿಕೊಂಡು ಗೆದ್ದ ಮೇಲೆ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಖಾಲಿ ಕೊಡಗಳ ಪ್ರದರ್ಶಿಸಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ