ಆ್ಯಪ್ನಗರ

ಭದ್ರಾ ಅಚ್ಚುಕಟ್ಟಿಗೆ ನೂರು ದಿನ ನೀರು

ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಮುಂಗಾರು ಹಂಗಾಮಿನ ಬೆಳೆಗಾಗಿ ಡ್ಯಾಂನಿಂದ ನೂರು ದಿನ ನೀರು ಹರಿಸಲಾಗಿದೆ. ಶುಕ್ರವಾರ ಬೆಳಗ್ಗೆ ವೇಳೆಗಾಗಲೇ ನೀರು ಸೂಳೆಕೆರೆ ಬಳಿಯ ಆರ್‌ 2 ತಲುಪಿದ್ದು ರಾತ್ರಿ ವೇಳೆಗೆ ದಾವಣಗೆರೆ ಮುಟ್ಟಲಿದೆ. ಅತ್ತ ಮಲೆಬೆನ್ನೂರಿಗೂ ನೀರು ತಲುಪಲಿದೆ. ಭತ್ತ ಬೆಳೆಯುವುದರ ಜತೆ ದಾವಣಗೆರೆ ನಗರಕ್ಕೆ ಎದುರಾಗಬಹುದಾದ ಕುಡಿವ ನೀರಿನ ಸಮಸ್ಯೆಯೂ ನೀಗಲಿದೆ.

Vijaya Karnataka 17 Aug 2019, 5:00 am
ದಾವಣಗೆರೆ : ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಮುಂಗಾರು ಹಂಗಾಮಿನ ಬೆಳೆಗಾಗಿ ಡ್ಯಾಂನಿಂದ ನೂರು ದಿನ ನೀರು ಹರಿಸಲಾಗಿದೆ. ಶುಕ್ರವಾರ ಬೆಳಗ್ಗೆ ವೇಳೆಗಾಗಲೇ ನೀರು ಸೂಳೆಕೆರೆ ಬಳಿಯ ಆರ್‌ 2 ತಲುಪಿದ್ದು ರಾತ್ರಿ ವೇಳೆಗೆ ದಾವಣಗೆರೆ ಮುಟ್ಟಲಿದೆ. ಅತ್ತ ಮಲೆಬೆನ್ನೂರಿಗೂ ನೀರು ತಲುಪಲಿದೆ. ಭತ್ತ ಬೆಳೆಯುವುದರ ಜತೆ ದಾವಣಗೆರೆ ನಗರಕ್ಕೆ ಎದುರಾಗಬಹುದಾದ ಕುಡಿವ ನೀರಿನ ಸಮಸ್ಯೆಯೂ ನೀಗಲಿದೆ.
Vijaya Karnataka Web bhadra is a hundred days of water
ಭದ್ರಾ ಅಚ್ಚುಕಟ್ಟಿಗೆ ನೂರು ದಿನ ನೀರು


ಡ್ಯಾಂನಿಂದ 2188 ಕ್ಯೂಸೆಕ್‌ ನೀರನ್ನು ಗುರುವಾರವೇ ನಾಲೆಗೆ ಹರಿಸಲಾಗಿದೆ. ನೀರು ಶುಕ್ರವಾರ ಮಧ್ಯಾಹ್ನ ಸೂಳೆಕೆರೆ ಆರ್‌ 2 ತಲುಪಿದೆ. ಅಲ್ಲಿಂದ ದಾವಣಗೆರೆ ಶಾಖಾ ನಾಲೆ ಮತ್ತು ಮಲೆಬೆನ್ನೂರು ಶಾಖಾ ನಾಲೆಗೆ ನೀರು ವಿಭಾಗ ಆಗಿ ಹರಿಯಲಿದೆ. ದಾವಣಗೆರೆ ನಾಲೆಯಿಂದಲೇ ಸೂಳೆಕೆರೆ ನೀರು ತುಂಬಿಸಿಕೊಳ್ಳಲಾಗುತ್ತದೆ. ನಾಲೆಗೆ ನೀರು ಹರಿಸುವುದರಿಂದ ಬೆಳೆಗೂ ಮತ್ತು ಕುಡಿವ ನೀರಿಗೂ ಅನುಕೂಲ ಆಗುವುದರಿಂದ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.

ಡ್ಯಾಂ ತುಂಬುವ ಹಂತಕ್ಕೆ:

ಮುಂಗಾರಿನ ಆರಂಭದಲ್ಲಿ ಭದ್ರಾ ಜಲಾನಯನ ಪ್ರದೇಶದಲ್ಲೂ ಮಳೆ ಕೊರತೆಯಾಗಿ ಡ್ಯಾಂಗೆ ನಿರೀಕ್ಷಿಸಿದಷ್ಟು ನೀರು ಹರಿದು ಬಂದಿರಲಿಲ್ಲ. ಆಗಸ್ಟ್‌ ತಿಂಗಳು ಮೊದಲ ವಾರ ಕಳೆದರೂ ಜಲಾಶಯದ ನೀರಿನ ಮಟ್ಟ 145 ಅಡಿ ದಾಟಿರಲಿಲ್ಲ. ಆದರೆ, ಕಳೆದ ವಾರ ಮಲೆನಾಡಿನ ಭಾಗದಲ್ಲಿ ಸುರಿದ ಧಾರಕಾರ ಮಳೆಯಿಂದಾಗಿ ಕೇವಲ ಒಂದು ವಾರದಲ್ಲಿ ಡ್ಯಾಂ ತುಂಬುವ ಹಂತಕ್ಕೆ ಬಂದಿದೆ. ಡ್ಯಾಂನ ನೀರಿನ ಮಟ್ಟ 184 ಅಡಿ ತಲುಪಿದೆ. 185 ಅಡಿ ದಾಟಿದ ನಂತರ ಡ್ಯಾಂನಿಂದ ನದಿಗೂ ನೀರು ಹರಿಸಲಾಗುತ್ತದೆ.

ಭತ್ತದ ನಾಟಿಗೆ ಸಿದ್ಧತೆ:

ಅಚ್ಚುಕಟ್ಟು ಪ್ರದೇಶದಲ್ಲಿ ಬೋರ್‌ವಲ್‌ ಇರುವವರು ಈಗಾಗಲೇ ಭತ್ತದ ಸಸಿ ಮಾಡಿಕೊಂಡು ರೊಳ್ಳೆ ಹೊಡೆಯಲು ಕಾಯುತ್ತಿದ್ದರು. ಇನ್ನೂ ಕೆಲವರು ಭತ್ತದ ಸಸಿ ಮಡಿ ಮಾಡಿಕೊಳ್ಳಲು ಕೂಡ ನಾಲೆ ನೀರು ಎದುರು ನೋಡುತ್ತಿದ್ದರು. ಭದ್ರಾ ಡ್ಯಾಂಗೆ ಸಾಕಷ್ಟು ನೀರು ಹರಿದು ಬರುತ್ತಲೇ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಬೇಕು ಎಂದು ರೈತರು, ಶಾಸಕರು, ಜನಪ್ರತಿನಿಧಿಗಳು ಕೂಡ ಒತ್ತಡ ಹಾಕಿದ್ದರು. ಅಲ್ಪಾವಧಿ ಭತ್ತದ ಬೆಳೆ ಬೆಳೆಯಲು ಇತ್ತೀಚೆಗೆ ನಡೆದ ರೈತರು ಮತ್ತು ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದು, ರೈತರು ಈ ನಿಟ್ಟಿನಲ್ಲಿ ಬೆಳೆ ಬೆಳೆಯಲು ಮುಂದಾಗಿದ್ದಾರೆ.

-------

ಖಾಲಿಯಾಗಿದ್ದವು ಕೆರೆ


ನಗರದ ನೀರಿನ ಮೂಲವಾದ ಟಿವಿ ಸ್ಟೇಷನ್‌ ಮತ್ತು ಕುಂದುವಾಡ ಕೆರೆಗಳಲ್ಲಿ ನೀರು ಖಾಲಿಯಾಗಿ ಪೂರ್ಣ ಬತ್ತಿ ಹೋಗಿದ್ದವು. ಹೊಳೆ ತುಂಬಿ ಹರಿದಿದ್ದರಿಂದ ಸಮಸ್ಯೆ ಆಗಿರಲಿಲ್ಲ. ಅಲ್ಲಿಂದ ಇಡೀ ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತಿತ್ತು. ನಾಲೆಗೆ ನೀರು ಹರಿಸುವುದರಿಂದ ಈ ಎರಡೂ ಕೆರೆಗಳಿಗೆ ನೀರು ತುಂಬಿಸಿಕೊಳ್ಳಬಹುದಾಗಿದೆ. ಈಗ ನಗರಕ್ಕೆ ವಾರಕ್ಕೊಮ್ಮೆ ನೀರು ಕೊಡುತ್ತಿದ್ದು, ಈ ಕೆರೆಗಳು ತುಂಬಿದರೆ ಮೂರು ದಿನಕ್ಕೊಮ್ಮೆ ನೀರು ಕೊಡಬಹುದಾಗಿದೆ.

---

ಚಿತ್ರದುರ್ಗಕ್ಕೂ ನೀರು

ಚಿತ್ರದುರ್ಗಕ್ಕೆ ನೀರು ಪೂರೈಕೆ ಆಗುವ ಒಂದು ಮೂಲವಾದ ವಿವಿ ಸಾಗರದಲ್ಲೂ ನೀರು ಕಡಿಮೆ ಆಗಿದೆ. ಸೂಳೆಕೆರೆಗೆ ನಾಲೆ ನೀರು ತುಂಬಿಸಿಕೊಳ್ಳುವುದರಿಂದ ದುರ್ಗ ಸೇರಿ ಹೊಳಲ್ಕೆರೆ ಮಾರ್ಗದ ಹಲವು ಹಳ್ಳಿಗಳಿಗೆ ಕುಡಿವ ನೀರಿನ ತೊಂದರೆಯಿಲ್ಲ. ದಾವಣಗೆರೆ ಜಿಲ್ಲೆಯ ಚನ್ನಗಿರಿ, ಜಗಳೂರು ಪಟ್ಟಣಗಳಿಗೂ ಕುಡಿವ ನೀರು ಸಿಗಲಿದೆ.

---

ಭದ್ರಾ ಡ್ಯಾನಿಂದ ನಾಲೆಗೆ 2188 ಕ್ಯೂಸೆಕ್‌ ನೀರು ಹರಿಸಲಾಗಿದ್ದು, ಶುಕ್ರವಾರ ಬೆಳಗ್ಗೆ ಸೂಳೆಕೆರೆ ಆರ್‌2 ಚಾನಲ್‌ ತಲುಪಿದೆ. ರಾತ್ರಿ ವೇಳೆಗೆ ದಾವಣಗೆರೆ ತಲುಪಲಿದೆ.

- ಕೊಟ್ರೇಶ್‌, ಕಾರ್ಯನಿರ್ವಾಹಕ ಎಂಜಿನಿಯರ್‌, ಭದ್ರಾ ಎಂಜಿನಿಯರಿಂಗ್‌ ವಿಭಾಗ.

--

ಟಿವಿ ಸ್ಟೇಷನ್‌ ಮತ್ತು ಕುಂಡುವಾಡ ಕೆರೆ ಪೂರ್ಣ ಬತ್ತಿ ಹೋಗಿದ್ದವು. ಮಳೆಯೂ ಇರುವುದರಿಂದ ರೈತರಿಗೆ ಹೆಚ್ಚಿನ ನೀರಿನ ಅಗತ್ಯ ಇರುವುದಿಲ್ಲ. ಹಾಗಾಗಿ ಶನಿವಾರ ಮುಂಜಾನೆಯಿಂದಲೇ ಕೆರೆಗಳಿಗೆ ನೀರು ತುಂಬಿಸಿಕೊಳ್ಳುತ್ತೇವೆ.

- ಆರ್‌.ಪಿ. ಜಾಧವ್‌, ಕಾರ್ಯ ನಿರ್ವಾಹಕ ಎಂಜಿನಿಯರ್‌, ಮಹಾನಗರ ಪಾಲಿಕೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ