ಆ್ಯಪ್ನಗರ

ಕಾಂಗ್ರೆಸ್‌ ಪಾಪವೇ ಇನ್ನೂ ಪರಿಹಾರವಾಗಿಲ್ಲ, ಎಂಬಿ ಪಾಟೀಲ್‌ಗೆ ಸಿಟಿ ರವಿ ತಿರುಗೇಟು

ಕಾಂಗ್ರೆಸ್‌ ಪಕ್ಷ ನೆರೆ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳೋದಕ್ಕೆ ಮುಂದಾಗಿದೆ. ಇಂತಹ ಆಟ ಬಿಜೆಪಿ ಮುಂದೆ ನಡೆಯೋದಕ್ಕೆ ಸಾಧ್ಯವಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದರು.

Vijaya Karnataka 24 Sep 2019, 5:43 pm
ದಾವಣಗೆರೆ: “ಸಾಕಷ್ಟು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ನ ಪಾಪವೇ ಇನ್ನೂ ಪರಿಹಾರವಾಗಿಲ್ಲ, ಇನ್ನು ಅವರ ಶಾಪ ನಮಗೆ ಹೇಗೆ ತಟ್ಟುತ್ತದೆ,” ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಪ್ರಶ್ನಿಸಿದರು.
Vijaya Karnataka Web CT Ravi


‘ನೆರೆ ಸಂತ್ರಸ್ತರ ಶಾಪ ಬಿಜೆಪಿಗೆ ತಟ್ಟುತ್ತದೆ’ ಎಂಬ ಎಂ.ಬಿ. ಪಾಟೀಲ್‌ ಹೇಳಿಕೆಗೆ ಮಂಗಳವಾರ ಡಿಸಿ ಕಚೇರಿ ಬಳಿ ಪ್ರತಿಕ್ರಿಯಿಸಿದ ಅವರು, “ರೈತರು ಹಾಗೂ ನೊಂದವರಿಗೆ ರಾಜ್ಯ ಸರಕಾರ ಸೂಕ್ತವಾಗಿ ಸ್ಪಂದಿಸಿದೆ. ಸಂತ್ರಸ್ತರ ಶಾಪ ತಟ್ಟುತ್ತೆ ಅಂತಾರೆ. ಆದರೆ ಹಿಂದಿನ ಶಾಪದಿಂದ ಕಾಂಗ್ರೆಸ್‌ಗೆ ಇನ್ನು ವಿಮೋಚನೆ ಆಗಿಲ್ಲ. ಹಿಂಗೆ ಮಾತಾಡಿದವರು ಏನಾದ್ರು ಅಂತ ಗೊತ್ತಿದೆ. ತಮ್ಮದೇ ಕ್ಷೇತ್ರದಲ್ಲಿ ಗೆಲ್ಲಲಾಗದೆ ಬೇರೆ ಕ್ಷೇತ್ರದಲ್ಲಿ ಪರದಾಡಿ ಗೆದ್ದರು. ನಮಗೆ ಶಾಪ ಕೊಡಲು ಸಾಧ್ಯವಿಲ್ಲ,” ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.

ನೆರೆ ಪರಿಹಾರಕ್ಕಾಗಿ ಬೆಳಗಾವಿಯಲ್ಲಿ ಕಾಂಗ್ರೆಸ್‌ ಪ್ರತಿಭಟನೆಗೆ ಮುಂದಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜಕೀಯದಲ್ಲಿ ಪರಸ್ಪರ ಕೆಸರೆರಚಾಟದಿಂದ ಪ್ರಯೋಜನವಿಲ್ಲ. ಪರಿಹಾರದ ಅವಶ್ಯಕತೆಯಿದೆ. ಆದರೆ ಕಾಂಗ್ರೆಸ್‌ ಪಕ್ಷ ನೆರೆ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳೋದಕ್ಕೆ ಮುಂದಾಗಿದೆ. ಇಂಥಹ ಆಟ ಬಿಜೆಪಿ ಮುಂದೆ ನಡೆಯೋದಕ್ಕೆ ಸಾಧ್ಯವಿಲ್ಲ ಎಂದರು.

“ಈ ಹಿಂದೆ ಇದ್ದ ಸಿದ್ದರಾಮಯ್ಯ ಸರಕಾರ ಸಮಾಜ ಒಡೆಯುವ ಕೆಲಸ ಮಾಡಿದರೂ ಅದು ಸಾಧ್ಯವಾಗಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಒಂದೊಂದು ಸ್ಥಾನ ಗೆಲ್ಲಲು ತಿಣಕಾಡಬೇಕಾಯಿತು. ಈಗ ನೆರೆ ವಿಚಾರದಲ್ಲಿ ಕಾಂಗ್ರೆಸ್‌ ರಾಜಕೀಯ ಮಾಡುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯರಿಗೆ ದೇವರು ಎಲ್ಲ ಸಾಮರ್ಥ್ಯ‌ ಕೊಟ್ಟಿದ್ದಾನೆ. ಅವರು 10 ಗ್ರಾಮ ದತ್ತು ತೆಗದುಕೊಳ್ಳಲಿ. ಬಿಜೆಪಿ 15 ತೆಗೆದುಕೊಳ್ಳುತ್ತದೆ. ಜೆಡಿಎಸ್‌ ಸುಮ್ಮನಿರದೆ 5 ಗ್ರಾಮ ದತ್ತು ತೆಗೆದುಕೊಳ್ಳುತ್ತದೆ. ಹೀಗೆ ತೆಗೆದುಕೊಂಡಾಗ ಸ್ಪರ್ಧೆ ಬೆಳೆಯುತ್ತದೆ. ಇದರಿಂದ ನೆರೆ ಸಂತ್ರಸ್ತರಿಗೆ ಉಪಯೋಗವಾಗುತ್ತದೆ,” ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಮಾಸ್‌ ಪಾರ್ಟಿ ಆಗಿದ್ದು, ಅಧಿಕಾರದಲ್ಲಿ ಇಲ್ಲದಿದ್ದಾಗಲೇ ಚುನಾವಣೆಗೆ ಹೆದರಿಲ್ಲ. ಈಗ ಹೆದರುತ್ತೀವಾ? ಎಂದು ಭರವಸೆ ವ್ಯಕ್ತಪಡಿಸಿದ ಅವರು, “ಎಲ್ಲ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ. ಟಿಕೆಟ್‌ ಬಗ್ಗೆ ಹೈಕಮಾಂಡ್‌ ನಿರ್ಧರಿಸುತ್ತದೆ. ರಾಜೀನಾಮೆ ನೀಡಿದ ಶಾಸಕರಿಂದ ಬಿಜೆಪಿಗೆ ಅನುಕೂಲವಾಗಿದೆ. ಅವರ ಬಗ್ಗೆ ಕೇಂದ್ರದ ವರಿಷ್ಠರು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ. ಅನರ್ಹ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ,” ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಸಾ.ರಾ ಮಹೇಶ್‌, ಎಚ್‌.ವಿಶ್ವನಾಥ್‌ ಪರಸ್ಪರ ಕಚ್ಚಾಟಕ್ಕೆ ಪ್ರತಿಕ್ರಿಯಿಸಿದ ಸಚಿವರು, “ಇಬ್ಬರು ಅಶ್ಲೀಲ ಪದಗಳನ್ನು ಬಳಸಬಾರದಿತ್ತು. ಇಬ್ಬರು ಮಾತನಾಡಿದ್ದು ಮೈಸೂರು ಸಂಸ್ಕೃತಿಗೆ ತಕ್ಕದ್ದಲ್ಲ. ಇದರಿಂದ ಸಭ್ಯ ರಾಜಕಾರಣಿಗಳಿಗೆ ಕಸಿವಿಸಿಯಾಗುತ್ತಿದೆ. ನಾನು ಅವರಿಬ್ಬರಿಗಿಂತ ಚಿಕ್ಕವನು. ಸಾ.ರಾ. ಹಾಗೂ ವಿಶ್ವನಾಥ್‌ ಮೈಸೂರು ಸಂಸ್ಕೃತಿಗೆ ತಕ್ಕಂತೆ ಮಾತನಾಡಬೇಕಿತ್ತು ಎಂದರು.

ಇನ್ನು ಜಿಟಿಡಿ ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ಮಾತನಾಡಿದ ಸಚಿವರು, “ಜಿ.ಟಿ. ದೇವೇಗೌಡ ಬಿಜೆಪಿ ಸೇರುವ ಬಗ್ಗೆ ಅಸ್ಪೃಶ್ಯತೆ ಇಲ್ಲ. ಕೇವಲ ಜಿಟಿಡಿ ಮಾತ್ರವಲ್ಲ ಸಿದ್ದರಾಮಯ್ಯ, ಕುಮಾರಸ್ವಾಮಿ, ಯಾರು ಬೇಕಾದರೂ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಬರಹುದು,” ಎಂದರು.

ಎಚ್‌ಡಿಕೆ ಹಾಗೂ ಸಿದ್ದರಾಮಯ್ಯ ಹದ್ದು ಗಿಣಿ ಸಮರ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, “ರಾಜಕೀಯ ಎಂಬುದು ಸೋಡ ಗ್ಯಾಸ್‌ ಇದ್ದಂಗೆ. ಅದು ಟುಸ್‌ ಎಂದು ಸುಮ್ಮನಾಗುತ್ತದೆ. ಯಾರೋ ಹದ್ದು ಅಂತ ಎಚ್‌ಡಿಕೆ ಮಾರ್ಮಿಕವಾಗಿ ಹೇಳಿದ್ದಾರೆ. ಹದ್ದು ಯಾರಂತ ನಾನೇನು ಹೇಳಲ್ಲ. ಅವರು ಹಾಗೇ ಕುಕ್ಕಿಸಿಕೊಳ್ಳುತ್ತಿರಲಿ. ನಾವು ಜನರ ಪರವಾಗಿ ಕೆಲಸ ಮಾಡಿ ಮುಂದೆ ಹೋಗುತ್ತೇವೆ,” ಎಂದು ಹೇಳಿದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ