ದಾವಣಗೆರೆ: ಮಹಾಮಾರಿಗೆ ಬಲಿಯಾದ ಕೋವಿಡ್‌ ವಾರಿಯರ್‌ ಮುಕುಂದಪ್ಪ!

Vijaya Karnataka Web 24 Apr 2021, 10:29 pm
ದಾವಣಗೆರೆ: ಕೊರೊನಾ ಬಂದಾಗ ದಾವಣಗೆರೆಯಲ್ಲಿ ಕಳೆದ ವರ್ಷ ಜಿಲ್ಲಾಡಳಿತಕ್ಕೆ ಸಾಕಷ್ಟು ತಲೆ ನೋವು ಬಂದಿತ್ತು. ಆಗ ಪ್ರತಿ ಪ್ರದೇಶಗಳಲ್ಲಿಯೂ ಹೋಗಿ ಸೀಲ್ ಡೌನ್ ಮಾಡಬೇಕಿತ್ತು. ಆಗ ಥಟ್ಟನೆ ನೆನಪಿಗೆ ಬಂದದ್ದು ಮುಕುಂದಪ್ಪ. ಪಾಲಿಕೆಯಲ್ಲಿ ಕಿರಿಯ ಎಂಜಿನಿಯರ್ ಆಗಿದ್ದ ಮುಕುಂದಪ್ಪ ಅವರು ಬರೋಬ್ಬರಿ 150 ಪ್ರದೇಶಗಳಲ್ಲಿ ಸೀಲ್ ಡೌನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೊರೊನಾ ವಾರಿಯರ್ಸ್. ಆದ್ರೆ, ವಿಪರ್ಯಾಸವೆಂದರೆ ಅವರೇ ಕೊರೊನಾ ಸೋಂಕಿಗೆ ತುತ್ತಾಗಿ ಅಸುನೀಗಿದ್ದಾರೆ.

ಛಲವಾದಿ ಕೇರಿಯಲ್ಲಿ ವಾಸವಿದ್ದ 50 ವರ್ಷದ ಮುಕುಂದಪ್ಪ ಮೃತಪಟ್ಟ ಕಿರಿಯ ಅಭಿಯಂತರ. ಕಳೆದ ಹನ್ನೆರಡು ದಿನಗಳ ಹಿಂದೆ ಅನಾರೋಗ್ಯ ಹಿನ್ನೆಲೆಯಲ್ಲಿ ಬಾಪೂಜಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಆಗಿನಿಂದಲೂ ಪಾಲಿಕೆಯ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ಮುತುವರ್ಜಿ ವಹಿಸಿದ್ದರು. ಆರೋಗ್ಯದ ಬಗ್ಗೆ ಆಗಾಗ್ಗೆ ವಿಚಾರಿಸುತ್ತಿದ್ದರು. ಒಂದು ವಾರದ ಹಿಂದೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಬಳಿಕ ಚಿಕಿತ್ಸೆಗೂ ಸ್ಪಂದಿಸುತ್ತಿದ್ದರು. ಆದ್ರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಮುಕುಂದಪ್ಪ ಕೊನೆಯುಸಿರೆಳೆದಿದ್ದಾರೆ.

ಕಳೆದ ವರ್ಷ ದಾವಣಗೆರೆ ನಗರದಲ್ಲಿ ಆರ್ಭಟಿಸಿದ್ದ ಕೊರೊನಾ ನಿಯಂತ್ರಣಕ್ಕೆ ಹಗಲಿರುಳು ಹೋರಾಟ ಮಾಡಿದ್ದರು. ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡಿದ್ದ ಮುಕುಂದಪ್ಪ ಜನರಲ್ಲಿ ಜಾಗೃತಿ ಮೂಡಿಸುವುದರಿಂದ ಹಿಡಿದು ಸೀಲ್ ಡೌನ್ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಮಾತ್ರವಲ್ಲ, ಜನರ ಪ್ರೀತಿಯನ್ನೂ ಸಂಪಾದಿಸಿದ್ದರು. ಕೆಲ ಪ್ರದೇಶಗಳಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಜನರ ಮನವೊಲಿಸಿ ಕೊರೊನಾ ಇನ್ನು ಹೆಚ್ಚಾಗಿ ಹರಡದಂತೆ ಹೋರಾಟ ಮಾಡಿದವರಲ್ಲಿ ಇವರೂ ಒಬ್ಬರು ಎಂದೇ ಗುರುತಿಸಿಕೊಂಡಿದ್ದರು.

150 ಪ್ರದೇಶಗಳಲ್ಲಿ ಸೀಲ್ ಡೌನ್ ಮಾಡುವುದಕ್ಕೆ ಸಂಬಂಧಿಸಿದ ಎಲ್ಲಾ ಕೆಲಸ ಮಾಡುವ ಮೂಲಕ ಜನಮನ್ನಣೆ ಗಳಿಸಿದ್ದ ಮುಕುಂದಪ್ಪ ಪ್ರತಿಯೊಬ್ಬರಿಗೂ ಆತ್ಮೀಯರಾಗಿದ್ದರು. ಅಚ್ಚುಮೆಚ್ಚಿನ ಜ್ಯೂನಿಯರ್ ಎಂಜಿನಿಯರ್ ಅಂತಾನೇ ಖ್ಯಾತಿ ಗಳಿಸಿದ್ದರು.
Loading ...