ಹೊನ್ನಾಳಿ: ಬಗರ್ಹುಕುಂ ಸಾಗುವಳಿ ಹಕ್ಕುಪತ್ರ ಕೊಡಿಸಲು ಶ್ರಮಿಸಿದ ಶಾಸಕ ಡಿ.ಜಿ. ಶಾಂತನಗೌಡರನ್ನು ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ವಜ್ರದುಂಗುರ ತೊಡಿಸಿ ಗ್ರಾಮಸ್ಥರು ಸನ್ಮಾನಿಸಿದರು.
ಗ್ರಾಮದ ಯುವಕರು ಹಣವನ್ನು ಸಂಗ್ರಹಿಸಿ ಶಾಸಕರಿಗೆ 1.5 ಲಕ್ಷ ರೂ. ಮೌಲ್ಯದ ವಜ್ರದುಂಗುರ ಕೊಡುಗೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಬೆನಕನಹಳ್ಳಿ ಗ್ರಾಪಂ ಆಡಳಿತ ಮಂಡಳಿ ಸಹ ಶಾಸಕರಿಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸಿತು.
ಶಾಸಕರಿಗೆ ಈ ಕೊಡುಗೆ ನೀಡಲು ಬಗರ್ಹುಕುಂ ಸಾಗುವಳಿದಾರರು ಸೇರಿದಂತೆ ಯಾರಿಂದಲೂ ಹಣ ಪಡೆದಿಲ್ಲ. ಯುವಕರೇ ಹಣ ಸಂಗ್ರಹಿಸಿ ವಜ್ರದುಂಗುರ ಕೊಡುಗೆಯಾಗಿ ನೀಡಿದ್ದೇವೆ ಎಂದು ಗ್ರಾಮದ ಯುವಕ ಎಚ್.ಜಿ. ಗಣೇಶ್ ಹೇಳಿದ್ದಾರೆ.
ಗ್ರಾಮದ ಯುವಕರ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಡಿ.ಜಿ. ಶಾಂತನಗೌಡ, ಬಗರ್ಹುಕುಂ ಸಾಗುವಳಿದಾರರಿಗೆ ಸಾಗುವಳಿ ಹಕ್ಕುಪತ್ರ ನೀಡಿರುವುದರಲ್ಲಿ ತಮ್ಮದೇನೂ ವಿಶೇಷ ಶ್ರಮವಿಲ್ಲ. ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರ ಬದ್ಧತೆಯ ಪರಿಣಾಮವಾಗಿ ಇಂದು ಬಡವರಿಗೆ ಜಮೀನು ಲಭಿಸುವಂತಾಗಿದೆ ಎಂದು ಹೇಳಿದರು.
ಹೊನ್ನಾಳಿ ತಹಸೀಲ್ದಾರ್ ಎನ್.ಜೆ. ನಾಗರಾಜ್, ಬಗರ್ಹುಕುಂ ಸಮಿತಿಯ ಕ್ಯಾಸಿನಕೆರೆ ಶೇಖರಪ್ಪ, ಮುಖಂಡರಾದ ಎಚ್.ಜಿ. ರುದ್ರೇಶ್, ಟಿ.ಜಿ. ಮಲ್ಲೇಶಪ್ಪ, ಸಾಸ್ವೆಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ. ಗದ್ದಿಗೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಸ್. ಸುರೇಂದ್ರ, ಕಾಂಗ್ರೆಸ್ ಮುಖಂಡ ಡಿ.ಎಸ್. ಪ್ರದೀಪ್, ಗ್ರಾಪಂ ಅಧ್ಯಕ್ಷೆ ಕವಿತಾ ಜಗದೀಶ್ ಇತರರು ಇದ್ದರು.