ಆ್ಯಪ್ನಗರ

ಸಂವಿಧಾನ ಓದಿನಿಂದ ಕಾನೂನು ಜ್ಞಾನ ವಿಸ್ತಾರ

ಸಂವಿಧಾನ ನಮ್ಮ ಹಿರಿಯರು ಮಾಡಿರುವ ಚೌಕಟ್ಟು, ನಿಯಮಗಳ ಒಳಗೊಂಡಿರುವ ಉತ್ತಮವಾದ ವ್ಯವಸ್ಥೆಯಾಗಿದ್ದು, ನಾವು ಇದನ್ನು ಪ್ರತಿದಿನ ಓದಿ ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಕುಲಕರ್ಣಿ ಅಂಬಾದಾಸ್‌ ತಿಳಿಸಿದರು.

Vijaya Karnataka 23 Jul 2019, 5:00 am
ದಾವಣಗೆರೆ : ಸಂವಿಧಾನ ನಮ್ಮ ಹಿರಿಯರು ಮಾಡಿರುವ ಚೌಕಟ್ಟು, ನಿಯಮಗಳ ಒಳಗೊಂಡಿರುವ ಉತ್ತಮವಾದ ವ್ಯವಸ್ಥೆಯಾಗಿದ್ದು, ನಾವು ಇದನ್ನು ಪ್ರತಿದಿನ ಓದಿ ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಕುಲಕರ್ಣಿ ಅಂಬಾದಾಸ್‌ ತಿಳಿಸಿದರು.
Vijaya Karnataka Web extension of legal knowledge from the constitution
ಸಂವಿಧಾನ ಓದಿನಿಂದ ಕಾನೂನು ಜ್ಞಾನ ವಿಸ್ತಾರ


ನಗರದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ (ಎಂಡಿಆರ್‌) ಕಟ್ಟಡದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಪ್ಯಾನಲ್‌ ವಕೀಲರುಗಳಿಗೆ ಎರಡು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ತರಬೇತಿ ಕಾರ್ಯಕ್ರಮ ಪ್ಯಾನಲ್‌ ವಕೀಲರುಗಳಿಗೆ ಒಂದು ಉತ್ತಮ ಅವಕಾಶವಾಗಿದ್ದು, ಪ್ರತಿ ಪ್ಯಾನಲ್‌ ವಕೀಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು. ಆಗ ಮಾತ್ರ ನೀವು ಸಾಮಾನ್ಯ ಜನರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ ಎಂದರು.

ವಾಸ್ತವಿಕ ವರದಿ ನೀಡಿ:
2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಸ್‌.ನಾಗಶ್ರೀ ಮಾತನಾಡಿ, ಪ್ರತಿಯೊಬ್ಬ ಪ್ಯಾನಲ್‌ ವಕೀಲರು ಈ ತರಬೇತಿ ಮಹತ್ವವನ್ನು ತಿಳಿಯಬೇಕು. ಪ್ರಸ್ತುತ ದಿನಗಳಲ್ಲಿ ಆರ್ಥಿಕವಾಗಿ ಹಿಂದುಳಿದವರು ಸೇರಿ ಸಾಮಾನ್ಯ ಜನತೆಗೆ ನ್ಯಾಯ ಸಿಗದೇ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಈ ರೀತಿಯ ಅನ್ಯಾಯಗಳನ್ನು ವಕೀಲರುಗಳಾದ ನಾವು ತಪ್ಪಿಸಬೇಕು. ವಕೀಲರು ಯಾವುದೇ ಪ್ರಕರಣದ ಬಗ್ಗೆ ಖುದ್ದಾಗಿ ಹೋಗಿ ಆರೋಪಿಗಳಿಂದ ಮಾಹಿತಿ ಪಡೆದು ನ್ಯಾಯಾಲಯಕ್ಕೆ ವಾಸ್ತವಿಕ ವರದಿ ನೀಡಿದಾಗ ಆರೋಪಿಯನ್ನು ಅಪರಾಧ ಮುಕ್ತರನ್ನಾಗಿ ಮಾಡಲು ಸಾಧ್ಯವಾಗುತ್ತದೆ ಎಂದರು.

ಕೌಟುಂಬಿಕ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಬಿ.ಎಲ್‌. ಜಿನರಾಲ್ಕರ್‌ ಮಾತನಾಡಿ, ಯಾವುದೇ ವೃತ್ತಿಯಲ್ಲಿ ಹೆಚ್ಚಿನ ಕಾರ್ಯದಕ್ಷ ತೆಗೆ ತರಬೇತಿಗಳು ಅಗತ್ಯವಾಗಿವೆ. ಕಾನೂನು ವಿಷಯ ಮತ್ತು ಸಂವಿಧಾನದ ಬಗ್ಗೆ ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳಲು ಈ ರೀತಿಯ ಕಾರ್ಯಾಗಾರ ಹೆಚ್ಚು ಸಹಾಯಕ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆಂಗಬಾಲಯ್ಯ, ಹಿರಿಯ ಸಿವಿಲ್‌ ನ್ಯಾಯಾಧೀಶ ಪ್ರಭು ಎನ್‌.ಬಡಿಗೇರ್‌, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್‌.ಎಚ್‌. ಅರುಣ…ಕುಮಾರ್‌ ಸೇರಿ ಜಿಲ್ಲೆಯ ವಕೀಲರಗಳು ಉಪಸ್ಥಿತರಿದ್ದರು.

1 ರೂಪಾಯಿ ಪಡೆದು ಕೇಸ್‌
ಎರಡು ದಿನಗಳ ಈ ತರಬೇತಿ ಕಾರ್ಯದಲ್ಲಿ 10 ಸೆಷನ್ಸ್‌ಗಳಿದ್ದು, 10 ಜನ ಹಿರಿಯ ವಕೀಲರಿಂದ ತರಬೇತಿ ನೀಡಲಾಗುವುದು. ಕುಲಭೂಷಣ್‌ ಜಾಧವ್‌ ಅವರ ಪ್ರಕರಣದಲ್ಲಿ ಹರೀಶ್‌ ಸಾಳ್ವೆ ಅವರು ಕೇವಲ ಒಂದು ರೂಪಾಯಿ ಪಡೆದು ಕೇಸ್‌ ನಡೆಸಿದ್ದಾರೆ. ಈ ವಿಷಯ ವಕೀಲರಿಗೆ ಕೀರ್ತಿ ತರುವಂತಹದ್ದು. ನಾವುಗಳೂ ಸಹ ಈ ರೀತಿಯ ಕಾರ್ಯ ನಿರ್ವಹಣೆಯಲ್ಲಿ ತೊಡಗಿಕೊಂಡು ಜನರಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್‌.ಟಿ. ಮಂಜುನಾಥ್‌ ತಿಳಿಸಿದರು.

ಕೇಸುಗಳ ಸ್ಟಡಿ ಮಾಡಿ
ಪ್ಯಾನಲ್‌ ವಕೀಲರು ಎವಿಡೆನ್ಸ್‌ , ಸಿವಿಲ್‌ ಮತ್ತು ಕ್ರಿಮಿನಲ್‌ ಪ್ರಕರಣಗಳ ಬಗ್ಗೆ ಹೆಚ್ಚು ಮಾಹಿತಿ ಹೊಂದಬೇಕು. ಪ್ರತಿದಿನ ಒಂದು ಪ್ರಕರಣದ ಬಗ್ಗೆ ಹಿರಿಯ ವಕೀಲರ ಬಳಿ ಮಾಹಿತಿ ಪಡೆದುಕೊಳ್ಳುವುದರಿಂದ ನಿಮ್ಮ ವಿಷಯದ ತಿಳುವಳಿಕೆ ಮತ್ತು ಜ್ಞಾನ ಹೆಚ್ಚುತ್ತದೆ. ನಿರಂತರ ಅಧ್ಯಯನದಿಂದ 5 ವರ್ಷಗಳಲ್ಲಿ ನೀವು ಉತ್ತಮ ವಕೀಲರಾಗಲು ಸಾಧ್ಯವಾಗುತ್ತದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ ಎಂದು ನ್ಯಾ.ಜಿ.ಕುಲಕರ್ಣಿ ಅಂಬಾದಾಸ್‌ ಸಲಹೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ