ಆ್ಯಪ್ನಗರ

ಉತ್ತರಾ ಮಳೆಗೆ ತತ್ತರಿಸಿದ ದಾವಣಗೆರೆ

ಕಳೆದ ಎರಡು ದಶಕದಲ್ಲೇ ಕಾಣದಂಥ ಮಹಾ ಮಳೆಗೆ ಭಾನುವಾರ ರಾತ್ರಿ ದಾವಣಗೆರೆ ನಗರ ಅಕ್ಷರಶಃ ತತ್ತರಿಸಿ ಹೋಗಿ ಇಡೀ ಜನಜೀವನ ಅಸ್ತವ್ಯಸ್ತಗೊಂಡಿತು.

Vijaya Karnataka 26 Sep 2017, 7:53 am

ದಾವಣಗೆರೆ: ಕಳೆದ ಎರಡು ದಶಕದಲ್ಲೇ ಕಾಣದಂಥ ಮಹಾ ಮಳೆಗೆ ಭಾನುವಾರ ರಾತ್ರಿ ದಾವಣಗೆರೆ ನಗರ ಅಕ್ಷರಶಃ ತತ್ತರಿಸಿ ಹೋಗಿ ಇಡೀ ಜನಜೀವನ ಅಸ್ತವ್ಯಸ್ತಗೊಂಡಿತು. ಗುಡುಗು, ಸಿಡಿಲು ಸಹಿತ ಆರ್ಭಟಿಸಿದ ಮಾಯದಂಥ ಮಳೆಗೆ ನಗರ ಒಂದರಲ್ಲಿಯೇ ಒಂದು ಸಾವಿರ ಮನೆಗಳಿಗೆ ಹಾನಿಯಾಗಿ, ಮೂರು ಸಾವಿರಕ್ಕೂ ಮಿಕ್ಕಿ ನಿರಾಶ್ರಿತರಾಗಿದ್ದಾರೆ. ನೀಲಮ್ಮನ ತೋಟದಲ್ಲಿ ಒಂದು ಹಸು ಸತ್ತು, ಸೂರುಗಳು ಕವುಚಿ ಅನೇಕ ಮಂದಿ ಗಾಯಗೊಂಡಿದ್ದಾರೆ. ಸಾವಿರಾರು ಮನೆಗಳಿಗೆ ನುಗ್ಗಿದ ನೀರು ಬದುಕನ್ನು ಆಪೋಶನ ತೆಗೆದುಕೊಂಡಿದೆ.

ನಿರಂತರ ಅಬ್ಬರ:

ಸಂಜೆ 7 ಗಂಟೆ ವೇಳೆಗೆ ಸಣ್ಣದಾಗಿ ಶುರುವಾದ ಮಳೆ ನಿಧಾನವಾಗಿ ಟೇಕ್‌ ಆಫ್‌ ಆಗಿ ಸುಮಾರು ಐದು ತಾಸು ಗುಡುಗು ಸಿಡಿಲು ಮಿಂಚುಗಳೊಂದಿಗೆ ನಿರಂತರ ಅಬ್ಬರಿಸಿ ಸುರಿಯಿತು. ಕನಿಷ್ಠ 80 ರಿಂದ ಗರಿಷ್ಠ 162 ಮಿಮೀವರೆಗೂ ಮಳೆ ಸುರಿದಿದೆ. ಕೇವಲ ತಗ್ಗು, ಕೊಳಚೆ ಪ್ರದೇಶ ಅಷ್ಟೇ ಅಲ್ಲ, ಪ್ರತಿಷ್ಠಿತ ಬಡಾವಣೆಗಳ ಮನೆ, ಸೆಲ್ಲರ್‌ಗಳಿಗೂ ನೀರು ನುಗ್ಗಿದ್ದು ಸ್ಮಾರ್ಟ್‌ ಸಿಟಿ ಆಗಲು ಹೊರಟಿರುವ ದಾವಣಗೆರೆಯ ಬಣ್ಣ ಬಯಲಾಗಿದೆ. ನಿರಾಶ್ರಿತರು ಟೈರ್‌ಗೆ ಬೆಂಕಿ ಹಾಕಿ ನಾಲ್ಕೈದು ಬಡಾವಣೆಗಳಲ್ಲಿ ಪ್ರತಿಭಟನೆ ನಡೆಸಿದ ಘಟನೆಯೂ ನಡೆದಿದೆ.

ನೂರಾರು ಮನೆ ಕುಸಿತ:

ಹಾನಿಗೀಡಾದ ಸಾವಿರ ಮನೆಗಳಲ್ಲಿ ಶೇ. 75 ರಷ್ಟು ಮನೆಗಳಿಗೆ ಹೆಚ್ಚಿನ ಹಾನಿಯಾಗಿದೆ. ಶೇ. 25 ರಷ್ಟು ಮನೆಗಳು ಸಂಪೂರ್ಣ ಕುಸಿದು ಜನ ಬೀದಿಗೆ ಬಿದ್ದಿದ್ದಾರೆ. ಇನ್ನುಳಿದ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಭರತ್‌ ಕಾಲೊನಿಯಲ್ಲಿ ಸುಮಾರು 50 ಮನೆಗಳು ಸಂಪೂರ್ಣ ಕುಸಿದಿವೆ. ಶಿವನಗರ, ಎಸ್‌ಪಿಎಸ್‌ ನಗರ, ಅಜಾದ್‌ನಗರ, ಚಿಕ್ಕನಹಳ್ಳಿ, ನೀಲಮ್ಮನ ತೋಟ, ಶೇಖರಪ್ಪ ನಗರದಲ್ಲಿ ನೂರಾರು ಮನೆಗಳ ಗೋಡೆಗಳು ಕುಸಿದು ಹಾನಿಯಾಗಿದೆ. ಈ ಎಲ್ಲ ಬಡಾವಣೆಗಳ ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದು ತಾತ್ಕಾಲಿಕ ನೆರವು ಕಲ್ಪಿಸಲಾಗಿದೆ.

ಗಂಜಿಕೇಂದ್ರ:

ನಗರದ ಪಿಬಿ ರಸ್ತೆ ಬದಿಯ ನೀಲಮ್ಮನ ತೋಟದಲ್ಲಿ 67 ಕಚ್ಚಾ ಮನೆಗಳು ಮಾಡು ಸಮೇತ ಸಂಪೂರ್ಣ ಕುಸಿದಿದ್ದು ಸುಮಾರು 230 ಮಂದಿ ನಿರಾಶ್ರಿತರಾಗಿದ್ದಾರೆ. ಚಿಕ್ಕನಹಳ್ಳಿಯಲ್ಲಿ 38 ಮನೆಗಳಿಗೆ ಪೂರ್ಣ ಹಾನಿಯಾಗಿದ್ದು ನಿವಾಸಿಗಳನ್ನು ಇಲ್ಲಿನ ಸರಕಾರಿ ಶಾಲೆಯಲ್ಲಿ ತೆರೆದಿರುವ ತಾತ್ಕಾಲಿಕ ಗಂಜಿಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಕೊಚ್ಚಿ ಹೋದ ಬದುಕು:

ಮಳೆಯ ಆರ್ಭಟ ಎಷ್ಟು ಜೋರಿತ್ತೆಂದರೆ ಕೇವಲ ತಗ್ಗು, ಕೊಳಚೆ ಪ್ರದೇಶ ಅಷ್ಟೇ ಅಲ್ಲ ಅನೇಕ ಬಡಾವಣೆಗಳು ತತ್ತರಿಸಿವೆ. ಇಲ್ಲಿನ ಎಸ್‌ಪಿಎಸ್‌ ನಗರದ ಬಿ ಹಂತದ ಸುಮಾರು 230 ಮನೆಗಳಿಗೆ ನೀರು ನುಗ್ಗಿದೆ. ಕೂಡಿಟ್ಟ ಹಣ ಸೇರಿ ದಿನಸಿ, ಆಹಾರ ಪದಾರ್ಥ, ಬಟ್ಟೆ, ಪಾತ್ರೆ ಪಗಡೆ ತೋಯ್ದು ಹೋದರೆ, ಕೆಲವು ವಸ್ತುಗಳು ಕೊಚ್ಚಿಕೊಂಡು ಹೋಗಿವೆ. ನೀಲಮ್ಮನ ತೋಟದಲ್ಲಿ 67 ಮನೆ, ಶಿವನಗರ, ಭರತ್‌ಕಾಲೊನಿ, ಶೇಖರಪ್ಪ ನಗರದಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿ ಮನೆ ಬಳಕೆಯ ಎಲ್ಲ ವಸ್ತುಗಳು ನೀರು ಪಾಲಾಗಿವೆ. ಬೆಳ್ಳಂಬೆಳಗ್ಗೆ 'ವಿಜಯ ಕರ್ನಾಟಕ' ಈ ಬಡಾವಣೆಗಳಿಗೆ ಭೇಟಿ ನೀಡಿದಾಗ ಮನೆಯಲ್ಲಿ ತೋಯ್ದು ಹೋದ ವಸ್ತುಗಳ ತೋರಿಸುತ್ತಾ ನಿವಾಸಿಗಳು ಕಣ್ಣಲ್ಲಿ ನೀರು ತುಂಬಿಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಷ್ಠಿತ ಬಡಾವಣೆಗಳಿಗೂ ನೀರು

ಭಾನುವಾರದ ಮಳೆ ಇಡೀ ನಗರವನ್ನೇ ಅಲ್ಲಾಡಿಸಿದೆ. ಒಂದೆಡೆ ಧೋ ಮಳೆ, ಇನ್ನೊಂದೆಡೆ ಕರೆಂಟ್‌ ಇಲ್ಲದೆ ಕತ್ತಲ ರಾತ್ರಿಯಲ್ಲಿ ಅರ್ಧಕ್ಕಿಂತ ಹೆಚ್ಚು ದಾವಣಗೆರೆ ನಿದೆÜ್ದಯನ್ನೇ ಕಳೆದುಕೊಂಡಿತ್ತು. ಮನೆ, ಕಟ್ಟಡಗಳಿಗೆ ನುಗ್ಗಿದ ನೀರನ್ನು ಜನತೆ ಬೆಳಗಿನವರೆಗೂ ಹೊರಗೆ ಹಾಕುವಂತಾಗಿತ್ತು.

ದೇವ ಲೋಕದಂಥ ಮಳೆಗೆ ಕೇವಲ ತಗ್ಗು ಪ್ರದೇಶ ಅಷ್ಟೇ ಅಲ್ಲ, ಪ್ರತಿಷ್ಠಿತ ಬಡಾವಣೆಗಳೂ ತತ್ತರಿಸಿವೆ. ವಿದ್ಯಾನಗರ, ತರಳಬಾಳು ಬಡಾವಣೆ, ನಿಜಲಿಂಗಪ್ಪ ಬಡಾವಣೆ, ಸಿದ್ದೇಶ್ವರ ನಗರ, ಸರಸ್ವತಿ ನಗರ, ಜಯನಗರ ಬಡಾವಣೆಗಳಲ್ಲೂ ಮನೆಗಳು, ಸೆಲ್ಲರ್‌ಗಳಿಗೆ ನೀರು ನುಗ್ಗಿತ್ತು.

ವಿದ್ಯಾನಗರ ತರಳಬಾಳು ಬಡಾವಣೆಯ ಏಳನೇ ಕ್ರಾಸ್‌ ಮಾಗನೂರು ಬಸಪ್ಪ ಶಾಲೆಯ ಪಕ್ಕದಲ್ಲಿ ಹತ್ತಕ್ಕಿಂತ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿ ಬಹುತೇಕ ಮನೆಗಳಲ್ಲಿ ಸೆಲ್ಲರ್‌ಗಳಿದ್ದು ಇಲ್ಲಿಗೂ ನೀರು ನುಗ್ಗಿದೆ. ನಿಟುವಳ್ಳಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬಳಿ ಹಾದು ಹೋಗುವ ರಾಜಕಾಲುವೆ ಉಕ್ಕಿ ಹರಿದು ನೀರು ರಸ್ತೆಗೆ ನುಗ್ಗಿತು. ಸಿದ್ದೇಶ್ವರ ಬಡಾವಣೆಯ ಕಲ್ಪತರು ಶಾಲೆ, ಈ ರಸ್ತೆಯಲ್ಲಿ ಬರುವ ಹತ್ತಾರು ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ. ಎಸ್‌ ಎಸ್‌ ಬಡಾವಣೆ, ಪಿಸಾಳೆ ಕಾಂಪೌಂಡ್‌, ಎಂಸಿಸಿ ಎ ಬ್ಲಾಕ್‌ನ ಕೆಲ ಮನೆ, ಕಟ್ಟಡ, ಪಿಬಿ ರಸ್ತೆಯ ಭರತ್‌ ಹೋಟೆಲ್‌, ನಂದಿ ಪೆಟ್ರೋಲ್‌ ಬಂಕ್‌, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೂ ನೀರು ನುಗ್ಗಿದೆ.

ವಾಹನ ಸಂಚಾರ ಬಂದ್‌

ಮಹಾ ಮಳೆಗೆ ಚರಂಡಿಗಳು ತುಂಬಿ ರಸ್ತೆಗಳೆಲ್ಲ ಹೊಳೆಯಾಗಿ ಹರಿದವು. ಸರಸ್ವತಿ ನಗರದ ಕೃಷ್ಣ ಪ್ರಗತಿ ಗ್ರಾಮೀಣ ಬ್ಯಾಂಕ್‌ ಬಳಿ, ನಿಟುವಳ್ಳಿಯ ಎಸ್‌ಬಿಎಂ ಬಳಿ, ಜಯನಗರ ಮುಖ್ಯ ರಸ್ತೆಯ ಕರಿಯಮ್ಮದೇವಿ ದೇವಾಲಯ ರಸ್ತೆಗಳು ನೀರಿನಿಂದ ತುಂಬಿದ್ದರಿಂದ ಸಂಚಾರ ಬಂದ್‌ ಆಗಿತ್ತು. ಪಿಬಿ ರಸ್ತೆಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಆನಂದ್‌ ರೆಸಿಡೆನ್ಸಿ, ತ್ರಿಶೂಲ್‌ ಲಾಡ್ಜ್‌ ಬಳಿ ಕೂಡ ನೀರು ರಸ್ತೆಗೆ ನುಗ್ಗಿ ಸಂಚಾರ ಸ್ಥಬ್ಬಗೊಂಡಿತು. ರಸ್ತೆಯಲ್ಲಿ ನೀರಿನ ಆಳ ತಿಳಿಯದೆ ಕಾರು, ಬೈಕ್‌, ಆಟೋಗಳು ಮುಂದೆ ಹೋಗಲಾಗದೆ ಪರದಾಡಿದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ