ಆ್ಯಪ್ನಗರ

ಅತೀಯಾದ ಟಿವಿ ವೀಕ್ಷಣೆಯಿಂದ ಮನಸ್ಸು ಚಂಚಲ

ಅತೀಯಾದ ಟಿವಿ ವೀಕ್ಷಣೆಯಿಂದ ಮಹಿಳೆಯರ ಮನಸ್ಸು ಚಂಚಲತೆಗೆ ಒಳಗಾಗುತ್ತಿದ್ದು, ಸಾಹಿತಿಗಳು ಈ ಕುರಿತು ಮಹಿಳೆಯರಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ಜಿಪಂ ಅಧ್ಯಕ್ಷೆ ಶೈಲಜಾ ಬಸವರಾಜ್‌ ಹೇಳಿದರು.

Vijaya Karnataka 8 Jul 2019, 5:00 am
ದಾವಣಗೆರೆ : ಅತೀಯಾದ ಟಿವಿ ವೀಕ್ಷಣೆಯಿಂದ ಮಹಿಳೆಯರ ಮನಸ್ಸು ಚಂಚಲತೆಗೆ ಒಳಗಾಗುತ್ತಿದ್ದು, ಸಾಹಿತಿಗಳು ಈ ಕುರಿತು ಮಹಿಳೆಯರಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ಜಿಪಂ ಅಧ್ಯಕ್ಷೆ ಶೈಲಜಾ ಬಸವರಾಜ್‌ ಹೇಳಿದರು.
Vijaya Karnataka Web the mind is distracted by the extreme tv viewing
ಅತೀಯಾದ ಟಿವಿ ವೀಕ್ಷಣೆಯಿಂದ ಮನಸ್ಸು ಚಂಚಲ


ನಗರದ ಕುವೆಂಪು ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌, ವನಿತಾ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ದತ್ತಿ ಕಾರ್ಯಕ್ರಮ ಹಾಗೂ ಹಿರಿಯ ಸಾಹಿತಿ ದಿ.ಟಿ.ಗಿರಿಜಾರವರ ನೆನಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಧಾರಾವಾಹಿ ಸೇರಿದಂತೆ ರಿಯಾಲಿಟಿ ಶೋಗಳನ್ನು ಅತೀಯಾಗಿ ವೀಕ್ಷಣೆ ಮಾಡುವುದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ಆರೋಗ್ಯದ ಮೇಲೆಯೂ ಪರಿಣಾಮ ಬಿರುತ್ತದೆ. ಹೀಗಾಗಿ ಟಿ ವೀಕ್ಷಣೆಯಿಂದ ದೂರ ಉಳಿದು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಟಿ.ಗಿರಿಜಾ ಅವರು ಪೊಲೀಯೋ ಅಂಗ ವೈಕಲ್ಯದ ನಡುವೆಯೂ ಸಾಹಿತ್ಯಾಸಕ್ತಿ ಮೈಗೂಡಿಸಿಕೊಂಡು ಅಪಾರ ಸಾಧನೆ ಮಾಡಿದ್ದಾರೆ. ಇಡೀ ಜಿಲ್ಲೆಯನ್ನೇ ಸುತ್ತುವರೆದು ಬರವಣಿಗೆ ಮೂಲಕ ಚಿತ್ರದುರ್ಗ- ದಾವಣಗೆರೆ ಅವಳಿ ಜಿಲ್ಲೆಯ ಭೌಗೋಳಿಕತೆಯನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಬೇರೆಯವರಿಗಾಗಿ ಬದುಕುವವರಿಗೆ ಸಾವೇ ಇರುವುದಿಲ್ಲ ಎನ್ನುವುದಕ್ಕೆ ಗಿರಿಜಾ ಅವರ ಸಾಹಿತ್ಯದಲ್ಲಿ ಕಾಣಬಹುದು ಎಂದರು.

ಹೃದಯ ಸ್ಪರ್ಶಿ ಬರವಣಿಗೆ:
ಟಿ.ಗಿರಿಜಾರವರ ಕೃತಿ ಅವಲೋಕನ ಕುರಿತು ಸಾಹಿತಿ ಗಂಗಾಧರ ನಿಟ್ಟೂರು ಮಾತನಾಡಿ, ಗಿರಿಜಾರವರು ಸಮಾಜದ ಸ್ವಾಸ್ಥ್ಯವನ್ನು ಬಯಸುವುದರ ಜತೆಗೆ ದಾದಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಬದುಕಿಗೆ ಹತ್ತಿರ ಮತ್ತು ಅನುಭವಿಸಿ ಬರೆದಾಗ ಮಾತ್ರ ಬರವಣಿಗೆ ಇತರರಿಗೆ ಹೃದಯ ಸ್ಪರ್ಶಿಯಾಗುವುದಕ್ಕೆ ಸಾಧ್ಯವಾಗುತ್ತದೆ. ಇದೇ ನಿಟ್ಟಿನಲ್ಲಿ ಕೃತಿಗಳನ್ನು ಬರೆಯಲಾಗುತ್ತಿದೆ. ಪ್ರಕೃತಿಗಳನ್ನು ಬೇಕಾದರೆ ವರ್ಣಿಸಿ ಬರೆಯಬಹುದು. ಆದರೆ, ಬದುಕನ್ನು ಯಥಾವತ್ತಾಗಿ ಬರೆಯುವ ಕೆಲಸ ಟಿ.ಗಿರಿಜಾ ಮಾಡಿದ್ದಾರೆ ಎಂದರು.

ಸ್ವಾತಂತ್ರ್ಯಕ್ಕೆ ಸ್ತ್ರೀಯರ ಕೊಡುಗೆ:
'ಸ್ವಾತಂತ್ರ್ಯ ಹೋರಾಟದಲ್ಲಿ ದಾವಣಗೆರೆ ಚಿತ್ರದುರ್ಗದಲ್ಲಿ ಮಹಿಳೆಯರ ಪಾತ್ರವೇನು' ಕುರಿತು ಸಾಹಿತಿ ಡಾ.ಯಶೋಧಮ್ಮ ಬಿ.ರಾಜಶೇಖರಪ್ಪ ಮಾತನಾಡಿ, 1937ರಲ್ಲಿ ಶಿವಪುರದಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಬ್ರಿಟಿಷರು ನಿಷೇಧಾಜ್ಞೆ ಹೊರಡಿಸಿದ್ದರೂ ಬಳ್ಳಾರಿ ಸಿದ್ದಮ್ಮ ಪುರುಷರನ್ನು ಹಿಂದಿಕ್ಕಿ ಧ್ವಜಾರೋಹಣ ಮಾಡುವ ಮೂಲಕ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿದ್ದರು. ಆ ಸಂದರ್ಭದಲ್ಲಿ ಬ್ರಿಟಿಷರು ಸಿದ್ದಮ್ಮನನ್ನು ಬಂಧಿಸಿದ್ದು, ಮೈಸೂರು ಮಹಾರಾಜರಿಗೆ ಮುಜುಗರವಾಯಿತು. ನಿಮ್ಮನ್ನು ಬಿಡುಗಡೆ ಮಾಡಿಸುತ್ತೇನೆ ಬಂದು ಕಾಣುವಂತೆ ಹೇಳಿದ್ದರು. ಆದರೆ, ಸಿದ್ದಮ್ಮ ಎಲ್ಲರನ್ನು ಬಿಡುಸುವುದಾದರೆ ಸರಿ, ನೀವೇ ಬಂದು ನಮ್ಮನ್ನು ಮಾತನಾಡಿಸಬೇಕು ಎಂದು ಧೈರ್ಯವಾಗಿ ಹೇಳಿದ್ದರು. ಹೀಗೆ ದಾವಣಗೆರೆ ಚಿತ್ರದುರ್ಗದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸಾಕಷ್ಟು ಮಹಿಳೆಯರು ಶ್ರಮಿಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ವಾಮದೇವಪ್ಪ, ವನಿತಾ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್‌.ಎಂ.ಮಲ್ಲಮ್ಮ ನಾಗರಾಜ್‌, ಲೇಖಕಿ ಟಿ.ಎಸ್‌. ಶೈಲಜಾ ಇತರರು ಇದ್ದರು.

ಸಾಹಿತಿ ಟಿ.ಗಿರಿಜಾರವರ ಬದುಕು ತೆರೆದ ಪುಸ್ತಕವಾಗಿತ್ತು. ಎಲ್ಲ ವಿಚಾರ ಮುಕ್ತವಾಗಿ ತಿಳಿಸುವ ನೇರ, ನಿಷ್ಠುರ ಮಹಿಳೆಯಾಗಿದ್ದರು. ಯಾವುದೇ ಫಲಾಪೇಕ್ಷೆ ಇಲ್ಲದೆ ಧೈರ್ಯ, ಛಲವನ್ನು ಹೊಂದಿದ್ದರು. ಆದ್ದರಿಂದ ವನಿತಾ ಸಮಾಜದಿಂದ ಲೇಖಕಿ ಟಿ.ಗಿರಿಜಾ ಹೆಸರಿನಲ್ಲಿ ಗ್ರಂಥಾಲಯ ತೆರೆದು ಪುಸ್ತಕಗಳನ್ನು ಸಂಗ್ರಹಿಸಿ ಸಾರ್ವಜನಿಕರಿಗೆ ತಿಳಿಸುವ ಕೆಲಸ ಮಾಡಬೇಕಾಗಿದೆ.

- ಗಂಗಾಧರ ನಿಟ್ಟೂರು, ಸಾಹಿತಿ
.

1930ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪುರುಷರ ಬೆಂಬಲಕ್ಕೆ ಮಹಿಳೆಯರು ಸಹ ನಿಂತಿದ್ದಾರೆ. ಬಳ್ಳಾರಿ ಸಿದ್ದಮ್ಮ ಅನಕ್ಷರಸ್ಥರಾಗಿದ್ದು, ಇವರ ಜತೆಗೆ ನಾಗರತ್ನಮ್ಮ, ಶಾರದಮ್ಮ, ಶಾಂತಮ್ಮ ಹೀಗೆ ಅನೇಕ ಮಹಿಳೆಯರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.
- ಡಾ.ಯಶೋಧಮ್ಮ ಬಿ.ರಾಜಶೇಖರಪ್ಪ, ಸಾಹಿತಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ