ವಿಕ ವಿಶೇಷ ಹರಿಹರ
ಬೇಸಿಗೆ ಬಿಸಿಲ ತಾಪ ವಿಪರೀತ. ಜನ ದೇಹದ ದಾಹ ನೀಗಿಸುವ ಎಳನೀರು, ಹಣ್ಣು, ಹಂಪಲು, ಮಜ್ಜಿಗೆ ತಂಪು ಪಾನೀಯಗಳತ್ತ ಮುಖ ಮಾಡಿದ್ದಾರೆ. ಇಂತಹ ದಿನಗಳಲ್ಲಿ ಸೌತೆಕಾಯಿಗೂ ಡಿಮ್ಯಾಂಡ್ ಜಾಸ್ತಿ. ಆದರೆ, ಸೌತೆ ಬೆಳೆದ ಇಲ್ಲಿನ ರೈತರಿಗೆ ಬೆಳೆದ ಖರ್ಚೂ ಸಿಗದಷ್ಟು ಕೂಡ ಅಗ್ಗವಾಗಿದೆ.
ಹೌದು, ಈ ಬಾರಿ ಹರಿಹರ ತಾಲೂಕಿನ ನೂರಾರು ರೈತರು ಸೌತೆಕಾಯಿ ಬೆಳೆದಿದ್ದಾರೆ. ಬೆಳೆಯೂ ಕೈಗೆ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಈ ಸೌತೆ 10 ರೂ. ಕೆಜಿ ಅಂದರೂ ಕೊಳ್ಳುವವರಿಲ್ಲ.
ಲಗೇಜ್ ಆಟೋ, ಬೈಕ್, ಎತ್ತಿನಗಾಡಿಯಲ್ಲಿ ನಿತ್ಯ ಮಾರುಕಟ್ಟೆಗೆ ಈ ಸೌತೆ ರೈತರು ತರುತ್ತಿದ್ದಾರೆ. ಆದರೆ ವ್ಯಾಪಾರಿಗಳು ಈ ಸೌತೆ ಸಾರಾಸಗಟಾಗಿ ಕೊಳ್ಳಲು ನಿರಾಕರಿಸುತ್ತಿದ್ದಾರೆ. ಡಿಮ್ಯಾಂಡ್ ಇಲ್ಲದ ಸೌತೆ ಕೊಂಡು ನಾವೇಕೆ ನಷ್ಟಕ್ಕೀಡಾಗಬೇಕೆಂಬುದು ವ್ಯಾಪಾರಿಗಳ ನಿಲುವು.
ಬೆಂಗಳೂರು ಸೌತೆ :
ತೋಟಗಾರಿಕೆ ಇಲಾಖೆಯಿಂದ ಈ ಬಾರಿ ಬೇಸಿಗೆ ಹಂಗಾಮಿಗೆ 350 ರೈತರಿಗೆ ತಲಾ 2000 ರೂ. ಮೌಲ್ಯದ ತರಕಾರಿ ಬೀಜಗಳನ್ನು ವಿತರಿಸಲಾಗಿದೆ. ಟೊಮೊಟೊ, ಬದನೆ, ಸೌತೆ, ಹೀರೆ, ನಾನಾ ತರಕಾರಿ ಬೀಜಗಳನ್ನು ವಿತರಿಸಲಾಗಿದೆ. ಈ ಬಾರಿ ಈ ಪ್ಯಾಕೇಜ್ನಲ್ಲಿ ಬೆಂಗಳೂರು ಸೌತೆ ಬೀಜಗಳಿದ್ದವು.
ದಾವಣಗೆರೆ ಜಿಲ್ಲೆ ರೈತರು ಸಾಮಾನ್ಯವಾಗಿ ಧಾರವಾಡ ಸೌತೆ ಬೆಳೆಯುತ್ತಾರೆ. ಹೆಚ್ಚು ಇಳುವರಿ, ಹೆಚ್ಚಿನ ನೀರಿನಂಶ, ಕಡಿಮೆ ಕೀಟ ಬಾಧೆ ಇರುವ ದೃಷ್ಟಿಯಿಂದ ಇಲಾಖೆಯು ಈ ಬಾರಿ ಬೆಂಗಳೂರು ಸೌತೆ ಬೀಜ ಪರಿಚಯಿಸಿದೆ. ರೈತರು ಕೂಡ ನೋಡೋಣ ಎಂದು ಬೆಳೆದಿದ್ದಾರೆ. ಫಸಲು ಚೆನ್ನಾಗಿ ಬಂದಿದೆ. ಧಾರವಾಡ ಸೌತೆ 8-10 ಕಾಯಿ ಹಾಕಿದರೆ ಒಂದು ಕೆಜಿ ತೂಗುತ್ತದೆ. ಆದರೆ ಈ ಸೌತೆ 2-3ಕ್ಕೆ ಕೆಜಿ ಬರುತ್ತದೆ.
ಬೇಸಿಗೆಯ ಬೇಗೆಯಿಂದ ಪಾರಾಗಲು ಬೆಂಗಳೂರು ಸೌತೆ ಉತ್ತಮವಾದ ತಳಿ. ಇದರಲ್ಲಿ ಸ್ವಲ್ಪ ಕಹಿ ಇರುತ್ತದೆ. ಆದರೆ ಈ ಸೌತೆಯಂಚು ಕತ್ತರಿಸಿ ಉಜ್ಜಿದರೆ ಕಹಿ ಅಂಶ ಕಡಿಮೆಯಾಗುತ್ತದೆ ಎನ್ನುತ್ತಾರೆ.
ಹೋಟೆಲ್, ಡಾಬಾಗಳಲ್ಲಿ ಸಾಲಾಡ್ ರೂಪದಲ್ಲಿ ಹೆಚ್ಚಾಗಿ ಬಳಕೆಯಾಗುತ್ತದೆ. ಬೆಂಗಳೂರು, ತುಮಕೂರು, ಕೋಲಾರ, ರಾಮನಗರ, ಹಾಸನ, ಮಂಡ್ಯ, ಮೈಸೂರು, ಮಂಗಳೂರು ಭಾಗದಲ್ಲಿ ಈ ಸೌತೆ ಮಾರಾಟ ಹೆಚ್ಚು.
ಪರ್ಯಾಯ ವ್ಯವಸ್ಥೆ:
ತೋಟಗಾರಿಕೆ ಇಲಾಖೆಯಂತೂ ತಳಿ ಪರಿಚಯಿಸಿದೆ. ಆದರೆ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಹೀಗಾಗಿ ಎಪಿಎಂಸಿಯವರು ಈ ಬಗ್ಗೆ ರೈತರಿಗೆ ಮಾರ್ಗದರ್ಶನ ಮಾಡಬಹುದು..
ಅರ್ಧ ಎಕರೆ ಈ ಸೌತೆಕಾಯಿ ಬೆಳೆದಿದ್ದೇನೆ. ಕಳೆದ 15 ದಿನಗಳಿಂದ ಬೆಳೆ ಬರುತ್ತಿದೆ. ಹರಿಹರ ಸಗಟು ಮಾರುಕಟ್ಟೆಗೆ ತಂದರೆ ಕೊಳ್ಳುವವರೆ ಇಲ್ಲ. ಕಷ್ಟಪಟ್ಟು ಬೆಳೆದು ಇಲ್ಲಿಗೆ ಸಾಗಿಸಿಕೊಂಡು ಬಂದರೆ ನಿರಾಶೆಯಾಗುತ್ತಿದೆ.
- ಕುಂದೂರು ಮಂಜಪ್ಪ, ರೈತ, ಹೊಳೆಸಿರಿಗೆರೆ.
ಇದರಲ್ಲಿರುವ ಹೆಚ್ಚಿನ ನೀರಿನಂಶ ಬಳಕೆದಾರರಿಗೆ ಉಪಯೋಗಕಾರಿ. ಇದು ದೇಹದ ಉಷ್ಣಾಂಶವನ್ನು ಬ್ಯಾಲೆನ್ಸ್ ಮಾಡುತ್ತದೆ. ಕಡಿಮೆ ಕೀಟಬಾಧೆ ಹಾಗೂ ಹೆಚ್ಚಿನ ಇಳುವರಿ ಇದ್ದು, ರೈತರಿಗೆ ಅನುಕೂಲಕರ. ಈ ಭಾಗದಲ್ಲಿ ಇದರ ಬಳಕೆ ಪರಿಚಯವಿಲ್ಲದೆ ತೊಂದರೆಯಾಗಿದೆ.
- ರೇಖಾ, ತೋಟಗಾರಿಕೆ ಎಡಿ, ಹರಿಹರ.
ಗಿರಾಕಿಗಳಿಂದ ಬೆಂಗಳೂರು ಸೌತೆಗೆ ಡಿಮ್ಯಾಂಡ್ ಇಲ್ಲ. ಧಾರವಾಡ ಸೌತೆ ಈಗ 25 ರೂ.ನಂತೆ ಖರೀದಿಸುತ್ತಿದ್ದೇವೆ. ಆದರೆ ಹೊಸ ಸೌತೆ 10 ರೂ.ಗೂ ಕೊಳ್ಳುವವರಿಲ್ಲ. ರೈತರು ಮಾರುಕಟ್ಟೆಯ ಸ್ಥಿತಿ ನೋಡಿ ಬೇಸರಗೊಂಡಿದ್ದಾರೆ.
- ನಾಗರಾಜ್, ತರಕಾರಿ ವ್ಯಾಪಾರಿ, ಹರಿಹರ.