ಆ್ಯಪ್ನಗರ

ಎಂಎಲ್‌ಎ, ಎಂಪಿಗೆ ಉಲ್ಟಾ ರಿಸಲ್ಟ್‌

ಲೋಕಸಭೆ ಚುನಾವಣೆ ಫಲಿತಾಂಶ ಹೊರ ಬಿದ್ದ ಬೆನ್ನಲ್ಲೇ ಜಿಲ್ಲೆಯ ಎರಡು ನಗರ ಸ್ಥಳೀಯ ಸಂಸೆÜ್ಥಗಳಿಗೆ ಚುನಾವಣೆ ನಡೆದು ಶುಕ್ರವಾರ ಫಲಿತಾಂಶ ಹೊರ ಬಿದ್ದಿದೆ. ಹರಪನಹಳ್ಳಿಯಲ್ಲಿ ಕಾಂಗ್ರೆಸ್‌ ಸರಳ ಬಹುಮತ ಪಡೆದರೆ, ಹರಿಹರದಲ್ಲಿ ಜೆಡಿಎಸ್‌ ದೊಡ್ಡ ಪಕ್ಷವಾಗಿ ಅತಂತ್ರ ಸ್ಥಿತಿ ನಿರ್ಮಾಣ ಆಗಿದೆ. ಎಂಪಿ, ಎಂಎಲ್‌ಎ ಫಲಿತಾಂಶಕ್ಕೆ ಹೋಲಿಸಿದರೆ ಜನತೆ ಉಲ್ಟಾ ರಿಸಲ್ಟ್‌ ನೀಡಿದ್ದಾರೆ.

Vijaya Karnataka 1 Jun 2019, 5:00 am
ದಾವಣಗೆರೆ : ಲೋಕಸಭೆ ಚುನಾವಣೆ ಫಲಿತಾಂಶ ಹೊರ ಬಿದ್ದ ಬೆನ್ನಲ್ಲೇ ಜಿಲ್ಲೆಯ ಎರಡು ನಗರ ಸ್ಥಳೀಯ ಸಂಸೆÜ್ಥಗಳಿಗೆ ಚುನಾವಣೆ ನಡೆದು ಶುಕ್ರವಾರ ಫಲಿತಾಂಶ ಹೊರ ಬಿದ್ದಿದೆ. ಹರಪನಹಳ್ಳಿಯಲ್ಲಿ ಕಾಂಗ್ರೆಸ್‌ ಸರಳ ಬಹುಮತ ಪಡೆದರೆ, ಹರಿಹರದಲ್ಲಿ ಜೆಡಿಎಸ್‌ ದೊಡ್ಡ ಪಕ್ಷವಾಗಿ ಅತಂತ್ರ ಸ್ಥಿತಿ ನಿರ್ಮಾಣ ಆಗಿದೆ. ಎಂಪಿ, ಎಂಎಲ್‌ಎ ಫಲಿತಾಂಶಕ್ಕೆ ಹೋಲಿಸಿದರೆ ಜನತೆ ಉಲ್ಟಾ ರಿಸಲ್ಟ್‌ ನೀಡಿದ್ದಾರೆ.
Vijaya Karnataka Web ultra result for mla mp
ಎಂಎಲ್‌ಎ, ಎಂಪಿಗೆ ಉಲ್ಟಾ ರಿಸಲ್ಟ್‌


ಹೊಳೆದಂಡೆಯ ಊರು ಹರಿಹರ ನಗರಸಭೆಯಲ್ಲಿ ಜೆಡಿಎಸ್‌ ಅತಿ ಹೆಚ್ಚು ಸ್ಥಾನಗಳನ್ನು ಪಡೆದು ಅಧಿಕಾರದ ಸನಿಹದಲ್ಲಿದೆ. ಬಳ್ಳಾರಿ ತೆಕ್ಕೆಗೆ ಜಾರಿರುವ ಹರಪನಹಳ್ಳಿ ಪುರಸಭೆಯಲ್ಲಿ ಕಾಂಗ್ರೆಸ್‌ ಅಧಿಕಾರದ ಗದ್ದುಗೆ ಏರಲಿದೆ. ಎರಡೂ ಕಡೆಯೂ ಮತ್ತೆ ಅದೇ ಪಕ್ಷಗಳು ಅಧಿಕಾರ ಉಳಿಸಿಕೊಂಡಿರುವುದು ಮತ್ತೊಂದು ವಿಶೇಷ.

ತೆನೆ ಹೊತ್ತ ಹರಿಹರ:

ಹರಿಹರ ನಗರಸಭೆಯಲ್ಲಿ ಕಳೆದ ವರ್ಷವೂ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಇರಲಿಲ್ಲ. ಜೆಡಿಎಸ್‌ ಶಾಸಕರಿದ್ದರೂ ಕಾಂಗ್ರೆಸ್‌ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ನಂತರದ ಸ್ಥಾನದಲ್ಲಿ ಜೆಡಿಎಸ್‌ ಇತ್ತು. ಈ ಬಾರಿ ಇಲ್ಲಿ ಕಾಂಗ್ರೆಸ್‌ ಶಾಸಕರಿದ್ದು ಜೆಡಿಎಸ್‌ ಹೆಚ್ಚಿನ ಸ್ಥಾನಗಳನ್ನು ಗಳಿಸಿದೆ. ಈ ಚುನಾವಣೆಯಲ್ಲಿ ಜೆಡಿಎಸ್‌ 14 ಸ್ಥಾನ ಪಡೆದುಕೊಂಡು ಕಳೆದ ಬಾರಿಗೆ ಹೋಲಿಸಿದರೆ 4 ಸ್ಥಾನ ಹೆಚ್ಚಿಸಿಕೊಂಡಿದೆ. ಹತ್ತು ಸ್ಥಾನ ಪಡೆದಿರುವ ಕಾಂಗ್ರೆಸ್‌ ಮೂರು ಸ್ಥಾನ ಕಳೆದುಕೊಂಡಿದೆ. ಆದರೆ, ಕಳೆದ ವರ್ಷ ಈ ಎರಡೂ ಪಕ್ಷ ಕೂಡಿಕೊಂಡು ಐದು ವರ್ಷ ಅಧಿಕಾರ ನಡೆಸಿದ್ದವು.

31 ಸಂಖ್ಯಾ ಬಲವಿರುವ ನಗರಸಭೆಯಲ್ಲಿ ಅಧಿಕಾರ ಹಿಡಿಯಲು 17 ಮ್ಯಾಜಿಕ್‌ ನಂಬರ್‌. ಈ ಬಾರಿಯೂ ಹಿಂದಿನ ಪರಿಸ್ಥಿತಿಯೇ ಇದೆ. ಈಗಾಗಲೇ ರಾಜ್ಯದಲ್ಲಿ ಎರಡೂ ಪಕ್ಷಗಳ ಮೈತ್ರಿ ಸರಕಾರವಿದೆ. ಲೋಕಸಭೆ ಚುನಾವಣೆಯಲ್ಲೂ ಎರಡೂ ಪಕ್ಷಗಳ ಮೈತ್ರಿ ಮುಂದುವರಿದಿತ್ತು. ಹಾಗಾಗಿ ಈ ಸ್ನೇಹಬಂಧ ಇರುವುದರಿಂದ ಕಳೆದ ಬಾರಿಯಂತೆ ಈ ಬಾರಿಯೂ ಎರಡೂ ಪಕ್ಷಗಳು ಸೇರಿ ಮತ್ತೆ ಅಧಿಕಾರ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇಲ್ಲಿ ಕೇವಲ 5 ಸ್ಥಾನ ಪಡೆದಿರುವ ಬಿಜೆಪಿ ಅಧಿಕಾರದ ಕನಸು ಕೂಡ ಕಾಣುವ ಸ್ಥಿತಿಯಲ್ಲಿಲ್ಲ. ಇವರ ಜತೆ ಇಬ್ಬರು ಪಕ್ಷೇತರರು ಕೂಡ ಆಯ್ಕೆಯಾಗಿದ್ದಾರೆ.

ಹರಪನಹಳ್ಳಿ ಕೈಗೆ ಜೈ

ಹರಪನಹಳ್ಳಿ ಪುರಸಭೆಯಲ್ಲಿ ಹಿಂದಿನ ಬಾರಿ ಅತಂತ್ರ ಸ್ಥಿತಿ ನಿರ್ಮಾಣ ಆಗಿತ್ತು. ಆಗ ಹತ್ತು ಸ್ಥಾನ ಪಡೆದಿದ್ದ ಬಿಜೆಪಿ ದೊಡ್ಡ ಪಕ್ಷವಾದರೂ ಏಳು ಸ್ಥಾನ ಪಡೆದಿದ್ದ ಕಾಂಗ್ರೆಸ್‌ ಪಕ್ಷ ಇಲ್ಲಿ ಇತರೆ ಪಕ್ಷಗಳನ್ನು ಸೇರಿಸಿಕೊಂಡು ಅಧಿಕಾರ ಹಿಡಿದಿತ್ತು. ಕೊನೇ ಅವಧಿಯಲ್ಲಿ ಒಂದಿಷ್ಟು ರಾಜಕಾರಣದ ಮೇಲಾಟ ನಡೆದು ಬಿಜೆಪಿ ಅಧಿಕಾರ ಹಿಡಿದಿತ್ತು.

ಈ ಬಾರಿ ಮತದಾರರ ಸ್ಪಷ್ಟವಾಗಿ 'ಕೈ' ಗೆ ಜೈ ಎಂದಿದ್ದಾನೆ. 27 ಸದಸ್ಯ ಬಲದಲ್ಲಿ ಮ್ಯಾಜಿಕ್‌ ನಂಬರ್‌ಗೆ 14 ಸಂಖ್ಯೆಯ ಸದಸ್ಯರಿರಬೇಕು. ಕಾಂಗ್ರೆಸ್‌ 14 ಸ್ಥಾನದಲ್ಲಿ ಗೆದ್ದಿದ್ದು ಇಲ್ಲಿ ಯಾರ ನೆರವೂ ಇಲ್ಲದೆ ಸ್ವತಂತ್ರವಾಗಿ ಅಧಿಕಾರದ ಗದ್ದುಗೆ ಏರಲಿದೆ. ಇಲ್ಲಿ ಬಿಜೆಪಿ 10 ಸ್ಥಾನಗಳನ್ನು ಪಡೆದಿದ್ದರೆ, ಜೆಡಿಎಸ್‌ ಒಬ್ಬರು ಮತ್ತು ಪಕ್ಷೇತರರು ಇಬ್ಬರು ಆಯ್ಕೆಯಾಗಿದ್ದಾರೆ.

---

ಬಾಕ್ಸ್‌

ಉಲ್ಟಾ ರಿಸಲ್ಟ್‌


ಎಂಎಲ್‌ಎ ಚುನಾವಣೆ ಮತ್ತು ಇತ್ತೀಚೆಗೆ ನಡೆದ ಎಂಪಿ ಚುನಾವಣೆಯಲ್ಲಿ ಜನತೆ ನೀಡಿದ್ದ ಫಲಿತಾಂಶಕ್ಕೆ ಉಲ್ಟಾ ರಿಸಲ್ಟ್‌ನ್ನು ಸ್ಥಳೀಯ ಸಂಸ್ಥೆಗಳಿಗೆ ಮತದಾರರು ನೀಡಿದ್ದಾರೆ. ಹರಿಹರದಲ್ಲಿ ಎಂಎಲ್‌ಎ ಚುನಾವಣೆಯಲ್ಲಿ ಕಾಂಗ್ರೆಸ್‌ ಕೈ ಹಿಡಿದಿದ್ದರು. ಹರಪನಹಳ್ಳಿಯಲ್ಲಿ ಕಮಲ ಎತ್ತಿ ಹಿಡಿದಿದ್ದರು. ಎಂಪಿ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಜನತೆ ಬಿಜೆಪಿಗೆ ಮತ ಹಾಕಿದ್ದರು. ಸ್ಥಳೀಯ ಸಂಸ್ಥೆ ಚುನಾವಣೆಗಳು ಬೇರೆ ಗ್ರಾಮರ್‌ಗಳಲ್ಲಿ ನಡೆಯುವುದರಿಂದ ಇದು ಸಹಜವೂ ಇರಬಹುದು. ಆದರೆ ಇಬ್ಬರೂ ಶಾಸಕರಿಗೆ ಕೊಂಚ ಮುಖಭಂಗ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ