ಧಾರವಾಡ : ಮಟ್ಕಾ, ಜೂಜಾಟವನ್ನೇ ವೃತ್ತಿ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿರುವ ಜಿಲ್ಲಾ ಪೊಲೀಸರು ಆರೋಪಿಯನ್ನು 3 ತಿಂಗಳು ಬೆಳಗಾವಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.
ಧಾರವಾಡ ತಾಲೂಕು ಅಳ್ನಾವರದ ಬಸಯ್ಯ ಈಶ್ವರಯ್ಯ ಹಿರೇಮಠ ಬಂಧಿತ ಆರೋಪಿ. ಈತನ ವಿರುದ್ಧ ಭಯೋತ್ಪಾದನೆ ಚಟುವಟಿಕೆ ನಿಯಂತ್ರಣ ಕಾಯ್ದೆ, ಮಾದಕದ್ರವ್ಯ ವ್ಯವಹಾರ, ಜೂಜುಕೋರ, ಗೂಂಡಾ, ಅನೈತಿಕ ವ್ಯವಹಾರ ಸೇರಿದಂತೆ ಹಲವು ಪ್ರಕರಣ ದಾಖಲಾಗಿವೆ.
ದಶಕದಿಂದಲೂ ಆರೋಪಿಯು ಮಟ್ಕಾ ಬರೆಯುತ್ತಿದ್ದ. ಇದೇ ವಿಚಾರವಾಗಿ ಹಲವು ಬಾರಿ ಶಿಕ್ಷೆಯನ್ನೂ ಅನುಭವಿಸಿದ್ದನಲ್ಲದೇ 2005ರಲ್ಲೂ ಗೂಂಡಾ ಕಾಯ್ದೆಯಡಿ ಬಂಧಿತನಾಗಿದ್ದ. ಬಂಧನ ಅವಧಿ ಮುಗಿದ ನಂತರವೂ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪಿ ವಿರುದ್ಧ 2007ರಿಂದ ಇಲ್ಲಿಯವರೆಗೆ ಅಳ್ನಾವರ ಪೊಲೀಸ್ಠಾಣೆ ವ್ಯವಾಪ್ತಿಯಲ್ಲಿ 18 ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಬಸಯ್ಯನ ವಿರುದ್ಧ ಎಂಒಬಿ (ಮೋಡಸ್ಅಪರೆಂಡಿ ಬ್ಯೂರೊ) ಶೀಟ್ ತೆರೆದಿರುವ ಪೊಲೀಸರು ಜಿಲ್ಲಾಧಿಕಾರಿಗಳ ಆದೇಶದಂತೆ ಬಂಧಿಸಿದ್ದಾರೆ.
ಈ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ ಮೀನಾ, ಇಂತಹ ಆರೋಪಿಗಳ ವಿರುದ್ಧ ಪೊಲೀಸ್ಇಲಾಖೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದ್ದು, ಅದರಲ್ಲಿ ಇದೂ ಒಂದು ಎಂದು ಹೇಳಿದ್ದಾರೆ.