ಹುಬ್ಬಳ್ಳಿ : ಅಪಘಾತದಲ್ಲಿ ಗಾಯಗೊಂಡ ಮಗುವಿಗೆ ಸೂಕ್ತ ಚಿಕಿತ್ಸೆ ನೀಡದೇ ವೈದ್ಯರು ನಿರ್ಲಕ್ಷ್ಯ ತೋರಿದ್ದರಿಂದ ಏಳು ತಿಂಗಳ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಪೋಷಕರು ಕಿಮ್ಸ್ನಲ್ಲಿ ಶನಿವಾರ ಸಂಜೆವರೆಗೆ ಪ್ರತಿಭಟನೆ ನಡೆಸಿದರು.
ಹಳೇ ಹುಬ್ಬಳ್ಳಿಯ ಸದರ ಸೋಫಾದ ಮಾಬುಸಾಬ ಕಿತ್ತೂರು ಎಂಬುವರ ಪುತ್ರ ಮಹ್ಮದ ಜಿಬಿ ಮೃತ ಮಗು.
ನಡೆದದ್ದೇನು ಹಳಿಯಾಳದಲ್ಲಿ ಶುಕ್ರವಾರದಂದು ಆಟೊ ಮತ್ತು ಟ್ರ್ಯಾಕ್ಟರ್ ನಡೆದ ರಸ್ತೆ ಅಪಘಾತದಲ್ಲಿ ಆಟೋ ಪಲ್ಟಿಯಾಗಿ ಅದರಲ್ಲಿ ಮಗು ಸೇರಿ ನಾಲ್ವರು ಗಾಯಗೊಂಡಿದ್ದರು. ಬಿದ್ದ ಅಟೊದಲ್ಲಿ ಮಗುವಿನ ಕಾಲು ಸಿಲುಕಿದ್ದರಿಂದ ಪಾದದ ಅರ್ಧ ಭಾಗ ಕತ್ತರಿಸಿ ತೀವ್ರ ನೋವಿನಿಂದ ನರಳುತ್ತಿತ್ತು. ಮಗುವನ್ನು ಸ್ಥಳೀಯವಾಗಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ಗೆ ರಾತ್ರಿಯೇ ಕರೆತಂದು ದಾಖಲಿಸಲಾಯಿತು. ವೈದ್ಯರು ಚಿಕಿತ್ಸೆ ನೀಡಿ, ಕಾಲು ಉಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಇದನ್ನು ಉಳಿಸಿಕೊಳ್ಳುವ ಆಶಾಭಾವನೆಯೊಂದಿಗೆ ಪೋಷಕರು ಎಸ್ಡಿಎಂ ಕರೆದೊಯ್ದರು. ಆದರೆ, ಅಲ್ಲಿ ಹೆಚ್ಚು ಹಣ ಖರ್ಚಾಗುತ್ತದೆ ಎಂದು ತಿಳಿಸಿದ್ದರಿಂದ ಮತ್ತೆ ಬೆಳಗಿನ ಜಾವ 3.30ರ ಸುಮಾರಿಗೆ ಕಿಮ್ಸ್ಗೆ ಆಗಮಿಸಿದರು. ಈ ವೇಳೆ ಡ್ಯೂಟಿ ಡಾಕ್ಟರು ಇರಲಿಲ್ಲ. ಪಿಜಿ ವೈದ್ಯರಿಂದ ಸರಿಯಾಗಿ ಚಿಕಿತ್ಸೆ ಸಿಗಲಿಲ್ಲ. ಹೀಗಾಗಿ ಮಗು ಬೆಳಗ್ಗೆ ಮೃತ ಪಟ್ಟಿದೆ ಎಂದು ಪ್ರತಿಭಟನಕಾರರು ದೂರಿದರು.
ಮಗುವಿನ ಸಾವಿನಿಂದ ರೊಚ್ಚಿಗೆದ್ದ ಪೋಷಕರ ಪ್ರತಿಭಟನೆಗೆ ಕೆಲ ಸಂಘಟನೆಗಳು ಕೈ ಜೋಡಿಸಿದವು. ಇದರಿಂದ ಪ್ರತಿಭಟನೆ ಗಂಭೀರ ಸ್ವರೂಪ ಪಡೆಯಿತು. ಸಂಬಂಧಿಸಿದವರ ವಿರುದ್ಧ ಕ್ರಮಕೈಗೊಳ್ಳುವರೆಗೂ ಶವವನ್ನು ಪಡೆಯುವುದಿಲ್ಲ ಎಂದು ಪ್ರತಿಭಟನಕಾರರು ಪಟ್ಟು ಹಿಡಿದು ಸಂಜೆಯವರೆಗೆ ಕಿಮ್ಸ್ನಲ್ಲೇ ಪ್ರತಿಭಟನೆ ನಡೆಸಿದರು.