ಹುಬ್ಬಳ್ಳಿ : ಯಾವುದೇ ಸರಕಾರದ ಪದ್ಧತಿ ಇರುವ ರಾಷ್ಟ್ರವಿರಲಿ ಅಲ್ಲೊಂದು ಸಂವಿಧಾನವು ಇರುವುದು ಅತ್ಯವಶ್ಯಕ. ಸಂವಿಧಾನ ಆ ರಾಷ್ಟ್ರದ ಜೀವ, ಉಸಿರು ಆದ್ದರಿಂದ ಸಂವಿಧಾನಕಿಂತ ಮೀಗಿಲಾಗಿದ್ದು ಯಾವುದು ಇಲ್ಲ ಎಂದು ಎಂದು ಹೈಕೋರ್ಟ್ನ ಹಿರಿಯ ವಕೀಲ ಎಸ್.ಪಿ.ಶಂಕರ್ ಹೇಳಿದರು.
ನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಲ್ಲಿ ಭಾನುವಾರ ಸಂವಿಧಾನ ದಿನದ ಆಚರಣೆ, ಕೆಎಸ್ಎಲ್ಯು ಜರ್ನಲ್ ಬಿಡುಗಡೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂವಿಧಾನ ಎಲ್ಲಾ ಕಾನೂನುಗಳ ತಾಯಿ. ಇದು ಸರ್ವಶ್ರೇಷ್ಠ ಕಾನೂನಾಗಿದೆ. ಸಂವಿಧಾನದಲ್ಲಿ ನೀಡಲಾದ ಮೂಲಭೂತ ಹಕ್ಕುಗಳನ್ನು ಕಾನೂನಿನಡಿ ಚಲಾಯಿಸಲು ಅನುಮತಿಸಲಾಗಿದೇ ಹೊರತು ಕಾನೂನಿನ ವಿರುದ್ಧ ರೀತಿಯಲ್ಲಿ ಅಲ್ಲ ಎಂದು ಹೇಳಿದರು.
ಭಾರತದ ಸಂವಿಧಾನದ ಕರಡು ಪ್ರತಿಯನ್ನು ನವೆಂಬರ್ 26,1949ರಂದು ದೇಶದ ನಾಗರಿಕರಿಗೆ ಸಂವಿಧಾನ ರಚನಾ ಸಭೆಯು ಅರ್ಪಿಸಿದ್ದರಿಂದ ಪ್ರತಿ ವರ್ಷ ನವೆಂಬರ 26 ರಂದು ಕಾನೂನು ದಿನಾಚಾರಣೆ ಅಥವಾ ಸಂವಿಧಾನ ದಿನಾಚಾರಣೆ ಎಂದು ಆಚರಣೆ ಮಾಡುತ್ತೇವೆ ಹೇಳಿದರು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎಸ್.ಬಳ್ಳೊಳ್ಳಿ ಮಾತನಾಡಿ, ಎಲ್ಲ ವಿದ್ಯಾರ್ಥಿಗಳು ಇಂತಹ ಸಂಸ್ಥೆಯಲ್ಲಿ ಕಲಿಯಲು ಅವಕಾಶ ಸಿಕ್ಕಿರುವುದನ್ನು ಸದುಪಯೋಗ ಮಾಡಿಕೊಂಡು ಒಳ್ಳೆಯ ನಾಗರೀಕರಾಗಿ ಬಾಳಬೇಕೆಂದು ಎಂದು ಹೇಳಿದರು.
ಹಿರಿಯ ದಿವಾಣಿ ನ್ಯಾಯಾಧೀಶ ಆರ್.ಎಸ್.ಚಿನ್ನಣ್ಣನವರ ಮಾತನಾಡಿ, ಅನ್ಯಾಯಕ್ಕೆ ಒಳಗಾದವರು, ಬಡ ಜನರು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದಂತಹ ಮತ್ತು ತುಳಿತಕ್ಕೆ ಒಳಗಾದವರು ತಮ್ಮ ಹಕ್ಕಿಗಾಗಿ ಕೋರ್ಟಿನ ಖರ್ಚನ್ನು ಭರಿಸಲು ಸಾದ್ಯವಿಲ್ಲದಿದ್ದರೆ ಅಂತವರು ಕಾನೂನು ಸೇವಾ ಪ್ರಾಧಿಕಾರದ ಸೇವೆ ಪಡೆಯಬಹುದು ಎಂದು ಸಲಹೆ ನೀಡಿದರು. ಕುಲಪತಿ ಪ್ರೊ.ಡಾ.ಸಿ.ಎಸ್.ಪಾಟೀಲ ಮಾತನಾಡಿದರು. ಡಾ.ರತ್ನಾ ಆರ್. ಭರಮಗೌಡರ್, ಡಾ.ಜಿ.ಬಿ.ಪಾಟೀಲ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.