ಆ್ಯಪ್ನಗರ

ಪ್ರತಿಭಟನೆಗೆ ಸೀಮಿತವಾದ ಬಂದ್‌, ಸಹಜವಾಗಿದ್ದ ಜನಜೀವನ

ಹುಬ್ಬಳ್ಳಿ : ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಎರಡನೇ ದಿನದ ಭಾರತ ಬಂದ್‌ಗೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

Vijaya Karnataka 10 Jan 2019, 5:00 am
ಹುಬ್ಬಳ್ಳಿ : ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಎರಡನೇ ದಿನದ ಭಾರತ ಬಂದ್‌ಗೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
Vijaya Karnataka Web DRW-9MANJU2A
ಹುಬ್ಬಳ್ಳಿ ಹಳೇ ಬಸ್‌ ನಿಲ್ದಾಣದಲ್ಲಿ ಪೊಲೀಸರು ಬಸ್‌ ಸಂಚಾರ ತಡೆದಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.


ಎಂದಿನಂತೆ ಬೆಳಗ್ಗೆಯಿಂದಲೇ ಜನಜೀವನ ಆರಂಭವಾಯಿತು. ಸಾರಿಗೆ ಸಂಸ್ಥೆ ಬಸ್‌ಗಳು ಹಾಗೂ ಖಾಸಗಿ ವಾಹನಗಳು ಯಥಾ ಸ್ಥಿತಿಯಲ್ಲಿ ರಸ್ತೆಗೆ ಇಳಿದವು. ಮೊದಲ ದಿನ ನಡೆದ ಶಾಂತಿಯುತ ಬಂದ್‌ಗೆ ಸರಕಾರಿ ಶಾಲೆ-ಕಾಲೇಜು ಹಾಗೂ ಕಚೇರಿಗೆ ರಜೆ ಘೋಷಿಸಿದ್ದರಿಂದ ಹುಬ್ಬಳ್ಳಿ ಸಂಪೂರ್ಣ ಸ್ತಬ್ಧಗೊಂಡಿತ್ತು. ಆದರೆ ಎರಡನೇ ದಿನ ಸರಕಾರಿ ಹಾಗೂ ಖಾಸಗಿ ಕಚೇರಿಗಳು, ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಅಂಗಡಿ ಮುಂಗಟ್ಟುಗಳು ಆರಂಭವಾಗಿದ್ದರಿಂದ ಜನರಿಗೆ ಬಂದ್‌ನ ಯಾವುದೇ ಬಿಸಿ ತಟ್ಟಲಿಲ್ಲ. ಬೆಳಗ್ಗೆಯಿಂದಲೇ ಸರಕಾರಿ ಮತ್ತು ಖಾಸಗಿ ಬಸ್‌ ಸೇವೆ ಆರಂಭವಾಗಿದ್ದರಿಂದ ಜನರು ಯಾವುದೇ ಸಮಸ್ಯೆ ಇಲ್ಲದೇ ಸಂಚಾರ ನಡೆಸಿದರು. ಆದರೆ, ಮಧ್ಯಾಹ್ನದ ಹೊತ್ತಿಗೆ ಪೊಲೀಸರೇ ಬಂದು ಬಸ್‌ ಸಂಚಾರ ಸ್ಥಗಿತಗೊಳಿಸುವಂತೆ ಸೂಚಿಸಿದ್ದರಿಂದ ಸಾರ್ವಜನಿಕರು ಕಂಗಾಲಾದರಲ್ಲದೇ, ಪೊಲೀಸ್‌ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜನತಾ ಬಜಾರ, ದುರ್ಗದ್‌ಬೈಲ್‌, ಕೊಪ್ಪಿಕರ್‌ ರಸ್ತೆ ಹಾಗೂ ಸ್ಟೇಶನ್‌ ರಸ್ತೆಯಲ್ಲಿ ಅಂಗಡಿ-ಮುಂಗಟ್ಟುಗಳು ತೆರೆದಿದ್ದವು. ನಿತ್ಯದಂತೆ ವ್ಯಾಪಾರ -ವಹಿವಾಟುಗಳು ಚುರುಕಿನಿಂದ ನಡೆದವು. ಮಧ್ಯಾಹ್ನದ ವೇಳೆ ಹು-ಧಾ ನಗರದ ಜನಜೀವನ ಸಾಮಾನ್ಯ ಸ್ಥಿತಿಗೆ ಬರುವಂತಾಯಿತು. ಬಂದ್‌ ಹಿನ್ನೆಲೆ 3-4 ಪಟ್ಟು ದರ ವಸೂಲಿ ಮಾಡುತ್ತಿದ್ದ ಆಟೊ ಚಾಲಕರು ಬುಧವಾರ ಸಾಮಾನ್ಯ ದರದಲ್ಲಿ ಸೇವೆ ನೀಡಿದರು. ಮುಂಜಾಗ್ರತಾ ಕ್ರಮವಾಗಿ ಬಸ್‌ ನಿಲ್ದಾಣ, ರೇಲ್ವೆ ಸ್ಟೇಶನ್‌, ಚನ್ನಮ್ಮಾ ವೃತ್ತ, ಸಂಗೋಳ್ಳಿ ರಾಯಣ್ಣ ಸರ್ಕಲ್‌ ಸೇರಿದಂತೆ ಜನನೀಬಿಡ ಪ್ರದೇಶದಲ್ಲಿ ಪೊಲೀಸ್‌ ಬಂದೋಬಸ್ತ್‌ ನಿಯೋಜಿಸಲಾಗಿತ್ತು.

ಪೊಲೀಸ್‌ ಬೆಂಬಲಿತ ಬಂದ್‌..?

ಹಳೇ ಬಸ್‌ ನಿಲ್ದಾಣದಲ್ಲಿ ಬೆಳಗ್ಗೆ ಸುಗಮವಾಗಿ ಓಡಾಡುತ್ತಿದ್ದ ಬಸ್‌ಗಳನ್ನು ಮುಂಜಾಗ್ರತಾ ಕ್ರಮದ ನೆಪದಲ್ಲಿ ಪೊಲೀಸರು ಏಕಾಏಕಿ ಸ್ಥಗಿತಗೊಳಿಸಿದ್ದು, ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಯಿತು.

ಪ್ರತಿಭಟನಾಕಾರರ ಜತೆ ಬಸ್‌ ನಿಲ್ದಾಣಕ್ಕೆ ಆಗಮಿಸಿದ ಪೊಲೀಸರು ಬ್ಯಾರಿಕೇಡ್‌ ಹಾಕುವ ಮೂಲಕ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿದರು. ಈ ವೇಳೆ ಟಿಕೇಟ್‌ ಪಡೆದು ಬಸ್‌ನಲ್ಲಿ ಕುಳಿತಿದ್ದ ಪ್ರಯಾಣಿಕರು ಪೊಲೀಸರ ಒತ್ತಾಯಪೂರ್ವಕ ಬಂದ್‌ಗೆ ಸಿಡಿಮಿಡಿಗೊಂಡರು. ಈ ವೇಳೆ ಬಸ್‌ ನಿಲ್ದಾಣದ ಸಾರಿಗೆ ಸಿಬ್ಬಂದಿ ಮೇಲೆ ರೇಗಾಡಿದ ಡಿಸಿಪಿ ರವೀಂದ್ರ ಗಡಾದಿ ಬಸ್‌ ನಿಲ್ದಾಣದ ಎರಡು ಮಾರ್ಗವನ್ನು ಬ್ಯಾರಿಕೇಡ್‌ ಹಾಕಿ ಬಂದ್‌ ಮಾಡಿಸಿದರು.

ಏಕಾಏಕಿ ಬಸ್‌ ಸಂಚಾರ ಸ್ಥಗಿತಗೊಂಡ ಕಾರಣಕ್ಕೆ ಪ್ರಯಾಣಿಕರು ಪರದಾಡುವಂತಾಯಿತು. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಿದ್ದರೂ ಪೊಲೀಸರು ಏಕೆ ಬಸ್‌ ಸಂಚಾರಕ್ಕೆ ತಡೆ ಹಿಡಿಯಲಾಗಿದೆ? ಈ ಮೂಲಕ ಪರೋಕ್ಷವಾಗಿ ಪೊಲೀಸ್‌ರು ಬಂದ್‌ಗೆ ಬೆಂಬಲ ನೀಡಿದರೇ ಎಂಬ ಪ್ರಶ್ನೆ ಪ್ರಯಾಣಿಕರಲ್ಲಿ ಮೂಡವಂತಾಯಿತು.

ಶಾಂತಿಯುತ ಬಂದ್‌ ನಡೆಯುತ್ತಿದ್ದರು ಏಕಾಏಕಿ ಬಸ್‌ ನಿಲ್ದಾಣಕ್ಕೆ ಸಿಬ್ಬಂದಿ ಸಮೇತ ಪ್ರವೇಶಿಸಿದ ಡಿಸಿಪಿ ರವೀಂದ್ರ ಗಡಾದಿಯವರು ಬಸ್‌ ಸಂಚಾರಕ್ಕೆ ತಡೆ ಒಡ್ಡುವ ಮೂಲಕ ಪ್ರಯಾಣಿಕರಿಗೆ ಸಮಸ್ಯೆ ಉಂಟು ಮಾಡಿದ್ದಾರೆ ಎಂದು ಅಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸಿದರು. ಬಸ್‌ ಸಂಚಾರಕ್ಕೆ ಸಿದ್ಧವಿದ್ದರೂ ಪೊಲೀಸರು ಅನುಮತಿ ಇಲ್ಲದ ಕಾರಣಕ್ಕೆ ವೃದ್ಧರು, ವಿದ್ಯಾರ್ಥಿಗಳು, ಮಹಿಳೆಯರು ಕೆಲ ಗಂಟೆ ಪರದಾಡುವಂತಾಯಿತು. ಈ ವೇಳೆ ಬಸ್‌ ನಿಲ್ದಾಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಬುಧವಾರ ಬಸ್‌ ನಿಲ್ದಾಣಕ್ಕೆ ನುಗ್ಗಿದ ಪೊಲೀಸ್‌ರು ಬಸ್‌ ತಡೆದಿರುವುದು ಏಕೆ? ನಿಷೇದಾಜ್ಞೆ ಜಾರಿ ಇದ್ದರೂ ಬಸ್‌ ನಿಲ್ದಾಣಕ್ಕೆ ಬಂದು ಗಲಾಟೆ ಮಾಡಿದ ಕಾರ್ಮಿಕ ಮುಖಂಡರ ವಿರುದ್ಧ ಇಲಾಖೆ ಏಕೆ ಕ್ರಮಕೈಗೊಳ್ಳಲಿಲ್ಲ ? ಎನ್ನುವ ಪ್ರಶ್ನೆಗಳು ಸಾರ್ವಜನಿಕರಿಂದ ಕೇಳಿಬಂದವು.

ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಗರದ ಸ್ಟೇಶನ್‌ ರಸ್ತೆಯಿಂದ ತಹಸೀಲ್ದಾರ ಕಚೇರಿಯ ವರೆಗೆ ವಿವಿಧ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದವು. ನಂತರ ತಹಸೀಲ್ದಾರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಎಐಟಿಯುಸಿ, ಸಿಐಟಿಯು, ಜೆಸಿಟಿಯು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ನೂರಾರು ಕಾರ್ಮಿಕರು ಹಾಜರಿದ್ದರು.

ಬಂದ್‌ನಿಂದ 60 ಲಕ್ಷ ಹಾನಿ...

ಮಂಗಳವಾರ ನೀಡಿದ ಬಂದ್‌ ಕರೆಯ ಹಿನ್ನಲೆಯಲ್ಲಿ ಸಾರಿಗೆ ಬಸ್‌ ಸಂಚಾರ ಸ್ಥಗಿತಗೊಳಿಸಿದ್ದರಿಂದ ಹುಬ್ಬಳ್ಳಿ ವಿಭಾಗಕ್ಕೆ ಸುಮಾರು 60 ಲಕ್ಷ ರೂ. ಹಾನಿಯಾಗಿದೆ. ಬುಧವಾರ ಎರಡನೇ ದಿನದ ಬಂದ್‌ನಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಯಥಾ ಪ್ರಕಾರ ಬಸ್‌ ಸೇವೆ ಮುಂದುವರಿದಿದ್ದು, ಪೊಲೀಸ ಸಲಹೆ ಪಡೆದು ಎಲ್ಲೆಡೆ ಸಂಚಾರ ನಡೆಯಲಿದೆ ಎಂದು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ನಿಯಂತ್ರಣಾಧಿಕಾರಿ ಜಿಲ್ಲಾಧಿಕಾರಿ ವಿವೇಕಾನಂದ ವಿಶ್ವಜ್ಞ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ