ಧಾರವಾಡ: ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಯವರ ಸಾವಿನ ಮಾದರಿಯಲ್ಲೇ ದೇಶದ ಮತ್ತೊಬ್ಬ ನಾಯಕರಿಗೂ ಸಾವು ಸಂಭವಿಸುವ ಲಕ್ಷಣ ಇದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಶುಕ್ರವಾರ ಧಾರವಾಡ ಜಂಬೂ ಸವಾರಿ ಉತ್ಸವ ಸಮಿತಿ ಆಯೋಜಿಸಿದ್ದ ಜಂಬೂ ಸವಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ವೇಳೆ ಸುದ್ದಿಗಾರರೊಂದಿಗೆ ಶ್ರೀಗಳು ಮಾತನಾಡಿದರು.
''ಚೋಟುಗೇಣಿನ ವೀರ, ಭಾರತದ ಕುವರ, ತಕ್ಕಡಿಯ ಊರಿನಲ್ಲಿ ವಿಷ ಪಾನ ಮಾಡುವರು ಎಂಬುದಾಗಿ ಈ ಹಿಂದೆ ಹೇಳಿದ್ದೆ. ಅದರಂತೆ ಲಾಲ್ ಬಹದ್ದೂರ್ ಶಾಸ್ತ್ರೀಯವರ ಸಾವು ತಾಷ್ಕೆಂಟ್ನಲ್ಲಿ ಸಂಭವಿಸಿತ್ತು. ಈಗ ಅಂತಹದೇ ಘಟನೆ ಸಂಭವಿಸುವ ಲಕ್ಷಣ ಇದೆ'' ಎಂದು ಶ್ರೀಗಳು ಹೇಳಿದ್ದಾರೆ.
ಮೌಢ್ಯ ನಿಷೇಧ ಕಾಯ್ದೆ ಜಾರಿ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀಗಳು, ''ಮೌಢ್ಯ ನಿಷೇಧ ಕಾಯ್ದೆ ಜಾರಿ ಮಾಡ್ತಾ ಇರೋದು ಸ್ವಾಗತಾರ್ಹ. ಸತ್ಯ-ಅಸತ್ಯ, ಒಳ್ಳೆಯದು-ಕೆಟ್ಟದು, ಧರ್ಮ-ಅಧರ್ಮ ಎಲ್ಲವೂ ಇದೆ. ಮೊದಲಿನಿಂದಲೂ ಜನ ಸತ್ಯಕ್ಕಾಗಿ ಹೋರಾಟ ಮಾಡುತ್ತಾ ಇದ್ದಾರೆ. ಆದರೆ ಕೆಲವರು ಮೌಢ್ಯವನ್ನೇ ಬಂಡವಾಳ ಮಾಡಿಕೊಂಡು ಜನರ ಸುಲಿಗೆ ಮಾಡುತ್ತಿದ್ದಾರೆ. ಹೀಗಾಗಿ ಮೌಢ್ಯ ನಿಷೇಧ ಕಾಯ್ದೆ ಜಾರಿ ಮಾಡುತ್ತಿರುವುದು ಒಳ್ಳೆಯ ಕಾರ್ಯವಾಗಿದೆ'' ಎಂದರು.
ರಾಜ್ಯದಲ್ಲಿ ಕೆಲ ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಜನವರಿ ತಿಂಗಳವರೆಗೂ ಈ ಮಳೆ ಮುಂದುವರಿಯಲಿದೆ. ಹಿಂದೆ ಮಳೆ ಬಾರದೇ ರೈತರ ಸಂಕಷ್ಟಕ್ಕೆ ಸಿಲುಕಿದ್ದರೂ ಈ ಬಾರಿ ಮಳೆಯ ಕೊರತೆ ಇಲ್ಲ.
-ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಕೋಡಿಮಠ