ಆ್ಯಪ್ನಗರ

ಹುಬ್ಬಳ್ಳಿ ರೈಲ್ವೇ ನಿಲ್ದಾಣದಲ್ಲಿ ಸ್ಫೋಟ -ನಗರದಲ್ಲಿ ಹೈ ಅಲರ್ಟ್

ಹುಬ್ಬಳ್ಳಿ ರೈಲ್ವೇ ನಿಲ್ದಾಣದಲ್ಲಿ ಸ್ಪೋಟವೊಂದು ಸಂಭವಿಸಿದ್ದು ಸ್ಥಳದಲ್ಲಿ ಆತಂಕ ಸೃಷ್ಟಿಯಾಗಿದೆ. ಆಂಧ್ರ ಮೂಲದ ವ್ಯಕ್ತಿ ಹುಸೇನ್ ಸಾಬ್ ಘಟನೆಯಲ್ಲಿ ಗಾಯಗೊಂಡಿದ್ದು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.

Vijaya Karnataka Web 21 Oct 2019, 4:57 pm
ಹುಬ್ಬಳ್ಳಿ: ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ನಿಗೂಢ ಸ್ಫೋಟವೊಂದು ಸಂಭವಿಸಿದ್ದು ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ರೈಲಿನಲ್ಲಿ ಬಂದಿದ್ದ ಅನುಮಾನಾಸ್ಪದ ಬಾಕ್ಸ್‌ಗಳ ಪರಿಶೀಲನೆ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
Vijaya Karnataka Web hubballi


ಹುಬ್ಬಳ್ಳಿ ರೈಲ್ವೇ ನಿಲ್ದಾಣಕ್ಕೆ ಬಂದಿದ್ದ ವಿಜಯವಾಡ - ಅಮರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ 10 ಬಾಕ್ಸ್‌ಗಳು ಪತ್ತೆಯಾಗಿದ್ದವು. ರೈಲು ಕ್ಲೀನಿಂಗ್ ಮಾಡುವ ವೇಳೆ ಬಾಕ್ಸ್ ಬಗ್ಗೆ ಅನುಮಾನಗೊಂಡ ರೈಲ್ವೇ ಭದ್ರತಾ ಸಿಬಂಧಿ ತಪಾಸಣೆಗೆ ಮುಂದಾಗಿದ್ದಾರೆ. ರೈಲ್ವೇ ನಿಲ್ದಾಣದಲ್ಲಿ ಕ್ಯಾಂಟೀನ್ ನಡೆಸುತ್ತಿರುವ ವ್ಯಕ್ತಿ ಹುಸೇನ್ ಸಾಬ್ ಎಂಬುವವರಿಗೆ ಬಾಕ್ಸ್ ತೆರೆಯಲು ಸೂಚಿಸಿದ್ದಾರೆ. ಈ ವೇಳೆ ಏಕಾಏಕಿ ಸ್ಪೋಟ ಸಂಭವಿಸಿದೆ.

ಘಟನೆಯಿಂದ ಆಂಧ್ರಪ್ರದೇಶ ಮೂಲದ ಹುಸೇನ್ ಸಾಬ್ ಒಳಗೊಂಡಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಪೋಟದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು ನಿಲ್ದಾಣದ ಸುತ್ತ ತಪಾಸಣೆ ಕೈಗೊಳ್ಳಲಾಗುತ್ತಿದೆ.

ರೈಲಿನಲ್ಲಿ ಸಿಕ್ಕಿರುವ 10 ಅನುಮಾನಾಸ್ಪದ ಬಾಕ್ಸ್‌ಗಳು ಮಹಾರಾಷ್ಟ್ರ ಕೊಲ್ಲಾಪುರ ಶಾಸಕರ ಹೆಸರಿಗೆ ಬಂದಿರುವ ಬಾಕ್ಸ್‌ಗಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಾಕ್ಸ್‌ನಲ್ಲಿ ಪ್ರಕಾಶ್ ರಾವ್ ಅಬಿಟ್ಕರ್, ಬುಧರ್ ಘಡ್ ಎಂಎಲ್ಎ ಗರ್ಗೋಟಿ ಕೊಲ್ಹಾಪುರ ಎಂದು ಬರೆಯಲಾಗಿದೆ. ಜೊತೆಗೆ ಕೆಲವೊಂದು ರಾಜಕೀಯ ಬರಹಗಳು ಕಾಣಿಸಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಬಾಂಬ್ ಸ್ಫೋಟದ ತನಿಖೆ- ಜಗದೀಶ್ ಶೆಟ್ಟರ್

ಹುಬ್ಬಳ್ಳಿ ರೈಲ್ವೇ ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಪೋಟದ ಕುರಿತಾಗಿ ತನಿಖೆ ನಡೆಸಲಾಗುವುದು ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಅವರು, ಘಟನೆಯ ಕುರಿತಾಗಿ ಮಾಹಿತಿ ಲಭ್ಯವಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ