ಆ್ಯಪ್ನಗರ

ಈ ಕೂಡಲೇ ಸಿಎಂ ಯಡಿಯೂರಪ್ಪ 'ಒನ್ ಮ್ಯಾನ್ ಶೋ' ನಿಲ್ಲಿಸಲಿ: ಗುಂಡೂರಾವ್

ಬಿ ಎಸ್ ಯಡಿಯೂರಪ್ಪ, ಕೂಡಲೇ ಒನ್ ಮ್ಯಾನ್ ಶೋ ನಿಲ್ಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

Vijaya Karnataka Web 10 Aug 2019, 12:31 pm
ಹುಬ್ಬಳ್ಳಿ: ಪ್ರವಾಹ ಪೀಡಿತ ಪ್ರದೇಶಗಳಿಗೆ ಒಬ್ಬರೇ ಭೇಟಿ ನೀಡುತ್ತಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕೂಡಲೇ ಒನ್ ಮ್ಯಾನ್ ಶೋ ನಿಲ್ಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
Vijaya Karnataka Web dg


ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಂಡಿದೆ. ಮುಖ್ಯಮಂತ್ರಿಯಾಗಿ ಬಿಎಸ್‌ವೈ ಅಧಿಕಾರ ಸ್ವೀಕರಿಸಿಕೊಂಡು 15 ದಿನ ಕಳೆದರೂ, ಸಚಿವ ಸಂಪುಟ ಮಾತ್ರ ರಚನೆ ಮಾಡಿಲ್ಲ. ನೆರೆ ಪೀಡಿತ ಪ್ರದೇಶಗಳಲ್ಲಿ ಒಬ್ಬರೇ ಓಡಾಡುತ್ತಿದ್ದಾರೆ. ಎಲ್ಲ ಕಡೆ ಒಬ್ಬರೆ ಓಡಾಡಲು ಸಾಧ್ಯವಾಗುತ್ತಾ?, ಕೂಡಲೇ ಒನ್ ಮ್ಯಾನ್ ಶೋ ನಿಲ್ಲಿಸಬೇಕು ಎಂದಿದ್ದಾರೆ.

ನೆರೆ ಪರಿಹಾರ ಕಾರ್ಯವಷ್ಟೆ ಅಲ್ಲದೆ, ರಾಜ್ಯದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ವಿಧಾನಸೌಧ ಬಣಗುಡುತ್ತಿದೆ. ಆದರೆ, ಬಿಜೆಪಿಯವರೇಕೆ ಸಂಚಿವ ಸಂಪುಟ ರಚನೆ ಮಾಡಲು ವಿಳಂಬ ಮಾಡುತ್ತಿದ್ದಾರೋ ಗೊತ್ತಿಲ್ಲ. ಬಹುಶಃ ಅತೃಪ್ತ ಶಾಸಕರಿಗಾಗಿ ಕಾಯುತ್ತಿರಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಮುಖ್ಯಮಂತ್ರಿಗಳ ಅನುಯಾಯಿಗಳು ಧಂದೆ ನಡೆಸುತ್ತಿದ್ದಾರೆ. ವರ್ಗಾವಣೆ ಸೇರಿದಂತೆ ಹಲವು ಧಂದೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಗುಂಡೂರಾವ್ ಆರೋಪಿಸಿದರು. ಇದುವರೆಗೂ ಕೇಂದ್ರದಿಂದ ಯಾವೊಬ್ಬ ಸಚಿವರೂ ಕರ್ನಾಟಕಕ್ಕೆ ಬಂದು ಪ್ರವಾಹ ಪರಿಸ್ಥಿತಿ ಕುರಿತು ಮಾತಿಹಿ ಪಡೆದಿಲ್ಲ ಎಂದು ದೂರಿದರು.

ಪ್ರವಾಹ ಪೀಡಿತ ಪ್ರದೇಶಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಅವರು, 'ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ಸಮಸ್ಯೆಯಾಗಿತ್ತು. ಇಂದು ಕಾರ್ಯಕಾರಿಣಿ ಸಭೆ ಇರುವುದರಿಂದ ದೆಹಲಿಗೆ ತೆರಳಿದ್ದಾರೆ' ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿಗಳ ನಡೆ ಸಮರ್ಥಿಸಿಕೊಂಡರು.

ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರಕಾರವಿದ್ದಾಗ ಇದೇ ತರಹ ಪ್ರವಾಹ ಸಂಭವಿಸಿತ್ತು. ಆಗ ಯುಪಿಎ ಸರಕಾರ ಸಾಕಷ್ಟು ಪರಿಹಾರ ಘೋಷಿಸಿತ್ತು. ಈಗ ಕೇಂದ್ರ ಸರಕಾರ 5 ಸಾವಿರ ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡುವ ಕೆಲಸ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ