ಆ್ಯಪ್ನಗರ

ಕಾಗೆ ದ್ವೇಷ, ಕಂಗಾಲಾದ ರೈತ...!

ಹುಬ್ಬಳ್ಳಿ :ಹಾವುಗಳು ಅಷ್ಟೇ ದ್ವೇಷ ಸಾಧಿಸುವುದಿಲ್ಲ. ಕಾಗೆಗಳು ಸಹ ದ್ವೇಷ ಸಾಧಿಸುತ್ತವೆಯೇ? ರೈತನೊಬ್ಬನನ್ನು ಹೊಲಕ್ಕೆ ಬರದಂತೆ ಕಾಗೆಗಳು ತಡೆಯುವ ಮೂಲಕ ಇದು ಸಾಬೀತಾಗಿದೆ. ಹೌದು, ಕುಂದಗೋಳ ತಾಲೂಕಿನ ಅಲ್ಲಾಪುರ ಗ್ರಾಮದಲ್ಲಿ ಇಂತಹದೊಂದು ಅಚ್ಚರಿ ಇತ್ತೀಚಿನ ಕೆಲ ದಿನಗಳಲ್ಲಿ ನಿತ್ಯ ನಡೆಯುತ್ತಿದೆ.

Vijaya Karnataka 4 Jul 2018, 5:52 pm
ಹುಬ್ಬಳ್ಳಿ :ಹಾವುಗಳು ಅಷ್ಟೇ ದ್ವೇಷ ಸಾಧಿಸುವುದಿಲ್ಲ. ಕಾಗೆಗಳು ಸಹ ದ್ವೇಷ ಸಾಧಿಸುತ್ತವೆಯೇ? ರೈತನೊಬ್ಬನನ್ನು ಹೊಲಕ್ಕೆ ಬರದಂತೆ ಕಾಗೆಗಳು ತಡೆಯುವ ಮೂಲಕ ಇದು ಸಾಬೀತಾಗಿದೆ. ಹೌದು, ಕುಂದಗೋಳ ತಾಲೂಕಿನ ಅಲ್ಲಾಪುರ ಗ್ರಾಮದಲ್ಲಿ ಇಂತಹದೊಂದು ಅಚ್ಚರಿ ಇತ್ತೀಚಿನ ಕೆಲ ದಿನಗಳಲ್ಲಿ ನಿತ್ಯ ನಡೆಯುತ್ತಿದೆ.
Vijaya Karnataka Web crow hatred ravenous farmer
ಕಾಗೆ ದ್ವೇಷ, ಕಂಗಾಲಾದ ರೈತ...!


ಗ್ರಾಮದ ಸಿದ್ದಪ್ಪ ಭದ್ರಾಪೂರ ಎಂಬಾತನೆ ಕಾಗೆಗಳ ದ್ವೇಷಕ್ಕೆ ಕಂಗಾಲಾದ ರೈತ. ಈತ ಹೊಲಕ್ಕೆ ಕಾಲಿಡುತ್ತಿದ್ದಂತೆ ಆತನನ್ನು ಸುತ್ತುವರೆದು ಕಾ..ಕಾ... ಎನ್ನುತ್ತಾ ಕಿರುಚಲು ಶುರು ಮಾಡುವ ಕಾಗೆಗಳು ಒಂದು ಹೆಜ್ಜೆ ಮುಂದೆ ಇಟ್ಟರೆ ಸಾಕು ಆತನ ತಲೆ ಕುಕ್ಕಲು ಮುಂದಾಗುತ್ತವೆ.

ಹೀಗೆ ದಿಢೀರ್‌ ಪ್ರತ್ಯಕ್ಷವಾಗುವ ಕಾಗೆಗಳ ಕಾಟದಿಂದ ಬೇಸತ್ತಿರುವ ರೈತ ಇದರಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು ಎಂದು ತೋಚದೇ ಚಿಂತಾಕ್ರಾಂತನಾಗಿದ್ದಾನೆ.

ಏಕೆ ಈ ದ್ವೇಷ?:

ರೈತ ಸಿದ್ದಪ್ಪನ ಜಮೀನಿನಲ್ಲಿದ್ದ ಗಿಡದಲ್ಲಿ ಕಾಗೆಗಳು ಗೂಡನ್ನು ಕಟ್ಟಿದ್ದವು. ಕಳೆದ ಕೆಲ ದಿನಗಳ ಹಿಂದೆ ಸುರಿದ ಮಳೆ-ಗಾಳಿಗೆ ಗೂಡು ಕೆಳಗೆ ಬಿದ್ದುಮರಿಗಳು ಸಾವನ್ನಪ್ಪಿದ್ದವು. ಮಳೆ ನಿಂತ ಮೇಲೆ ಗಿಡಕ್ಕೆ ಬಂದ ಕಾಗೆಗಳು ಗೂಡು, ಮರಿ ಇಲ್ಲದ್ದನ್ನು ಕಂಡಿವೆ. ಅದೇ ಸಮಯಕ್ಕೆ ಸಿದ್ದಪ್ಪ ಸತ್ತು ಬಿದ್ದ ಕಾಗೆಮರಿಗಳನ್ನು ಹೊಲದಿಂದ ಹೊರಗೆ ಬಿಸಾಕಿ ಮನೆಗೆ ಹೋಗಿದ್ದಾನೆ. ಈತನೇ ತನ್ನ ಮರಿಗಳನ್ನು ಕೊಂದಿದ್ದಾನೆ ಎಂದುಕೊಂಡ ಕಾಗೆಗಳು ಬೆನ್ನು ಬಿದ್ದಿವೆ.

ಈ ಘಟನೆ ನಡೆದು ಒಂದೆರಡು ವಾರಗಳೇ ಗತಿಸಿವೆ. ಅಂದಿನಿಂದ ಈವರೆಗೆ ಮರಿಗಳನ್ನು ಹುಡುಕಾಡುತ್ತಾ ಕಾಗೆಗಳ ಹಿಂಡು ಗಿಡದ ಸುತ್ತ ಠಿಕಾಣಿ ಹೂಡಿವೆ. ಅಲ್ಲದೇ ರೈತ ಬಂದರೆ ಸಾಕು ಆತನನ್ನ ಸುತ್ತುವರಿದು ಜಮೀನು ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ.

ಬಿತ್ತನೆಗೂ ಬಿಟ್ಟಿಲ್ಲ:

ಮಳೆ ಚೆನ್ನಾಗಿ ಆಗಿದ್ದರಿಂದ ಸಿದ್ದಪ್ಪ ಜಮೀನು ಹದ ಮಾಡಿಕೊಂಡು ಬಿತ್ತನೆಗೆ ಸಜ್ಜಾಗಿದ್ದಾನೆ. ಆದರೆ, ರೈತನಿಗೆ ಕಾಗೆಗಳು ಕೃಷಿ ಮಾಡಲು ಆಸ್ಪದ ನೀಡುತ್ತಿಲ್ಲ.

ಇನ್ನು ಬೇರೆ ಯಾರು ಜಮೀನಿಗೆ ಬಂದರೂ ಕಾಗೆಗಳು ಬಿಡುತ್ತಿಲ್ಲ. ಹೀಗಾಗಿ ಏನು ಮಾಡಬೇಕು ಎಂದು ತೋಚದೇ ರೈತ ಕಂಗಾಲಾಗಿದ್ದಾನೆ.

ಭಯದ ವಾತಾವರಣ:

ಜಮೀನಿನಲ್ಲಿರುವ ಗಿಡದಲ್ಲಿ ಕಾಗೆಗಳು ಬೀಡು ಬಿಟ್ಟಿದ್ದು ಯಾರೇ ಕಾಲಿಟ್ಟರೂ ಅವರನ್ನು ಸುತ್ತುವರಿದು ಭಯದ ವಾತಾವರಣ ಮೂಡಿಸುತ್ತಿವೆ. ತಮ್ಮ ಮರಿಗಳನ್ನು ಕಳೆದುಕೊಂಡಿರುವ ಮೂಕ ಪಕ್ಷಿಗಳ ರೋದನೆ ಮಾಡುತ್ತಿವೆ. ರೈತ ಸಿದ್ದಪ್ಪ ಕುಟುಂಬ ಆತಂಕದಲ್ಲಿದ್ದು, ದೇವರ ಮೊರೆ ಹೋಗಿದೆ. ಗ್ರಾಮಸ್ಥರಲ್ಲೂ ಸಹ ಭಯ ಮೂಡಿದ್ದು, ಕಾಗೆಗಳ ತಂಟೆಗೆ ಯಾರೊಬ್ಬರೂ ಹೋಗುವುದು ಬೇಡ ಎಂದು ಸುಮ್ಮನಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ