ಆ್ಯಪ್ನಗರ

ಪ್ರತಿಭಟನಾಕಾರರ ಬಂಧನ, ಬಿಡುಗಡೆ

ಧಾರವಾಡ : ನಗರದ ಹೆಬ್ಬಳ್ಳಿ ಅಗಸಿಯ ಮುರುಘರಾಜೇಂದ್ರನಗರದಲ್ಲಿ ತೆರೆಯಲಾಗುತ್ತಿರುವ ಬಾರ್‌ ಬಂದ್‌ ಮಾಡುವಂತೆ ಆಗ್ರಹಿಸಿ ಸಾರ್ವಜನಿಕರು ಉಗ್ರ ಪ್ರತಿಭಟನೆ ನಡೆಸಿದ್ದರ ಪರಿಣಾಮ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡ ಹೋದ ಘಟನೆ ಗುರುವಾರ ನಡೆದಿದೆ.

Vijaya Karnataka 17 May 2019, 5:00 am
ಧಾರವಾಡ : ನಗರದ ಹೆಬ್ಬಳ್ಳಿ ಅಗಸಿಯ ಮುರುಘರಾಜೇಂದ್ರನಗರದಲ್ಲಿ ತೆರೆಯಲಾಗುತ್ತಿರುವ ಬಾರ್‌ ಬಂದ್‌ ಮಾಡುವಂತೆ ಆಗ್ರಹಿಸಿ ಸಾರ್ವಜನಿಕರು ಉಗ್ರ ಪ್ರತಿಭಟನೆ ನಡೆಸಿದ್ದರ ಪರಿಣಾಮ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡ ಹೋದ ಘಟನೆ ಗುರುವಾರ ನಡೆದಿದೆ.
Vijaya Karnataka Web DRW-16SM-2F


ಹೆಬ್ಬಳ್ಳಿ ಅಗಸಿಯಲ್ಲಿನ ಸಾರ್ವಜನಿಕರು ಈ ಹಿಂದೆ ಕೂಡ ಬಾರ್‌ ಬಂದ್‌ ಮಾಡುವಂತೆ ಪ್ರತಿಭಟನೆ ಮಾಡಿದ್ದರು. ಆದರೆ, ಮಾಲೀಕರು ಬಾರ್‌ ತೆರೆಯಲು ಅಡೆತಡೆ ಉಂಟು ಮಾಡುತ್ತಿದ್ದಾರೆ ಎಂದು 16 ಮಂದಿ ಮೇಲೆ ದೂರು ದಾಖಲಿಸಿದ್ದರು. ಈ ದೂರಿನ ವಿಚಾರಣೆ ನಡೆಸಿದ್ದ ನ್ಯಾಯಾಲಯ ಮೇ 28 ರಂದು ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲು ನಿಗದಿಪಡಿಸಿತ್ತು. ಅಲ್ಲಿಯವರೆಗೆ ಯತಾಸ್ಥಿತಿ ಕಾಯ್ದುಕೊಂಡು ಹೋಗುವಂತೆ ಕೋರ್ಟ್‌ ಆದೇಶ ನೀಡಿತ್ತು. ಹೀಗಾಗಿ ಗುರುವಾರ ಮಾಲೀಕ ಬಾರ್‌ ತೆರೆಯಲು ಬಂದಾಗ ವಿರೋಧ ವ್ಯಕ್ತಪಡಿಸಿದ ಸಾರ್ವಜನಿಕರು ನಡು ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದರು.

ಈ ವೇಳೆ ಪೊಲೀಸರು ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಘೋಷಣೆಗಳನ್ನು ಕೂಗಿದರು. ಜತೆಗೆ ಇಲ್ಲಿ ಯಾವುದೇ ಕಾರಣಕ್ಕೂ ಬಾರ್‌ ತೆರೆಯಬಾರದು ಎಂದು ಆಗ್ರಹಿಸಿದರು.ಬಾರ್‌ ಸಮೀಪ ಶಾಲೆ, ಕಾಲೇಜು, ಆಶ್ರಮಗಳಿವೆ. ಹೀಗಾಗಿ ಬಾರ್‌ನ್ನು ಯಾವುದೇ ಕಾರಣಕ್ಕೂ ತೆರೆಯಬಾರದು ಎಂದು ಒಕ್ಕೂರಲಿನಿಂದ ಆಗ್ರಹಿಸಿದರು,ಈ ಸಂದರ್ಭದಲ್ಲಿ ಕೆಲವರು ಅಂಗಡಿಯತ್ತ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಪರಿಸ್ಥಿತಿ ಕೈಮೀರಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಶಹರ ಠಾಣೆ ಪೊಲೀಸರು ಹಾಗೂ ಅಬಕಾರಿ ಇಲಾಖೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರಿಗೆ ನ್ಯಾಯಾಲಯದ ಆದೇಶ ಮನವರಿಕೆ ಮಾಡಲು ಮುಂದಾದರು. ಇದರಿಂದ ಸಾರ್ವಜನಿಕರು ಹಾಗೂ ಪೊಲೀಸರ ಮಧ್ಯೆ ತೀವ್ರ ಜಟಾಪಟಿ ನಡೆದ ಪರಿಣಾಮ ಪೊಲೀಸರು ಹೆಣ್ಣು ಮಕ್ಕಳು ಸೇರಿದಂತೆ ಕೆಲ ಸಾರ್ವಜನಿಕರನ್ನು ವಾಹನದಲ್ಲಿ ಹತ್ತಿಸಿಕೊಂಡು ಠಾಣೆಗೆ ಕರೆದುಕೊಂಡು ಹೋದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಾರ್ವಜನಿಕರು ಪೊಲೀಸರ ಜತೆಗೆ ಮತ್ತಷ್ಟು ವಾಗ್ವಾದ ನಡೆಸಿದರು.

ಮಾಜಿ ಪಾಲಿಕೆ ಸದಸ್ಯ ಶಂಕರ ಶೆಳಕೆ, ಸುರೇಶ ಪಟ್ಟಣಶೆಟ್ಟಿ, ರವಿ ಯಲಿಗಾರ, ಸಚಿನ ಹೆಗ್ಗೇರಿ ಸೇರಿದಂತೆ ಇಬ್ಬರು ಮಹಿಳೆಯರು ಸೇರಿ ಸುಮಾರು 30ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿ ಶಹರ ಪೊಲೀಸ್‌ ಠಾಣೆಗೆ ಕರೆದೊಯಲಾಯಿತು. ನಂತರ ಸಂಜೆ ವೇಳೆಗೆ ಜಾಮೀನಿನ ಮೇಲೆ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಲಾಗಿದೆ. ಮುಂಜಾಗ್ರತ ಕ್ರಮವಾಗಿ ಬಾರ್‌ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ