ಧಾರವಾಡ: ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಕೇವಲ ಅಸ್ಪೃಶ್ಯರಿಗೆ ಮಾತ್ರವಲ್ಲದೇ ಕಾರ್ಮಿಕರು ಹಾಗೂ ಮಹಿಳೆಯರಿಗೂ ಕೂಡ ಕಾನೂನು ರೂಪಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಸರ್.ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ.ಎಸ್.ಆರ್.ಮಂಜುಳಾ ಅಭಿಪ್ರಾಯಪಟ್ಟರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ಸನ್ಮತಿ ಮಾರ್ಗದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ವಿಚಾರ ಸಂಕಿರಣದಲ್ಲಿ ಕಾನೂನು ಕ್ಷೇತ್ರಕ್ಕೆ ಡಾ.ಅಂಬೇಡ್ಕರ ಅವರ ಕೊಡುಗೆ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ಜೀತ ಪದ್ಧತಿ, ಒತ್ತಾಯದ ದುಡಿಮೆ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ, ಏಕರೂಪ ನಾಗರಿಕ ಸಂಹಿತೆ ರೂಪಿಸಿದ ಡಾ.ಅಂಬೇಡ್ಕರ್ ಅವರ ಕಾಳಜಿ ಕೇವಲ ಅಸ್ಪೃಶ್ಯರಿಗೆ ಸೀಮಿತವಾಗಿರಲಿಲ್ಲ ಎಂದರು.
ರಾಷ್ಟ್ರದ ಹಿತಾಸಕ್ತಿ ಅಡಿಯಲ್ಲಿ ದುಡಿಯುವ ಮಹಿಳೆಗೆ ಕಡ್ಡಾಯವಾಗಿ ಹೆರಿಗೆ ರಜೆÜ ನೀಡಬೇಕು. ಮಹಿಳೆಯರಿಗೆ ಆಸ್ತಿಯಲ್ಲಿ ಸಮಪಾಲು ನೀಡಬೇಕು ಎಂದು ಮೊಟ್ಟಮೊದಲ ಬಾರಿಗೆ ಪ್ರತಿಪಾದಿಸಿದ ಕೀರ್ತಿ ಅಂಬೇಡ್ಕರ ಅವರಿಗೆ ಸಲ್ಲುತ್ತದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ ಬಗ್ಗೆ ಅಂಬೇಡ್ಕರ ಅವರು ಆಗಲೇ ವಿರೋಧ ವ್ಯಕ್ತಪಡಿಸಿದ್ದರು. ದಾಮೋದರ್ ಕಣಿವೆ, ಹಿರಾಕುಡ್ ಯೋಜನೆ ಮೂಲಕ ನೀರಾವರಿ, ಉದ್ಯೋಗ ಕ್ಷೇತ್ರಕ್ಕೂ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ವಿಚಾರ ಸಂಕಿರಣ ಉದ್ಘಾಟಿಸಿದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎನ್.ಮುನಿರಾಜು ಮಾತನಾಡಿ, ದಲಿತ ಎಂಬ ಪದ ಜಾತಿ ಸೂಚಕವಲ್ಲ ಅದು ಎಲ್ಲ ಜಾತಿಗಳಲ್ಲಿನ ಬಡವರಿಗೂ ಅನ್ವಯಿಸುತ್ತದೆ ಎಂದರು. ಅಂಬೇಡ್ಕರ್ ಅವರ ಪ್ರತಿಭೆಯನ್ನು ಜಗತ್ತಿನ ಎಲ್ಲಾ ರಾಷ್ಟ್ರಗಳೂ ಗೌರವಿಸುತ್ತಿವೆ. ಕಾನೂನಿನಿಂದ ಮಾತ್ರ ಜಾತಿ ಪದ್ಧತಿ ನಿವಾರಣೆ ಸಾಧ್ಯವಿಲ್ಲ. ನಮ್ಮ ಮನಸ್ಥಿತಿಗಳು ಬದಲಾಗಬೇಕು . ಇಂದಿಗೂ ಕೆಲವೆಡೆ ಎಸ್ಸಿ. ಹಾಗೂ ಎಸ್.ಟಿ ವಿದ್ಯಾರ್ಥಿಗಳ ವಸತಿನಿಲಯ ಸ್ಥಾಪನೆಗೆ ಸಾರ್ವಜನಿಕರು ತಮ್ಮ ಮನೆಗಳನ್ನು ನೀಡಲು ಹಿಂಜರಿಯುತ್ತಿದ್ದಾರೆ ಎಂದು ವಿಷಾದಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶಾರದಾ ಕೋಲಕಾರ, ಶೋಷಿತ ಸಮುದಾಯಗಳಲ್ಲಿ ಜನಿಸಿ ಶಿಕ್ಷ ಣ ಪಡೆದು ಮುಂದೆ ಬಂದವರು ತಮ್ಮ ಹಿನ್ನೆಲೆಯನ್ನು ಮರೆಯಬಾರದು. ನೋವಿನ ಕಿಚ್ಚು ಆರದಂತೆ ನೋಡಿಕೊಳ್ಳಬೇಕು. ಹೋರಾಟದ ಸ್ವಭಾವ ಮೈಗೂಡಿಸಿಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷ ತೆ ವಹಿಸಿದ್ದ ರಂಗಾಯಣದ ಆಡಳಿತಾಧಿಕಾರಿ ಬಸವರಾಜ ಹೂಗಾರ, ಕೇವಲ ಪಠ್ಯದ ಓದಿನಿಂದ ಆತ್ಮವಿಶ್ವಾಸ ಹುಟ್ಟುವುದಿಲ್ಲ. ವಿದ್ಯಾರ್ಥಿಗಳು ಬಸವಣ್ಣ, ಕನಕದಾಸ, ಮಹಾತ್ಮಾ ಗಾಂಧೀಜಿ, ಅಂಬೇಡ್ಕರ್ ಅವರ ಚಿಂತನೆಗಳನ್ನು ಓದಿ ಅರ್ಥಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಾ.ಬಿ.ಆರ್.ಅಂಬೇಡ್ಕರ ಸಾಧನೆಯ ಹಾದಿ ಎಂಬ ವಿಷಯದ ಕುರಿತು ಲಕ್ಷ್ಮಣ ಬಕ್ಕಾಯಿ ಮಾತನಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ನಿವೃತ್ತ ಜಿಲ್ಲಾ ವಾರ್ತಾಧಿಕಾರಿ ಪಿ.ಎಸ್.ಹಿರೇಮಠ , ವಾರ್ತಾ ಸಹಾಯಕ ಸಿ.ಬಿ.ಬೋವಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಎಂ.ಬಿ.ಸಣ್ಣೇರ ಸೇರಿದಂತೆ ಮತ್ತಿತರು ಪಾಲ್ಗೊಂಡಿದ್ದರು.