ಆ್ಯಪ್ನಗರ

ಕೇಂದ್ರ ಸರಕಾರದ ಕೃಷಿ ಕಾಯ್ದೆ ವಿರುದ್ಧ ದಕ್ಷಿಣ ಭಾರತದಲ್ಲೂ ಹೋರಾಟ

ಮಾ. 20ರಂದು ಶಿವಮೊಗ್ಗ, ಮಾ. 21ರಂದು ಹಾವೇರಿ ಹಾಗೂ ಮಾ. 31ರಂದು ಬೆಳಗಾವಿಯಲ್ಲಿ ಬೃಹತ್ ಸಮಾವೇಶ ನಡೆಸಲಾಗುತ್ತಿದೆ. ಮೂರೂ ಸಮಾವೇಶಗಳಲ್ಲಿ ಭಾರತ ರೈತ ಒಕ್ಕೂಟದ ನೇತಾರ ರಾಕೇಶ್‌ ಟಿಕಾಯತ್, ಯದುವೀರಸಿಂಗ್, ದರ್ಶನ ಫಾಲ್ ಭಾಗವಹಿಸಲಿದ್ದಾರೆ

Vijaya Karnataka Web 27 Feb 2021, 6:57 pm
ಧಾರವಾಡ: ಕೇಂದ್ರ ಸರಕಾರದ ಕೃಷಿ ಕಾಯ್ದೆ ತಿದ್ದುಪಡಿ ವಿರುದ್ಧ ದಕ್ಷಿಣ ಭಾರತದಲ್ಲೂ ಹೋರಾಟ ರೂಪುಗೊಳ್ಳುತ್ತಿದ್ದು, ಇದಕ್ಕೆ ಪೂರಕ ಎಂಬಂತೆ ಕರ್ನಾಟಕ ಸಂಯುಕ್ತ ಕಿಸಾನ ಮೋರ್ಚಾ ನೇತೃತ್ವದಲ್ಲಿ ಮುಂಬರುವ ಮಾರ್ಚ್ ತಿಂಗಳು ರಾಜ್ಯಾದ್ಯಂತ ಮೂರು ಬೃಹತ್ ಸಮಾವೇಶಗಳನ್ನು ನಡೆಸಲು ತೀರ್ಮಾನಿಸಲಾಗಿದೆ.
Vijaya Karnataka Web ರೈತರ ಪ್ರತಿಭಟನೆ
ರೈತರ ಪ್ರತಿಭಟನೆ


ಈ ಕುರಿತಂತೆ ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರೈತ ಮುಖಂಡರಾದ ಕೆ.ಟಿ. ಗಂಗಾಧರ, ಚುಕ್ಕಿ ನಂಜುಂಡಸ್ವಾಮಿ, ರೈತ ಸಂಘಗಳ ಮುಖಂಡರು, ಕನ್ನಡಪರ ಸಂಘಟನೆಗಳು, ಸಾಹಿತಿಗಳು, ಹೋರಾಟಗಾರರನ್ನು ಒಂದುಗೂಡಿಸಿ ಸಂಯುಕ್ತ ಕಿಸಾನ ಮೋರ್ಚಾ ಅಸ್ತಿತ್ವಕ್ಕೆ ತರಲಾಗಿದೆ.
ಈ ಸಂಘಟನೆಯನ್ನು ಕರ್ನಾಟಕ ಮಾತ್ರವಲ್ಲ ತಮಿಳುನಾಡು, ಆಂಧ್ರ, ಕೇರಳ, ತೆಲಂಗಾಣ ರಾಜ್ಯಗಳಿಗೂ ವಿಸ್ತರಿಸಲಾಗುವುದು ಎಂದರು.

ಕೇಂದ್ರ ಸರಕಾರ ಯಾವುದೇ ಚರ್ಚೆ ನಡೆಸದೆಯೇ ಸುಗ್ರಿವಾಜ್ಞೆ ಮೂಲಕ ಕೃಷಿ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ. ಹೀಗಾಗಿ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಹೋರಾಟ ರೂಪಿಸಲಾಗುತ್ತಿದೆ. ಮಾ. 20ರಂದು ಶಿವಮೊಗ್ಗ, ಮಾ. 21ರಂದು ಹಾವೇರಿ ಹಾಗೂ ಮಾ. 31ರಂದು ಬೆಳಗಾವಿಯಲ್ಲಿ ಬೃಹತ್ ಸಮಾವೇಶ ನಡೆಸಲಾಗುತ್ತಿದೆ. ಮೂರೂ ಸಮಾವೇಶಗಳಲ್ಲಿ ಭಾರತ ರೈತ ಒಕ್ಕೂಟದ ನೇತಾರ ರಾಕೇಶ್‌ ಟಿಕಾಯತ್, ಯದುವೀರಸಿಂಗ್, ದರ್ಶನ ಫಾಲ್ ಭಾಗವಹಿಸಲಿದ್ದಾರೆ ಎಂದರು.

ದಿಲ್ಲಿ ಹೋರಾಟಗಾರರ ಜತೆ ನಾವೂ..

ಪ್ರಧಾನಿ ನರೇಂದ್ರ ಮೋದಿ ಅವರು ದಿಲ್ಲಿಯಲ್ಲಿರುವ ರೈತ ಹೋರಾಟ ಪಂಜಾಬ್, ಹರಿಯಾಣಕ್ಕೆ ಮಾತ್ರ ಸೀಮಿತ ಎಂದು ಹೇಳಿದ್ದಾರೆ. ಇದು ಅಲ್ಲ. ದಿಲ್ಲಿ ಹೋರಾಟಗಾರರೊಂದಿಗೆ ನಾವೂ ಇದ್ದೇವೆ ಎಂಬುದನ್ನು ಸಾಬೀತುಪಡಿಸುತ್ತೇವೆ. ದೇಶಾದ್ಯಂತ ಹೋರಾಟ ನಡೆಯಲಿವೆ. ಜನರ ಅಭಿಪ್ರಾಯ ಕೇಳದೆ ಬಂಡವಾಳ ಶಾಹಿಗಳ ಕೈಗೆ ಕೃಷಿಯನ್ನು ನೀಡುವ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವುದು ಒಪ್ಪಿತವಲ್ಲ. ಕೂಡಲೇ ಕೇಂದ್ರ ಸರಕಾರ ಕಾಯ್ದೆಗಳನ್ನು ಬೇಸರತ್ ವಾಪಸ್ ಪಡೆಯಬೇಕು ಎಂದು ಕೆ.ಟಿ. ಗಂಗಾಧರ ತಿಳಿಸಿದರು.

ಭೂ ಸುಧಾರಣೆ ಕಾಯ್ದೆ ಜಾರಿ ಕುರಿತಂತೆ ಇಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶಿವಮೊಗ್ಗದಿಂದ ಪಾದಯಾತ್ರೆ ನಡೆಸಿದ್ದರು. ಆದರೆ, ಇಂದು ಅವರೇ ಕಾಯ್ದೆ ತಿದ್ದುಪಡೆಗೆ ಒಪ್ಪಿಗೆ ಸೂಚಿಸುತ್ತಿರುವುದು ಬೇಸರದ ಸಂಗತಿ ಎಂದರು.

ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ರೈತರ ಬಾಯಿಗೆ ಮಾಸ್ಕ್ (ಬಟ್ಟೆ ಕಟ್ಟಿ) ಹಾಕಿ ಅದೇ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ಈ ಕಾಯ್ದೆಗಳನ್ನು ಜಾರಿಗೊಳಿಸಲಾಗುತ್ತಿದೆ. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀತಿಗೆ ಯಾವುದೇ ಕಾನೂನು ಇಲ್ಲ. 23 ಬೆಳಗೆಗಳ ಪೈಕಿ 4-5 ಬೆಳೆಗಳನ್ನು ಮಾತ್ರ ಖರೀದಿ ಮಾಡಿ ರೈತರಿಗೆ ಮೋಸ ಮಾಡಲಾಗುತ್ತಿದೆ. ಹೀಗಾಗಿ ಎಂಎಸ್‌ಪಿಯನ್ನು ಶಾಸನಬದ್ಧಗೊಳಿಸಬೇಕು. ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ರೈತರ ಉತ್ಪನ್ನ ಖರೀದಿಸುವುದು ಕಾನೂನು ಬಾಹೀರ ಎಂದು ಘೋಷಿಸಬೇಕು. ಬೇಕಿದ್ದರೆ ಈ ಕಾಯ್ದೆಯನ್ನು ಕೇಂದ್ರ ಸರಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಿ ಎಂದರು.

ಬಣ, ಸಂಘದ ಪ್ರತಿಷ್ಠೆ ಇಲ್ಲ

ಸಂಯುಕ್ತ ಕಿಸಾನ ಮೋರ್ಚಾ ರೂಪಿಸುವ ಹೋರಾಟಕ್ಕೆ ಬಣ, ಸಂಘಟನೆಗಳ ಪ್ರತಿಷ್ಠೆ ಬಿಟ್ಟು ಬೆಂಬಲಿಸಿ ಚಳುವಳಿ ಗಟ್ಟಿಗೊಳಿಸಬೇಕು. ಈ ಕುರಿತಂತೆ ಎಲ್ಲ ಸಂಘಟನೆಗಳು, ಮುಖಂಡರನ್ನು ಸಂಪರ್ಕಿಸಲಾಗುತ್ತಿದ್ದು, ಎಲ್ಲರೂ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ರೈತರನ್ನು ಮುಟ್ಟಿದರೆ ಯಾವ ಸರಕಾರವೂ ಉಳಿಯೊಲ್ಲ ಎಂಬುದನ್ನು ಈ ಮೂಲಕ ತಿಳಿಸಲಾಗುವುದು ಎಂದು ಕೆ.ಟಿ. ಗಂಗಾಧರ, ಚುಕ್ಕಿ ನಂಜುಂಡಸ್ವಾಮಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ