ಆ್ಯಪ್ನಗರ

ನುಚ್ಚಂಬಲಿ ಬಾವಿ ಭರ್ತಿ, ನೋಡುಗರಿಗೆ ಸ್ಫೂರ್ತಿ

ಧಾರವಾಡ : ಯುವ ಸಮೂಹ ಹಿಡಿದ ಕಾರ್ಯವನ್ನು ಯಶಸ್ವಿಗೊಳಿಸುತ್ತದೆ ಎಂಬುದಕ್ಕೆ ನಗರದ ಹೊಸ ಯಲ್ಲಾಪುರದ ಐತಿಹಾಸಿಕ ನುಚ್ಚಂಬಲಿ ಬಾವಿ ಶುಚಿಯಾಗಿ ಶುದ್ಧ ನೀರಿನಿಂದ ಕಂಗೊಳಿಸುತ್ತಿರುವುದೇ ಸಾಕ್ಷಿಯಾಗಿದೆ.

Vijaya Karnataka 26 Jul 2019, 5:00 am
ಧಾರವಾಡ : ಯುವ ಸಮೂಹ ಹಿಡಿದ ಕಾರ್ಯವನ್ನು ಯಶಸ್ವಿಗೊಳಿಸುತ್ತದೆ ಎಂಬುದಕ್ಕೆ ನಗರದ ಹೊಸ ಯಲ್ಲಾಪುರದ ಐತಿಹಾಸಿಕ ನುಚ್ಚಂಬಲಿ ಬಾವಿ ಶುಚಿಯಾಗಿ ಶುದ್ಧ ನೀರಿನಿಂದ ಕಂಗೊಳಿಸುತ್ತಿರುವುದೇ ಸಾಕ್ಷಿಯಾಗಿದೆ.
Vijaya Karnataka Web filling the well inspiring onlookers
ನುಚ್ಚಂಬಲಿ ಬಾವಿ ಭರ್ತಿ, ನೋಡುಗರಿಗೆ ಸ್ಫೂರ್ತಿ


ಇತಿಹಾಸ ಪ್ರಸಿದ್ಧ ನುಚ್ಚಂಬಲಿ ಬಾವಿ ಕಳೆದ ಫೆ.9ರಿಂದ ಸ್ಥಳೀಯ ವಿನಾಯಕ ಯುವಕ ವೃಂದದ ಗೆಳೆಯರು ಪಾಲಿಕೆಯೊಂದಿಗೆ ಕೈ ಜೋಡಿಸಿ ಹಂತ ಹಂತವಾಗಿ ಸ್ವಚ್ಛ ಮಾಡುತ್ತಾ ಬಂದ ಪರಿಣಾಮ ಇಂದು ನುಚ್ಚಂಬಲಿ ಬಾವಿ ಶುದ್ಧ ನೀರಿನಿಂದ ತುಂಬಿದೆ.

ಐತಿಹಾಸಿಕ ನುಚ್ಚಂಬಲಿ ಬಾವಿ ಹಿಂದೆ ಬರಗಾಲದಲ್ಲಿ ಹಿರಿಯರು ಈ ಬಾವಿ ತೆಗೆಯುವ ಕೂಲಿಗಳಿಗೆ ನುಚ್ಚು ಮತ್ತು ಅಂಬಲಿ ನೀಡಿ ಬಾವಿ ಕೊರೆಸಿದ ಹಿನ್ನೆಲೆಯಲ್ಲಿ ಇದಕ್ಕೆ ನುಚ್ಚಂಬಲಿ ಬಾವಿ ಎಂಬ ಹೆಸರು ಬಂದಿದೆ ಎಂಬುದು ಪ್ರತೀತಿ.

70 ಅಡಿಗಳಿಗೂ ಹೆಚ್ಚು ಆಳ ಇರುವ ನುಚ್ಚಂಬಲಿ ಬಾವಿಯು ಹಲವು ದಶಕಗಳ ಹಿಂದೆ ಧಾರವಾಡ ನಗರಕ್ಕೆ ನೀರು ಒದಗಿಸುವ ಪ್ರಮುಖ ಜಲಮೂಲವಾಗಿತ್ತು. ಕಾಲ ಉರುಳಿದಂತೆ ಗಣೇಶೋತ್ಸವ, ಮೋಹರಂ, ನವರಾತ್ರಿ ದುರ್ಗಾದೇವಿ ವಿಗ್ರಹಗಳು, ಪೂಜೆ ಸಾಮಗ್ರಿ ವಿಸರ್ಜನೆ ಕಾರ್ಯದಿಂದ ಬಾವಿ ಮಲೀನವಾಗಿ ಅದರ ವಾಸನೆ ತಡೆಯಲಾಗದೆ ಜನಾ ಕಂಗಾಲಾಗಿದ್ದರು.

ನುಚ್ಚಂಬಲಿ ಬಾವಿಯನ್ನು ಸಂರಕ್ಷಿಸಬೇಕು ಎಂಬ ಉದ್ದೇಶದಿಂದ ಸ್ಥಳೀಯ ವಿನಾಯಕ ಯುವಕ ವೃಂದದ ಗೆಳೆಯರು 4 ತಿಂಗಳ ಹಿಂದಿನಿಂದ ಬಾವಿಯನ್ನು ಶುಚಿಗೊಳಿಸಲು ಪಾಲಿಕೆಗೆ ಸಹಕಾರ ನೀಡಿದ್ದಾರೆ. ವಾರಕ್ಕೊಮ್ಮೆ ಸುಣ್ಣ ಬಳಿಯುವುದು, ಮಹಾನಗರ ಪಾಲಿಕೆ ಪೂರೈಸುವ ಬ್ಲೀಚಿಂಗ್‌ ಪೌಡರ್‌ ಹಾಕಿ ನೀರಿನ ಗುಣಮಟ್ಟ ಕಾಪಾಡಲು ಆದ್ಯತೆ ನೀಡುವುದಲ್ಲದೇ ಪ್ರತಿ ದಿನ ಬಾವಿ ಸ್ವಚ್ಛ ಮಾಡುತ್ತಿದ್ದಾರೆ. ಜತೆಗೆ ಬಾವಿಯಲ್ಲಿ ವಿವಿಧ ಸ್ಲೋಗನ್‌ಗಳನ್ನು ಬರೆಯಿಸಿ, ಶಾಂಪೂ ಸೇರಿದಂತೆ ಇತರ ಸಾಮಗ್ರಿಗಳನ್ನು ನೀರಿನಲ್ಲಿ ಹಾಕದಂತೆ ಅರಿವು ಮೂಡಿಸುವ ಕಾರ್ಯ ಮಾಡಿದ್ದಾರೆ.

ವಿನಾಯಕ ಯುವಕ ವೃಂದದ ಗೆಳೆಯರಾದ ನಾಗರಾಜ ಹಳಕಟ್ಟಿ, ಸಂತೋಷಕುಮಾರ ಪಾಟೀಲ, ರಾಜು ಜಗಾಂವಕಾರ, ಶಬ್ಬೀರ ಬೇಟಗೇರಿ, ಮಂಜುನಾಥ ಕೊಂಡಪಲ್ಲಿ, ಶ್ರೀನಿವಾಸ, ವಿರೇಶ ಮಠಪತಿ, ಅನಿಲ ಹಳಕಟ್ಟಿ ಸೇರಿದಂತೆ ಎಂ.ಆರ್‌.ನಗರ, ಕುರುಬರ ಓಣಿ, ಕೋಳಿಕೇರಿ, ಮದಾರಮಡ್ಡಿಯ ಯುವಕರು ಹಾಗೂ ಹಿರಿಯರು ನುಚ್ಚಂಬಲಿ ಬಾವಿಯನ್ನು ಸ್ವಚ್ಛ ಮಾಡಲು ಶ್ರಮಿಸಿದ್ದಾರೆ. ಇವರಿಗೆ ಪಾಲಿಕೆ ಸದಸ್ಯ ಶಂಕರ ಶೇಳಕೆ ಅಗತ್ಯ ಸಹಕಾರ ನೀಡಿದ್ದಾರೆ. ಬಾವಿಗೆ ಸೇರುತ್ತಿದ್ದ ಚರಂಡಿ ನೀರನ್ನು ತಪ್ಪಿಸಲು ಯುವಕರೇ ಮುಂದು ನಿಂತು ಒಡ್ಡು ಕಟ್ಟುವ ಮೂಲಕ ಮಲೀನ ನೀರು ಬಾವಿ ಸೇರುವುದನ್ನು ತಪ್ಪಿಸಿದ್ದಾರೆ.

ವಿನಾಯಕ ಯುವಕ ವೃಂದದ ಕಾರ್ಯಕ್ಕೆ ಜಿಲ್ಲಾಧಿಕಾರಿ ದೀಪಾ ಎಂ. ಸೇರಿದಂತೆ ಸಮಸ್ತ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಯುವಕರ ಕಾರ್ಯಕ್ಕೆ ಪಾಲಿಕೆ ಹೀಗೆ ಬೆಂಬಲ ನೀಡಿ ನುಚ್ಚಂಬಲಿ ಬಾವಿಯನ್ನು ವರ್ಷಪೂರ್ಣ ಶುದ್ಧವಾಗಿಟ್ಟುಕೊಳ್ಳುಬೇಕು ಎಂಬುದು ಎಲ್ಲರ ಆಶಯ.

ಶೀಘ್ರ ದುರಸ್ತಿಯಾಗಲಿ : ಬಾವಿ ಕಟ್ಟೆ ಈಗಾಲೇ ಹಾಳಾಗಿದೆ. ಹೀಗಾಗಿ ಅನಾಹುತ ಸಂಭವಿಸುವ ಮೊದಲು ಕಟ್ಟೆ ದುರಸ್ತಿ ಮಾಡಬೇಕು. ನುಚ್ಚಂಬಲಿ ಬಾವಿಯ ಸ್ವಚ್ಛತೆ ನಮ್ಮ ಸಂಕಲ್ಪವಾಗಿದೆ. ಬಾವಿಯಲ್ಲಿ ವಿಗ್ರಹ ವಿಸರ್ಜಿಸುವ ಸಾರ್ವಜನಿಕರಿಗೆ ಪಾಲಿಕೆ ಅಥವಾ ಜಿಲ್ಲಾಡಳಿತ ಶುಲ್ಕ ನಿಗದಿಗೊಳಿಸಬೇಕು. ಜತೆಗೆ ಗಣೇಶ ವಿಸರ್ಜನೆ ಕಾರ್ಯ ಮುಗಿದ ಕೂಡಲೇ ಬಾವಿಯನ್ನು ಸ್ವಚ್ಛ ಮಾಡಬೇಕು ಎಂಬುದು ವಿನಾಯಕ ಯುವಕ ವೃಂದದ ಆಗ್ರಹ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ