ಆ್ಯಪ್ನಗರ

ಹುಬ್ಬಳ್ಳಿಯಲ್ಲೂ ಭಾರಿ ಮಳೆ

ಹುಬ್ಬಳ್ಳಿ : ಮಹಾನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಮೊದಲ ಬಾರಿಗೆಯೇ ಭಾರಿ ಪ್ರಮಾಣದ ಮಳೆ ಸುರಿದಿದ್ದು, ರಾತ್ರಿವರೆಗೂ ನಿರಂತರ ಮಳೆಯ ಆರ್ಭಟ ಜೋರಾಗಿಯೇ ಇತ್ತು. ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮಳೆಯ ತೀವ್ರತೆಗೆ ನೀರಿನ ರಭಸಕ್ಕೆ ಬೈಕ್‌ಗಳು ತೇಲಿ ಹೋಗಿದ್ದವು.

Vijaya Karnataka 24 Jun 2019, 5:00 am
ಹುಬ್ಬಳ್ಳಿ : ಮಹಾನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಮೊದಲ ಬಾರಿಗೆಯೇ ಭಾರಿ ಪ್ರಮಾಣದ ಮಳೆ ಸುರಿದಿದ್ದು, ರಾತ್ರಿವರೆಗೂ ನಿರಂತರ ಮಳೆಯ ಆರ್ಭಟ ಜೋರಾಗಿಯೇ ಇತ್ತು. ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮಳೆಯ ತೀವ್ರತೆಗೆ ನೀರಿನ ರಭಸಕ್ಕೆ ಬೈಕ್‌ಗಳು ತೇಲಿ ಹೋಗಿದ್ದವು. ಕಾರುಗಳು, ಆಟೊಗಳು ನೀರಿನಲ್ಲಿ ಮುಳುಗಿದ್ದವು. ಮಹಾನಗರದ ಬಹುತೇಕ ರಸ್ತೆಗಳೆಲ್ಲವೂ ತುಂಬಿ ಹರಿದ ಹಳ್ಳಗಳಂತೆ ಗೋಚರಿಸುತ್ತಿದ್ದವು. ಭಾರಿ ಮಳೆಯ ಪರಿಣಾಮ ಹಲವು ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಇನ್ನೂ ಕೆಲವು ಕಡೆಗಳಲ್ಲಿ ಮನೆಗಳು ಬಿದ್ದ ವರದಿಯಾಗಿವೆ. ಯಾವುದೇ ಪ್ರಾಣಾಪಾಯಗಳು ಉಂಟಾಗಿಲ್ಲ. ಮಳೆಯ ಆರ್ಭಟಕ್ಕೆ ಮಹಾನಗರ ಅಕ್ಷರಶಃ ತತ್ತರಿಸಿದೆ.
Vijaya Karnataka Web rain-9


ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಆರಂಭವಾದ ಮಳೆ ಬಿಟ್ಟು ಬಿಡದೇ ರಾತ್ರಿವರೆಗೆ ಸುರಿಯುತ್ತಲೇ ಇತ್ತು. ಮುಂಗಾರು ಮಳೆ ಆರಂಭವಾಗಿ 20 ದಿನ ಕಳೆದರೂ ಇದುವರೆಗೆ ಮಳೆ ಸುರಿದಿರಲಿಲ್ಲ. ಇಂದು ಮಧ್ಯಾಹ್ನ ಏಕಾಏಕಿ ಆರಂಭವಾದ ಮಳೆ ಎಲ್ಲೆಡೆ ಹರ್ಷ ಮೂಡಿಸಿದೆ. ತಂಪು ವಾತಾವರಣ ನಿರ್ಮಾಣವಾಗಿದೆ.

ಹುಬ್ಬಳ್ಳಿಯ ಮೇದಾರ, ಓಣಿ, ಅಯೋಧ್ಯಾ ನಗರ, ತುಳಜಾ ಭವನ ವೃತ್ತ, ಮಂಟೂರ ರಸ್ತೆಯ ಅರಳಿಕಟ್ಟಿ ಓಣಿಯಲ್ಲಿ ರಸ್ತೆಗಳು ನದಿಯಂತಾಗಿದ್ದವು. ರಸ್ತೆ ತುಂಬಿದ್ದರಿಂದ ನೀರು ಮನೆಗೆ ನುಗ್ಗಿದ್ದು, ಮಳೆಯಿಂದ ಜನರು ಪರದಾಡುವಂತಾಯಿತು.

ನಗರದ ನೇಕಾರ ನಗರದಲ್ಲಿ ಆಟೋ ರಿಕ್ಷಾ ಹಾಗೂ ಬೈಕ್‌ಗಳು ಜಲಾವೃತವಾಗಿದ್ದು, ನೇಕಾರ ನಗರದಿಂದ ಗಿರಿಯಾಲ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕೂಡ ಸಂಪೂರ್ಣ ನೀರಿನಲ್ಲಿ ಮುಳುಗಿತ್ತು. ಹಳೆ ಹುಬ್ಬಳ್ಳಿಯ ಆನಂದ ನಗರ ರಸ್ತೆಯ ಗಣೇಶ ನಗರ, ನ್ಯೂ ಇಂಗ್ಲಿಷ್‌ ಸ್ಕೂಲ್‌ ಬಳಿಯ ಹಳೆಯ ಪಿಬಿ ರಸ್ತೆ ಗಾರ್ಡನ್‌ಪೇಟೆ, ಮಂಟೂರ ರಸ್ತೆಯ ಅರಳಿಕಟ್ಟಿ ಓಣಿ, ಎಸ್‌.ಎಂ.ಕೃಷ್ಣ ನಗರ, ಬಿಡನಾಳ, ಮೇದಾರ ಓಣಿ, ಪೆಂಡಾರ್‌ ಗಲ್ಲಿ, ಬಸವ ವನ, ಅಯೋಧ್ಯೆ ನಗರದ ಅಂಬೇಡ್ಕರ್‌ ಕಾಲೊನಿ ಸೇರಿದಂತೆ ಹಲವು ಪ್ರದೇಶಗಳಲ್ಲಿನ ಮನೆಗಳಲ್ಲಿ ಮಳೆ ನೀರು ನುಗ್ಗಿತ್ತು. ಈ ನೀರನ್ನು ಹೊರ ಹಾಕುವಲ್ಲಿ ನಿವಾಸಿ ಹೈರಾಣಾದರು.

ತೆಲಿದ ಬೈಕ್‌ಗಳು, ಮುಳುಗಿದ ವಾಹನಗಳು
ಮಾರುಕಟ್ಟೆ ಪ್ರದೇಶಗಳಲ್ಲಿ ಅತ್ಯಂತ ತಗ್ಗು ಪ್ರದೇಶಗಳಲ್ಲೊಂದಾಗಿರುವ ದಾಜಿಬಾನ ಪೇಟೆಯ ತುಳಜಾಭವಾನಿ ಸರ್ಕಲ್‌, ಮ್ಯಾದಾರ ಓಣಿಯಲ್ಲಿ ಧಾರಾಕಾರ ಮಳೆಗೆ ನೀರು ಅಪಾರ ಪ್ರಮಾಣದಲ್ಲಿ ಸಂಗ್ರಹಗೊಂಡು ರಸ್ತೆ ಇಕ್ಕೆಲಗಳಲ್ಲಿ ನಿಲ್ಲಿಸಿದ್ದ ಬೈಕ್‌ಗಳು, ಕಾರುಗಳು, ಆಟೊಗಳು ನೀರಿನಲ್ಲಿ ಮುಳುಗಿದ್ದವು. ಈ ಮಧ್ಯೆ ಬೈಕ್‌ವೊಂದು ಹಲವು ಮೀಟರ್‌ಗಳವರೆಗೆ ತೇಲಿ ಹೋಗಿತ್ತು. ಇಂಥ ಅಪರೂಪದ ದೃಶ್ಯವನ್ನು ಪ್ರತ್ಯಕ್ಷದರ್ಶಿಗಳು ಮೊಬೈಲ್‌ದಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಹರಿ ಬಿಟ್ಟಿದ್ದರು.

ಗೋಕುಲ ರಸ್ತೆಯ ರಾಜಧಾನಿ ಕಾಲೊನಿಗೆ ಹೊಂದಿಕೊಂಡಿರುವ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆಯಾಗಿತ್ತು. ಕಾರವಾರ ರಸ್ತೆ ಸಂಪರ್ಕಿಸುವ ಕೆಳಸೇತುವೆಯಲ್ಲೂ ವಾಹನಗಳು ಪರದಾಡುವಂತಾಗಿತ್ತು.

ಪಾಲಿಕೆ ಕೊಡುಗೆ...!
ಮಳೆಗಾಲದಲ್ಲಿ ಎಲ್ಲಾ ಮುಂಜಾಗ್ರತೆ ಕೈಗೊಂಡಿದ್ದೇವೆ ಎಂದು ಬಡಾಯಿ ಕೊಚ್ಚಿಕೊಂಡಿದ್ದ ಮಹಾನಗರ ಪಾಲಿಕೆಯ ಕಾರ್ಯವೈಖರಿಯನ್ನು ಮೊದಲ ಮಳೆಯೇ ಅನಾವರಣಗೊಳಿಸಿತು. ಪಾಲಿಕೆಯು ಚರಂಡಿ ಸ್ವಚ್ಛಗೊಳಿಸದಿದ್ದದ್ದು ಕಂಡು ಬಂತು. ರಸ್ತೆಗಳೆಲ್ಲವೂ ತುಂಬಿದ ನದಿಗಳಂತಾಗಿರುವುದೇ ಪಾಲಿಕೆಯ ಮುಂಜಾಗ್ರತೆಯನ್ನು ಪ್ರಶ್ನಿಸುವಂತಿತ್ತು. ರಸ್ತೆಗಳು ನದಿ, ಹಳ್ಳಗಳಂತಾಗಿರುವುದರಲ್ಲಿ ಪಾಲಿಕೆಯ ಕೊಡುಗೆ ಅಪಾರ ಎಂದು ನಾಗರಿಕರು ವ್ಯಂಗ್ಯವಾಗಿ ಸ್ಮರಿಸಿಕೊಳ್ಳುತ್ತಿದ್ದರು.

ಬಿಡನಾಳ ಕ್ರಾಸ್‌ದಲ್ಲಿ ಪ್ರತಿಭಟನೆ
ಧಾರಾಕಾರ ಮಳೆಯಿಂದಾಗಿ ನಗರ ಹೊರ ವಲಯ ಬಿಡನಾಳ ಗ್ರಾಮದ ಹಲವು ಮನೆಗಳಲ್ಲಿ ನೀರು ಮನೆಯೊಳಗೆ ನುಗ್ಗಿತ್ತು. ಗಟಾರುಗಳನ್ನು ಸ್ವಚ್ಛಗೊಳಿಸದೇ ಇದ್ದುದ್ದೇ ಇದಕ್ಕೆ ಕಾರಣ ಎಂದು ಸ್ಥಳೀಯ ನಿವಾಸಿ ಆಕ್ರೋಶಗೊಂಡು ಬಿಡನಾಳ ಕ್ರಾಸ್‌ದಲ್ಲಿ ಭಾನುವಾರ ಮಧ್ಯಾಹ್ನ ಹಠಾತ್‌ ಧರಣಿ ನಡೆಸಿ ಗಮನ ಸೆಳೆದರು. ಮಳೆಯಿಂದಾದ ಸಮಸ್ಯೆ ಪರಿಹಾರ ಕೋರಿ ಪಾಲಿಕೆ ಸಿಬ್ಬಂದಿ, ಅಧಿಕಾರಿಗಳಿಗೆ ಮೊಬೈಲ್‌ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಇದರಿಂದ ಪ್ರತಿಭಟನಾಕಾರರು ಆಕ್ರೋಶಗೊಂಡು ಜನಪ್ರತಿನಿಧಿಗಳು, ಪಾಲಿಕೆ ವಿರುದ್ಧ ಧಿಕ್ಕಾರ ಕೂಗಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ