ಆ್ಯಪ್ನಗರ

'ಗಂಡು ಮೆಟ್ಟಿದ ನಾಡ'ಲ್ಲಿ 'ರೌಡಿ ಸಾಮ್ರಾಜ್ಯ'! 200 ರೌಡಿ ಶೀಟರ್‌ಗಳ ಮನೆ ಮೇಲೆ ರೇಡ್

ಹುಬ್ಬಳ್ಳಿ ಹಾಗೂ ಧಾರವಾಡ ಅವಳಿ ನಗರಗಳಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಪೊಲೀಸರು ರೌಡಿಗಳ ಚಳಿ ಬಿಡಿಸಿದ್ದಾರೆ. ಮೀಟರ್ ಬಡ್ಡಿ, ರೌಡಿಸಂ ಸೇರಿದಂತೆ ಹಲವು ಅಕ್ರಮ ಮಾರ್ಗಗಳಿಂದ ಆರ್ಭಟಿಸುತ್ತಿದ್ದ ರೌಡಿಗಳ ಹೆಡೆಮುರಿ ಕಟ್ಟಿದ್ದಾರೆ.

Vijaya Karnataka 24 Sep 2019, 7:48 pm
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಅಪರಾಧ ಕೃತ್ಯಗಳ ತಡೆಗೆ ಮುಂದಾಗಿರುವ ಪೊಲೀಸರು, ರೌಡಿಗಳ ಮನೆ ಮೇಲೆ ದಿಢೀರ್ ದಾಳಿ ನಡೆಸಿ ಅವರ ಹೆಡೆಮುರಿ ಕಟ್ಟಿದ್ದಾರೆ. ಮಂಗಳವಾರ ಬೆಳ್ಳಂಬೆಳಗ್ಗೆ ಹು-ಧಾ ಪೊಲೀಸ್‌ ಕಮಿಷನರೇಟ್ ಘಟಕದ ಉತ್ತರ ಮತ್ತು ದಕ್ಷಿಣ ವಿಭಾಗ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ರೌಡಿಶೀಟರ್‌ಗಳು, ಮೀಟರ್‌ ಬಡ್ಡಿ ದಂಧೆ ನಡೆಸುತ್ತಿದ್ದವರ ನಿವಾಸಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಮಾರಕಾಸ್ತ್ರ ವಶಪಡಿಸಿಕೊಂಡಿದ್ದಾರೆ.
Vijaya Karnataka Web arrest


12ರ ಬಾಲಕಿ ಮೇಲೆ 2 ವರ್ಷಗಳಿಂದ ಗ್ಯಾಂಗ್ ರೇಪ್: ತಂದೆಯೇ ನಡೆಸುತ್ತಿದ್ದ ದಂಧೆ!

70 ರೌಡಿಗಳು ಅಂದರ್

ಈ ದಾಳಿಯಲ್ಲಿ ವಿಶೇಷವಾಗಿ ಭದ್ರತಾ ಕಾಯ್ದೆಯಡಿ 70ಕ್ಕೂ ಅಧಿಕ ರೌಡಿಗಳ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ. ವಿಶೇಷವಾಗಿ ಇಲ್ಲಿಯ ಕೇಶ್ವಾಪುರ ಠಾಣೆ ವ್ಯಾಪ್ತಿಯಲ್ಲಿ ರೌಡಿ ಶೀಟರ್‌ಗಳಾದ ಆರ್‌.ಜೆ. ಶಿವಾ ಹಾಗೂ ಅಲ್ತಾಫ್‌ ಬೇಪಾರಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಈ ಠಾಣೆ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ಮಾರಕಾಸ್ತ್ರ ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ.

ದಕ್ಷಿಣ ವಿಭಾಗದ ಶಹರ, ಹಳೇ ಹುಬ್ಬಳ್ಳಿ, ಬೆಂಡಿಗೇರಿ, ಕಸಬಾಪೇಟ, ಘಂಟಿಕೇರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆದಿದೆ. ಅದರಂತೆ ಉತ್ತರ ವಿಭಾಗ ವ್ಯಾಪ್ತಿಯ ಉಪನಗರ, ಕೇಶ್ವಾಪುರ, ವಿದ್ಯಾನಗರ, ಕಮರಿಪೇಟ, ಗೋಕುಲ್‌ ರೋಡ್‌, ಎಪಿಎಂಸಿ ನವನಗರ, ಅಶೋಕನಗರ ವ್ಯಾಪ್ತಿಯಲ್ಲಿಯೂ ಪೊಲೀಸರು ದಾಳಿ ನಡೆಸಿದ್ದಾರೆ. ಮಂಗಳವಾರ ಏಕಕಾಲಕ್ಕೆ ಪೊಲೀಸರು ನಗರದಾದ್ಯಂತ ರೌಡಿ ಶೀಟರ್‌ಗಳ ಮೇಲೆ ದಾಳಿ ನಡೆಸಿದ್ದಾರೆ.

ಗಸ್ತು ವಾಹನ ಹೆಚ್ಚಳ

ಈ ಮೊದಲು ಡಿಸಿಪಿ, ಎಸಿಪಿ ನೇತೃತ್ವದಲ್ಲಿಈ ಕಾರ್ಯಾಚರಣೆ ನಡೆದಿದ್ದವು. ಆದರೀಗ ರೌಡಿಗಳ ಉಪಟಳ ಹೆಚ್ಚಾದ ಹಿನ್ನೆಲೆಯಲ್ಲಿ ಎಲ್ಲ ಪೊಲೀಸರು ಅಖಾಡಕ್ಕೆ ಧುಮುಕಿದ್ದಾರೆ. ಪೊಲೀಸ್‌ ಬಲ ಇನ್ನಷ್ಟು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕೆಎಸ್‌ಆರ್‌ಪಿ ತುಕಡಿಗಳನ್ನು ಸಹ ಬಳಕೆ ಮಾಡಿಕೊಳ್ಳಲು ಕಮಿಷನರೇಟ್ ಘಟಕ ಮುಂದಾಗಿರುವುದು ವಿಶೇಷ. ಎಲ್ಲೆಡೆ ಭದ್ರತಾ ಸಿಬ್ಬಂದಿ ನಿಯೋಜಿಸಿ ಗಸ್ತು ವಾಹನ ಹೆಚ್ಚಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಈ ಕುರಿತು ಮಾತನಾಡಿದ ಪೊಲೀಸ್‌ ಆಯುಕ್ತ ಆರ್‌. ದಿಲೀಪ್‌ 'ಈಗಾಗಲೇ ಅಪರಾಧ ಕೃತ್ಯ ಎಸಗುವವರ ಮೇಲೆ ನಮ್ಮ ಪೊಲೀಸರ ತಂಡ ವಿಶೇಷ ನಿಗಾವಹಿಸಿದೆ. ಈ ಹಿಂದೆ ನಡೆದ ಹಲವು ಪ್ರಕರಣಗಳಲ್ಲಿಆರೋಪಿಗಳ ಪತ್ತೆ ಕಾರ್ಯ ನಡೆದಿಲ್ಲ. ಆದರೀಗ ಪೊಲೀಸರು ಹೆಚ್ಚು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಗಣೇಶ ವಿಸರ್ಜನೆ ಮತ್ತು ನಂತರದಲ್ಲಿ ನಡೆದ ಕೃತ್ಯಗಳಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಲಾಗಿದೆ. ಇದೀಗ ಸ್ಥಳೀಯವಾಗಿ ಪೊಲೀಸ್‌ಗಿರಿ ಪ್ರದರ್ಶಿಸಲು ಪೂರಕ ತಯಾರಿ ಮಾಡಿಕೊಳ್ಳಲಾಗಿದೆ' ಎಂದು ತಿಳಿಸಿದರು.

ಖಡಕ್‌ ಎಚ್ಚರಿಕೆ

'ಸಮಾಜಘಾತುಕ ಶಕ್ತಿಗಳಿಗೆ ಪೊಲೀಸರು ಖಡಕ್‌ ಎಚ್ಚರಿಕೆ ನೀಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಈಗಾಗಲೇ ಆಯಾಯ ಠಾಣೆಗಳ ವ್ಯಾಪ್ತಿಯಲ್ಲಿ ನಮ್ಮ ಪೊಲೀಸ್‌ ಇನ್‌ಸ್ಪೆಕ್ಟರ್‌ ನೇತೃತ್ವದ ತಂಡ ರೌಡಿಗಳನ್ನು ನಿಗ್ರಹಿಸುತ್ತಿದೆ. ಇದಕ್ಕಿಂತಾ ಹೆಚ್ಚಾಗಿ ಮುಂದುವರಿದರೆ, ವಿಶೇಷ ಪಡೆ ರಚಿಸಿ ನಿಗ್ರಹಿಸುವ ಕೆಲಸ ಮಾಡಲಾಗುವುದು. ವಿಶೇಷವಾಗಿ ನಗರದಲ್ಲಿನ ಕೆಎಸ್‌ಆರ್‌ಪಿ ತುಕಡಿಗಳನ್ನು ಸಹ ರೌಡಿಗಳ ನಿಗ್ರಹಕ್ಕೆ ಬಳಕೆ ಮಾಡಲಾಗುತ್ತಿದೆ' ಎಂದು ಪೊಲೀಸ್‌ ಆಯುಕ್ತ ಆರ್‌. ದಿಲೀಪ್‌ ತಿಳಿಸಿದರು.

ಮಂಜುನಾಥನಗರ ಕ್ರಾಸ್‌ ಬಳಿ ನಡೆದ ಶೂಟೌಟ್‌ ಪ್ರಕರಣದ ಆರೋಪಿಗಳ ಬಂಧನಕ್ಕೆ ಎಸಿಪಿ ಎಚ್‌.ಕೆ. ಪಠಾಣ ನೇತೃತ್ವದ ತಂಡ ಬಿಹಾರಕ್ಕೆ ಕಳುಹಿಸಿಕೊಡಲಾಗಿದೆ. ಶೀಘ್ರದಲ್ಲಿಯೇ ಈ ಆರೋಪಿಗಳ ಬಂಧನ ಆಗಲಿದೆ ಎಂದೂ ಪೊಲೀಸ್ ಆಯುಕ್ತ ಆರ್‌. ದಿಲೀಪ್‌ ತಿಳಿಸಿದ್ಧಾರೆ.

‘ನನಗೇ ದಂಡ ಹಾಕ್ತೀಯಾ’? ಬೆಳಗ್ಗೆ ನ್ಯೂಸ್ ನೋಡು ಎಂದು ಪೇದೆಯನ್ನೇ ಲೂಟಿ ಮಾಡಿದ ಕಳ್ಳ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ