ಆ್ಯಪ್ನಗರ

ತುರ್ತು ಪರಿಸ್ಥಿತಿ ಸನ್ನಿವೇಶದಲ್ಲಿ ಪತ್ರಕರ್ತರು

ಹುಬ್ಬಳ್ಳಿ :ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ವೇಳೆ ದೇಶದಲ್ಲಿ (1975) ಘೋಷಿತ ತುರ್ತು ಪರಿಸ್ಥಿತಿ ಇತ್ತು. ಆದರೆ ಇಂದು ಅಘೋಷಿತ ತುರ್ತು ಪರಿಸ್ಥಿತಿಯಂತ ಸನ್ನಿವೇಶದಲ್ಲಿ ಪತ್ರಕರ್ತರು ಕಾರ್ಯನಿರ್ವಹಿಸುವಂತಾಗಿದೆ ಎಂದು ಔಟ್‌ಲುಕ್‌ ಪತ್ರಿಕೆಯ ಮಾಜಿ ಸಂಪಾದಕ ಕೃಷ್ಣಪ್ರಸಾದ್‌ ಕಳವಳ ವ್ಯಕ್ತಪಡಿಸಿದರು.

Vijaya Karnataka 16 Jul 2018, 5:00 am
ಹುಬ್ಬಳ್ಳಿ :ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ವೇಳೆ ದೇಶದಲ್ಲಿ (1975) ಘೋಷಿತ ತುರ್ತು ಪರಿಸ್ಥಿತಿ ಇತ್ತು. ಆದರೆ ಇಂದು ಅಘೋಷಿತ ತುರ್ತು ಪರಿಸ್ಥಿತಿಯಂತ ಸನ್ನಿವೇಶದಲ್ಲಿ ಪತ್ರಕರ್ತರು ಕಾರ್ಯನಿರ್ವಹಿಸುವಂತಾಗಿದೆ ಎಂದು ಔಟ್‌ಲುಕ್‌ ಪತ್ರಿಕೆಯ ಮಾಜಿ ಸಂಪಾದಕ ಕೃಷ್ಣಪ್ರಸಾದ್‌ ಕಳವಳ ವ್ಯಕ್ತಪಡಿಸಿದರು.
Vijaya Karnataka Web journalists in emergency situations
ತುರ್ತು ಪರಿಸ್ಥಿತಿ ಸನ್ನಿವೇಶದಲ್ಲಿ ಪತ್ರಕರ್ತರು


ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಭಾನುವಾರ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾ ದಿನಾಚರಣೆ, ಪ್ರಶಸ್ತಿ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಇಂದಿನ ದಿನಮಾನದಲ್ಲಿ ಪತ್ರಿಕೋದ್ಯಮ ವ್ಯಾಪಾರೀಕರಣಗೊಳ್ಳುತ್ತಿದ್ದು, ಕೇವಲ ಲಾಭಕ್ಕಾಗಿ ಕಾರ್ಯ ನಿರ್ವಹಿಸುವ ಸಂಸ್ಥೆಯಾಗುತ್ತಿದೆ. ವರದಿಗಾರರು ಸಂಸ್ಥೆಯ ಚೌಕಟ್ಟಿನ ಒಳಗೆಯೇ ಕಾರ್ಯನಿರ್ವಹಿಸಬೇಕಾಗಿರುವುದರಿಂದ ಸತ್ಯ ಸಂಗತಿಗಳು ಮರೆಮಾಚುವಂತಾಗಿದೆ ಎಂದರು.

ಸೆಲೆಬ್ರಿಟಿಗಳ ಸಣ್ಣ ಚಟುವಟಿಕೆಗಳು ಸಹ ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಆದರೆ ಬಡವರ ಹಾಗೂ ರೈತರ ಸಾವು-ನೋವುಗಳಿಗೆ ಅಷ್ಟೊಂದು ಪ್ರಾಮುಖ್ಯತೆ ನೀಡದಿರುವುದು ಅಪಾಯಕಾರಿ ಬೆಳವಣಿಗೆ. ಸದ್ಯ ಭಾರತದ ಪತ್ರಿಕೋದ್ಯಮ ಇಳಿಮುಖವಾಗುತ್ತಿದ್ದು, ಇದನ್ನು ತಡೆಯುವ ಮೂಲಕ ಉತ್ತಮ ಪತ್ರಿಕಾರಂಗ ಕಾರ್ಯನಿರ್ವಹಿಸುವಂತಾಗಬೇಕು ಎಂದು ತಿಳಿಸಿದರು.

ಸೇವಾ ಭದ್ರತೆ ಬೇಕು

ಕಾರ್ಯಕ್ರಮ ಉದ್ಘಾಟಿಸಿದ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ. ಸಿದ್ದರಾಜು ಮಾತನಾಡಿ, ಪತ್ರಿಕಾ ರಂಗದಲ್ಲಿ ಸುದೀರ್ಘ 25 ವರ್ಷ ಸೇವೆ ಸಲ್ಲಿಸಿದವರಿಗೆ 60 ವರ್ಷದ ನಂತರ ಮಾಸಾಶನ ಮತ್ತು ಸರಕಾರಿ ಸೌಲಭ್ಯ ದೊರೆಯುವಂತಾಗಬೇಕು. ಎಲ್ಲ ಪತ್ರಕರ್ತರಿಗೆ ಆಶ್ರಯ ಮನೆ ಮತ್ತು ಸೇವಾ ಭದ್ರತೆ ಕಲ್ಪಿಸುವ ಕಾರ್ಯಕ್ಕೆ ಸರಕಾರ ಮುಂದಾಗಬೇಕಿದೆ ಎಂದರು.

ಮಾಧ್ಯಮಗಳು ಇಂದು ಓದುಗರ ಬದಲಾಗಿ ಗ್ರಾಹಕರನ್ನು ಸೃಷ್ಠಿಸುವ ತುರುಸಿನಲ್ಲಿವೆ. ಹಿಂದೆ ಇದ್ದ ಮಾಧ್ಯಮ ಇಂದು ಉದ್ಯಮವಾಗಿದ್ದು, ಕೇವಲ ಲಾಭ ನಷ್ಟದ ಚಿಂತನೆಯಲ್ಲಿದೆ. ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಮಾಧ್ಯಮ ಅಕಾಡೆಮಿ ಸತತ ಹೋರಾಟ ಮಾಡುತ್ತಿದೆ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌ ಮಾತನಾಡಿ, ಮಾಧ್ಯಮಗಳು ಇಂದು ಕೇವಲ ಕೊಲೆ, ರಕ್ತಪಾತದಂತಹ ಅಪರಾಧ ಸುದ್ದಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಬರಗಾಲ ಹಾಗೂ ಅತಿಯಾದ ಬಿಸಿಲಿನಿಂದ ಭೂಮಿ ಬಿರುಕು ಬಿಡುತ್ತದೆ. ಸುನಾಮಿ ಸಂಭವಿಸುತ್ತದೇ ಎಂಬ ಸುಳ್ಳು ಸುದ್ದಿಗೆ ವಿದ್ಯುನ್ಮಾಧ್ಯಮಗಳು ಆದ್ಯತೆ ನೀಡುತ್ತಿದ್ದು, ದಿನವೀಡಿ ಅದೇ ಸುದ್ದಿಯನ್ನು ವೈಭವೀಕರಿಸಿ ತೋರಿಸುವ ಮೂಲಕ ಜನರಿಗೆ ಬೇಸರ ತರಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಕರ್ತರು ಜನರಿಗೆ ಅನುಕೂಲವಾಗುವ ಹಾಗೂ ಜನಪ್ರತಿನಿಧಿಗಳ ಕಣ್ಣು ತೆರೆಸುವ ಸುದ್ದಿಗಳನ್ನು ಹೆಚ್ಚು ಪ್ರಸಾರ ಹಾಗೂ ವರದಿ ಮಾಡಬೇಕಿದೆ. ಆ ಮೂಲಕ ಸಮಾಜದಲ್ಲಿ ಬದಲಾವಣೆ ಹಾಗೂ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದ ಅವರು, ಪತ್ರಕರ್ತರಿಗೆ ಸರಕಾರದಿಂದ ಲಭಿಸಬೇಕಾದ ಪಿಂಚಣಿ ಸೌಲಭ್ಯ ಕೊಡಿಸುವಲ್ಲಿ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ನಂತರ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವೇದಿಕೆ ಮೇಲೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಲೋಚನೇಶ ಹೂಗಾರ, ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ ಇದ್ದರು. ಜಿಲ್ಲೆಯ ವಿವಿಧ ಪತ್ರಿಕೆಯ ಸಂಪಾದಕರು, ಪತ್ರಕರ್ತರು ಹಾಗೂ ಕುಟುಂಬ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು. ಪ್ರಕಾಶ ನೂಲ್ವಿ ಸ್ವಾಗತಿಸಿದರು. ಗಿರೀಶ ಪಟ್ಟಣಶೆಟ್ಟಿ ಪರಿಚಯಿಸಿದರು. ಡಾ.ವೀರೇಶ ಹಂಡಗಿ ನಿರೂಪಿಸಿದರು.

ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

ಪತ್ರಿಕಾ ದಿನಾಚರಣೆ ಅಂಗವಾಗಿ ಹಿರಿಯ ಪತ್ರಕರ್ತ ಡಿ.ವಿ.ಮುತಾಲಿಕ ದೇಸಾಯಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ನಂತರ 2017-18ನೇ ಸಾಲಿನ ಉತ್ತಮ ನಗರ ವರದಿಗಾರಿಕೆಗೆ ಶಿವಾನಂದ ಗೊಂಬಿ, ಉತ್ತಮ ಲೇಖನಕ್ಕಾಗಿ ವಿ.ಬಿ.ಕೇಶವಮೂರ್ತಿ, ಉತ್ತಮ ಗ್ರಾಮೀಣ ವರದಿಗಾರಿಕೆಗೆ ಸಿ.ವೈ.ಲಗÜಮಣ್ಣವರ, ಉತ್ತಮ ಸುದ್ದಿ ಛಾಯಾಚಿತ್ರಕ್ಕಾಗಿ ತಾಜುದ್ದೀನ್‌ ಆಜಾದ್‌ ಹಾಗೂ ಉತ್ತಮ ಪುಟವಿನ್ಯಾಸಕ್ಕೆ ಶರಣಪ್ಪ ಹುಬ್ಬಳ್ಳಿ, ಉತ್ತಮ ವಿದ್ಯುನ್ಮಾನ ವರದಿಗಾಗಿ ಪರಶುರಾಮ ತಹಸೀಲ್ದಾರ್‌, ರಾಕೇಶ ಎಂ.ಬಿ. ಮತ್ತು ಯಲ್ಲಪ್ಪ ಸೋಲಾರಗೊಪ್ಪ, ಮಹೇಶ ಬಿ. ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ