ನವಲಗುಂದ : ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಮೂಲಕ ಜಾತಿ ವ್ಯವಸ್ಥೆ ಕಿತ್ತೊಗೆಯಲು ಶ್ರಮಿಸಿದ ಕನಕದಾಸರು ಹಾಗೂ ಟಿಪ್ಪು ಸುಲ್ತಾನರ ಆದರ್ಶಗಳು ದೇಶ ಕಟ್ಟಲು ಸಹಕಾರಿಯಾಗಿವೆ ಎಂದು ಟಿವಿ ನಿರೂಪಕಿ ನಾಝಿಯಾ ಕೌಸರ್ ಅಭಿಪ್ರಾಯಪಟ್ಟರು.
ಧಾರವಾಡ ಮೀಡಿಯಾ ಕ್ಲಬ್ ಹಾಗೂ ಟಿಪ್ಪು ಸುಲ್ತಾನ್ ನೌಜವಾನ್ ಕಮೀಟಿ ಆಶ್ರಯದಲ್ಲಿ ಸ್ಥಳೀಯ ಸರಕಾರಿ ಉರ್ದು ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಕನಕದಾಸ ಹಾಗೂ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕುಲ-ಕುಲವೆಂದು ಬಡಿದಾಡದಿರು ಎಂದು ಕನಕದಾಸರು ಹೇಳಿದರೆ, ತಮ್ಮ ಮಕ್ಕಳ ಪ್ರಾಣವನ್ನೂ ಲೆಕ್ಕಿಸದೇ ಬ್ರೀಟಿಷರೊಂದಿಗೆ ಹೋರಾಡಿದ ದೇಶದ ಪ್ರಥಮ ಹೋರಾಟಗಾರ ಟಿಪ್ಪು ಸುಲ್ತಾನ್ರು ಕೇವಲ ಮೈಸೂರು ಹುಲಿಯಾಗಿರದೇ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಎಂದರು.
ಇದೇ ಕಾರ್ಯಕ್ರಮದಲ್ಲಿ ನೂತನಾಗಿ ಅಸ್ತಿತ್ವಕ್ಕೆ ಬಂದ 'ರಕ್ತದಾನಿಗಳ ಸಂಘ'ವನ್ನು ಉದ್ಘಾಟಿಸಿದ ಕೆಪಿಸಿಸಿ ಸದಸ್ಯ ವಿಜಯ ಕುಲಕರ್ಣಿ, ರಕ್ತದ ಕೊರತೆಯಿಂದ ಹಲವರು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ಇಂತಹ ದಿನಮಾನಗಳಲ್ಲಿ ಎಲ್ಲ ಜನಾಂಗದ ಯುವಕರ ಪಡೆಯೊಂದು ರಕ್ತದಾನಿಗಳ ಸಂಘ ಸ್ಥಾಪಿಸಿ ರಕ್ತದಾನ ಮಾಡಲು ಉದ್ದೇಶಿಸಿದ ಕಾರ್ಯ ಶ್ಲಾಘನೀಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಧಾರವಾಡ ಮೀಡಿಯಾ ಕ್ಲಬ್ ಅಧ್ಯಕ್ಷ ಮುಸ್ತಫಾ ಕುನ್ನಿಭಾವಿ, ರಕ್ತದಾನಿಗಳ ಸಂಘ ದಿನದ 24/7 ಕಾರ್ಯನಿರ್ವಹಿಸಲಿದ್ದು, ಯಾರಾದರೂ ರಕ್ತದ ಕೊರತೆಯಿಂದ ಬಳಲುತ್ತಿದ್ದರೆ ಮೊಬೈಲ್ ನಂ. 8884776786 ಗೆ ಕರೆ ಮಾಡಿದಲ್ಲಿ ಇದ್ದಲ್ಲಿಗೆ ಬಂದು ರಕ್ತ ಪೂರೈಸಲು ಯುವಕರ ಪಡೆ ಸನ್ನದ್ಧವಾಗಿದೆ ಎಂದರು.
ಪುರಸಭೆ ಅಧ್ಯಕ್ಷೆ ಗಿರಿಜಾ ಕೊಳಲಿನ, ಸದಸ್ಯರಾದ ಜೀವನ ಪವಾರ, ಮಂಜು ಜಾಧವ, ಕಾಶೀಮ್ ಅಲ್ಲಿಬಾಯಿ, ಪ್ರಕಾಶ ಶಿಗ್ಲಿ, ರಿಯಾಜ ಪೀರಜಾದೆ, ಜಾವೀದ್ ಗುತ್ತಲ, ಭಾಷಾ ನೀಲಿ, ಖ್ವಾಜಾ ಹಂಚಿನಾಳ, ಹಟೇಲ ರಾಮದುರ್ಗ, ರಾಜು ಜಾಲಿಹಾಳ, ಅಬ್ಬಾಸ ದೇವರಿಡು, ದಾವಲ್ ಮಸೂತಿ, ವೆಂಕನಗೌಡ ಪಾಟೀಲ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಾಝಿಯಾ ಕೌಸರ್ ಅವರನ್ನು ಸತ್ಕರಿಸಲಾಯಿತು. ದಾವಲ ಮಸೂತಿ ಕಾರ್ಯಕ್ರಮ ನಿರೂಪಿಸಿದರು. ಅಬ್ಬಾಸ ದೇವರಿಡು ಸ್ವಾಗತಿಸಿದರು.