ಆ್ಯಪ್ನಗರ

ಕನ್ನಡ ಉಳಿಸುವ ಕೆಲಸವಾಗಲಿ: ಶೆಟ್ಟರ್‌

ಹುಬ್ಬಳ್ಳಿ : ರಾಜ್ಯದಲ್ಲಿರುವ ಕನ್ನಡ ಶಾಲೆಗಳಿಗೆ ಸೌಲಭ್ಯ ಒದಗಿಸುವುದರ ಜತೆ ಅನ್ಯಭಾಷಿಕರು ಹೆಚ್ಚಿರುವ ಬೆಂಗಳೂರಿನಲ್ಲಿ ಕನ್ನಡ ಉಳಿಸುವ ಕೆಲಸವಾಗಬೇಕು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಅಭಿಪ್ರಾಯಪಟ್ಟರು.

Vijaya Karnataka 9 Mar 2019, 5:00 am
ಹುಬ್ಬಳ್ಳಿ : ರಾಜ್ಯದಲ್ಲಿರುವ ಕನ್ನಡ ಶಾಲೆಗಳಿಗೆ ಸೌಲಭ್ಯ ಒದಗಿಸುವುದರ ಜತೆ ಅನ್ಯಭಾಷಿಕರು ಹೆಚ್ಚಿರುವ ಬೆಂಗಳೂರಿನಲ್ಲಿ ಕನ್ನಡ ಉಳಿಸುವ ಕೆಲಸವಾಗಬೇಕು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಅಭಿಪ್ರಾಯಪಟ್ಟರು.
Vijaya Karnataka Web DRW-8MANJU5
ಹುಬ್ಬಳ್ಳಿಯಲ್ಲಿ ವಿಶ್ವ ಕನ್ನಡ ಬಳಗದ ವತಿಯಿಂದ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ಆರಂಭವಾದ ಕನ್ನಡ ಜಾನಪದ ಸಾಂಸ್ಕೃತಿಕ ಹಾಗೂ ದೇಶಿ ಕ್ರೀಡೆಗಳ ಬೃಹತ್‌ ತೃತೀಯ ಸಮ್ಮೇಳನವನ್ನು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಉದ್ಘಾಟಿಸಿದರು.


ವಿಶ್ವ ಕನ್ನಡ ಬಳಗದ ವತಿಯಿಂದ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ಆರಂಭಗೊಂಡ ಕನ್ನಡ ಜಾನಪದ ಸಾಂಸ್ಕೃತಿಕ ಹಾಗೂ ದೇಶಿ ಕ್ರೀಡೆಗಳ ಬೃಹತ್‌ ತೃತೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಧಾರವಾಡ, ವಿಜಯಪುರ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕವೇ ನಿಜವಾದ ಗಂಡುಮೆಟ್ಟಿನ ನಾಡು. ಇಲ್ಲಿ ಹೆಚ್ಚು ಕನ್ನಡ ಮಾತನಾಡುವವರಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ಕನ್ನಡ ಕುಂಠಿತವಾಗುತ್ತಿದೆ. ಸರಕಾರ ಕನ್ನಡ ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಮಹಿಳೆಗೆ ಸಮಾನತೆ ಅಗತ್ಯ

ಮಹಿಳೆಯರನ್ನು ಮಹಿಳಾ ದಿನಕ್ಕೆ ಅಷ್ಟೇ ಸೀಮಿತಗೊಳಸಬಾರದು. ಮಹಿಳೆಗೆ ಎಲ್ಲ ರಂಗದಲ್ಲೂ ಅವಕಾಶ ನೀಡಬೇಕು. 12ನೇ ಶತಮಾನದಲ್ಲಿ ಬಸವಣ್ಣ ಮಹಿಳೆ ಮತ್ತು ಪುರುಷರಲ್ಲಿ ಸಮಾನತೆ ತರಲು ಪ್ರಯತ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಆದ್ದರಿಂದ ಎಲ್ಲ ರಂಗದಲ್ಲಿ ಮಹಿಳೆ ಕಾರ್ಯನಿರ್ವಹಿಸುವಂತಾಗಬೇಕು. ಅದು ಮಹಿಳೆಗೆ ನೀಡುವ ನಿಜವಾದ ಸ್ವಾತಂತ್ರ್ಯ ಎಂದರು.

ಜಿ.ಬಿ. ಚಿಕ್ಕಮಠ ಅವರು ನಾಡು-ನುಡಿ ವಿಷಯದ ಬಗ್ಗೆ ಉಪನ್ಯಾಸ ನೀಡಿ, ನಾಡ ರಕ್ಷಣೆ ಜತೆ ಭಾಷೆಯ ರಕ್ಷಣೆಯೂ ಅವಶ್ಯ. ಅನ್ಯಭಾಷೆಯ ಆಕ್ರಮಣದಿಂದ ಕನ್ನಡ ಭಾಷೆ ಮರೆಯಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಯುವ ಪೀಳಿಗೆಯಲ್ಲಿ ಕನ್ನಡ ಭಾಷೆಯ ಅಭಿಮಾನ ಮೂಡಿಸಬೇಕು ಎಂದರು.

ಆಧುನಿಕ ಜೀವನ ಪದ್ಧತಿ ಹಾಗೂ ತಂತ್ರಜ್ಞಾನ ಬಳಕೆಯಿಂದ ಯುವಕರು ಕನ್ನಡ ಭಾಷೆಯ ಮೇಲಿನ ಅಭಿಮಾನ ಮರೆಯುತ್ತಿದ್ದಾರೆ. ಜಗತ್ತಿನ ಹಲವು ಭಾಷೆಗಳಲ್ಲಿ ಕನ್ನಡ ಶ್ರೇಷ್ಠಭಾಷೆಯಾಗಿ ಹೆಸರಾಗಿದ್ದು, ಅದನ್ನು ಉಳಿಸಿ,ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಂದ ಹಾಗೂ ಕಲಾವಿದೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಮತ್ತು ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

ಜಾನಪದ ಹೆಬ್ಬುಲಿ ಪ್ರಶಸ್ತಿ ಪುರಸ್ಕೃತ ಮತ್ತು ಸಮ್ಮೇಳನಾಧ್ಯಕ್ಷ ವೆಂಕಪ್ಪ ಪುಲಿ, ವಿಶ್ವ ಕನ್ನಡ ಬಳಗ ಸಂಸ್ಥಾಪಕ ಅಧ್ಯಕ್ಷ ಸದಾಶಿವ ಚೌಶೆಟ್ಟಿ, ಮಲ್ಲಿಕಾರ್ಜುನ ಸಹುಕಾರ, ಮೋಹನ ಗುರುಸ್ವಾಮಿ, ಎಚ್‌.ಎಸ್‌. ಕಿರಣ, ಶಿಲ್ಪಾ ಶೆಟ್ಟರ್‌, ಉಪಮೇಯರ್‌ ಮೇನಕಾ ಹುರಳಿ ಸೇರಿದಂತೆ ಅನೇಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ