ಆ್ಯಪ್ನಗರ

ಮತದಾನ ಬಹಿಷ್ಕಾರಕ್ಕೆ ಕೆಎಸ್‌ಒಯು ಪದವೀಧರರ ನಿರ್ಧಾರ

ಹುಬ್ಬಳ್ಳಿ : ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕೆಎಸ್‌ಒಯು)ದ 2013-14 ಮತ್ತು 2014-15ನೇ ಸಾಲಿನ ಲಕ್ಷಾಂತರ ವಿದ್ಯಾರ್ಥಿಗಳು ಮತದಾನ ಬಹಿಷ್ಕಾರಕ್ಕೆ ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ.

Vijaya Karnataka 15 Apr 2019, 5:00 am
ಹುಬ್ಬಳ್ಳಿ : ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕೆಎಸ್‌ಒಯು)ದ 2013-14 ಮತ್ತು 2014-15ನೇ ಸಾಲಿನ ಲಕ್ಷಾಂತರ ವಿದ್ಯಾರ್ಥಿಗಳು ಮತದಾನ ಬಹಿಷ್ಕಾರಕ್ಕೆ ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ.
Vijaya Karnataka Web loka samar


ಮೈಸೂರು ಕೆಎಸ್‌ಒಯು ಭೌಗೋಳಿಕ ವ್ಯಾಪ್ತಿ ಮೀರುವ ಜತೆಗೆ ನಿಯಮ ಬಾಹಿರವಾಗಿ ತಾಂತ್ರಿಕ ಶಿಕ್ಷಣ ಕೋರ್ಸ್‌ಗಳನ್ನು ಹೊಂದಿದೆ ಎಂಬ ಕಾರಣದಿಂದ 2013-14 ಮತ್ತು 2014-15ನೇ ಸಾಲಿನ ವಿದ್ಯಾರ್ಥಿಗಳ ಪದವಿ ಮಾನ್ಯತೆಯನ್ನು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ) ರದ್ದುಗೊಳಿಸಿದೆ. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಹೀಗಾಗಿ ಅಕ್ರಮವಾಗಿ ಆರಂಭಿಸಿದ ತಾಂತ್ರಿಕ ಶಿಕ್ಷಣ ಹೊರತುಪಡಿಸಿ ತಾಂತ್ರಿಕೇತರ ವಿದ್ಯಾರ್ಥಿಗಳಿಗಾದರೂ ಮಾನ್ಯತೆ ನೀಡಬೇಕೆಂಬ ಆಗ್ರಹ ವಿದ್ಯಾರ್ಥಿಗಳಿಂದ ಕೇಳಿಬಂದಿದೆ.

ಮಾನ್ಯತೆಗೆ ಆಗ್ರಹಿಸಿ ನಾಲ್ಕು ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದರೂ ಸರಕಾರ ಸೊಪ್ಪು ಹಾಕಿಲ್ಲ. ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾನ್ಯತೆ ದೊರಕಿಸಿ ಕೊಡುವ ಭರವಸೆ ನೀಡಿದ್ದರಾದರೂ ಇಲಾಖೆಗೆ ಅಧಿಕೃತ ಆದೇಶ ದೊರೆಯದ ಕಾರಣ ಈ ಗೊಂದಲ ಹಾಗೇ ಮುಂದುವರಿದಿದೆ. ಈ ಕಗ್ಗಂಟಿನಿಂದಾಗಿ ವಿದ್ಯಾರ್ಥಿಗಳು ಉದ್ಯೋಗ, ಪದೋನ್ನತಿ, ಉನ್ನತ ವ್ಯಾಸಂಗಕ್ಕೆ ಹೋಗಲಾಗದೆ ಪರದಾಡುತ್ತಿದ್ದಾರೆ.

ಇನ್ನು ಯುಜಿಸಿ ಮಾನ್ಯತೆ ನವೀಕರಣ ಆಗುವವರೆಗೂ 2015-16ನೇ ಸಾಲಿನಿಂದ ಮೈಸೂರು ಮುಕ್ತ ವಿಶ್ವವಿದ್ಯಾಲಯದ ಕೋರ್ಸ್‌ಗಳಿಗೆ ಪ್ರವೇಶ ನೀಡುವುದನ್ನು ತಡೆ ಹಿಡಿಯಲಾಗಿತ್ತು. ಇದೀಗ ಅಂದರೆ 2018-19ನೇ ಸಾಲಿನಿಂದ ತಾಂತ್ರಿಕೇತರ ಕೋರ್ಸ್‌ಗಳ ಪ್ರವೇಶಾತಿಗೆ ಚಾಲನೆ ದೊರೆತಿದೆ. ಆದರೆ, ತಾಂತ್ರಿಕೇತರ ಕೋರ್ಸ್‌ಗಳ 2013-14 ಮತ್ತು 2014-15ನೇ ಸಾಲಿನ 96 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಡೆದ ಪದವಿಗೆ ಮಾನ್ಯತೆ ಸಿಕ್ಕಿಲ್ಲ.

ಸರಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆಯದ ಕಾರಣ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರಕ್ಕೆ ಈ ವಿದ್ಯಾರ್ಥಿಗಳು ಪೂರಕ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಮುಕ್ತ ವಿವಿಯ ವಿದ್ಯಾರ್ಥಿಗಳು ವಿವಿಧೆಡೆ ಚದುರಿ ಹೋಗಿದ್ದರಿಂದ ಒಗ್ಗೂಡಿಸುವುದು ಈ ಸಂಘಟನೆಗೆ ಸವಾಲಿನ ಕೆಲಸವಾಗಿದೆ. ಈ ಮಧ್ಯೆಯೂ ಸೋಷಿಯಲ್‌ ಮಿಡಿಯಾಗಳ ಮೂಲಕ 2013-14 ಮತ್ತು 2014-15ನೇ ಸಾಲಿನ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಪ್ರಯತ್ನ ನಡೆದಿದೆ.

ಈಗಾಗಲೇ 250ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನೊಳಗೊಂಡ ವಾಟ್ಸ್‌ಆ್ಯಪ್‌ ಗ್ರುಪ್‌ ಮಾಡಿಕೊಂಡಿರುವ ಸಂಘಟನೆ ಮತದಾನ ಬಹಿಷ್ಕರಿಸುವಂತೆ ಮಾಹಿತಿ ರವಾನಿಸುತ್ತಿದೆ. ನೊಂದ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗೆ ಮೊ. 8217304468ಗೆ ಸಂಪರ್ಕಿಸಬಹುದು.

ಎಲ್ಲರ ಸಂಪರ್ಕಕ್ಕೆ ಪ್ರಯತ್ನ

ನಮ್ಮ ಬೇಡಿಕೆ ಈಡೇರಿಸಲು ಸರಕಾರ ಅಸಡ್ಡೆ ಭಾವನೆ ತೋರಿಸುತ್ತಿದೆ. ಹೀಗಾಗಿ ಇದನ್ನು ಸವಾಲಾಗಿ ಸ್ವೀಕರಿಸಿ ವಿದ್ಯಾರ್ಥಿಗಳನ್ನು ಒಗ್ಗೂಡಿಸುತ್ತಿದ್ದೇವೆ. ವಿವಿಧ ಮೂಲಗಳಿಂದ 2013-14 ಮತ್ತು 2014-15ನೇ ಸಾಲಿನ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಮತದಾನ ಬಹಿಷ್ಕಾರದ ಬಗ್ಗೆಯೂ ಜಾಗೃತಿ ಮೂಡಿಸಿ ಬೇಡಿಕೆ ಈಡೇರಿಕೆಗೆ ಆಗ್ರಹಿಸುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ವಿದ್ಯಾರ್ಥಿನಿ ನಿರ್ಮಲಾ ನಾಯ್ಡು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ