ಆ್ಯಪ್ನಗರ

ಸಾಲಮನ್ನಾ ಭಾಗ್ಯಕ್ಕೆ ಕುತ್ತು ?

ಧಾರವಾಡ : ಬೆಳೆ ಸಾಲ ಮನ್ನಾ ಲಾಭ ಪಡೆಯಲು ಪಡಿತರ ಚೀಟಿ ಕಡ್ಡಾಯಗೊಳಿಸಿರುವ ಸರಕಾರದ ನಿರ್ಧಾರ ಇದೀಗ ಅರ್ಹ ರೈತ ಫಲಾನುಭವಿಗಳಲ್ಲಿ ಯೋಜನೆಯಿಂದ ವಂಚಿತಗೊಳ್ಳುವ ಆತಂಕ ಹುಟ್ಟಿಸಿದೆ.

Vijaya Karnataka 15 Dec 2018, 5:00 am
ಧಾರವಾಡ : ಬೆಳೆ ಸಾಲ ಮನ್ನಾ ಲಾಭ ಪಡೆಯಲು ಪಡಿತರ ಚೀಟಿ ಕಡ್ಡಾಯಗೊಳಿಸಿರುವ ಸರಕಾರದ ನಿರ್ಧಾರ ಇದೀಗ ಅರ್ಹ ರೈತ ಫಲಾನುಭವಿಗಳಲ್ಲಿ ಯೋಜನೆಯಿಂದ ವಂಚಿತಗೊಳ್ಳುವ ಆತಂಕ ಹುಟ್ಟಿಸಿದೆ.
Vijaya Karnataka Web lend money
ಸಾಲಮನ್ನಾ ಭಾಗ್ಯಕ್ಕೆ ಕುತ್ತು ?


ರಾಜ್ಯ ಸರಕಾರ ಸಾಲ ಮನ್ನಾ ಪಡೆಯಲು ರೈತರಿಂದ ಸ್ವಯಂ ಘೋಷಣಾ ಪತ್ರವನ್ನು ಪಡೆದು ಫಲಾನುಭವಿಗಳನ್ನು ಗುರುತಿಸುತ್ತಿದೆ. ಆದರೆ, ಇದಕ್ಕೆ ಆಧಾರ ಕಾರ್ಡ್‌ ಜತೆಗೆ 2018, ಜು. 5ರೊಳಗಾಗಿ ಪಡೆದ ಪಡಿತರ ಚೀಟಿ ಪ್ರತಿ ಲಗತ್ತಿಸುವುದನ್ನು ಕಡ್ಡಾಯಗೊಳಿಸಿರುವುದು ಸಮಸ್ಯೆ ಆಗಿದೆ. ಅರ್ಜಿ ಸಲ್ಲಿಸಿದರೂ ರೇಷನ್‌ ಕಾರ್ಡ್‌ ಸಿಗದೇ ಇರುವ ಸಾವಿರಾರು ರೈತರು ಸಾಲಮನ್ನಾ ಭಾಗ್ಯ ಕಳೆದುಕೊಳ್ಳುವ ಸಂದಿಗ್ಧತೆಗೆ ಸಿಲುಕಿದ್ದಾರೆ.

2016-17ನೇ ಸಾಲಿನಲ್ಲಿ ರಾಜ್ಯದಲ್ಲಿ ಲಕ್ಷಲಕ್ಷ ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸಿದ ಸರಕಾರ ಪಾರದರ್ಶಕತೆ ಕಾಪಾಡಲು ಹೊರಟಿತ್ತು. ಆ ನಂತರ ವಿಧಾನಸಭೆ ಚುನಾವಣೆ ಸಮೀಪಿಸಿದಾಗ ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು. ಆದರೆ, ಚುನಾವಣೆ ನೀತಿ ಸಂಹಿತೆ ಎಂದೆಲ್ಲ ಹೇಳಿ ಅರ್ಜಿ ಸಲ್ಲಿಸಿದ ಬಹುತೇಕರಿಗೆ ಇನ್ನೂವರೆಗೂ ಕಾರ್ಡ್‌ ನೀಡಿಲ್ಲ. ಇಂತಹದರಲ್ಲಿ ಸಾಲ ಮನ್ನಾಕ್ಕೆ ರೇಷನ್‌ ಕಾರ್ಡ್‌ ಬೇಕು ಎನ್ನುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

4964 ಅರ್ಜಿ ಬಾಕಿ

ಧಾರವಾಡ ಜಿಲ್ಲೆಯೊಂದರಲ್ಲಿಯೇ ಸದ್ಯ 4,694 ಅರ್ಜಿಗಳು ಬಾಕಿ ಇದ್ದು, ಈ ಕುಟುಂಬಗಳಿಗೆ ರೇಷನ್‌ ಕಾರ್ಡ್‌ ಸಿಕ್ಕಿಲ್ಲ. ಉಳಿದಂತೆ ಕೆಲವರಿಗೆ ತಾತ್ಕಾಲಿಕ ಪಡಿತರ ಚೀಟಿ ನೀಡಲಾಗಿದ್ದರೂ ಇನ್ನೂ ಶಾಶ್ವತ ಕಾರ್ಡ್‌ ಬಂದಿಲ್ಲ. ಈಗ ಪ್ರತಿ ದಿನ ಒಬ್ಬ ಆಹಾರ ನಿರೀಕ್ಷಕರಿಗೆ 20-25 ಅರ್ಜಿಗಳ ಇತ್ಯರ್ಥಕ್ಕೆ ಗಡುವು ನೀಡಲಾಗಿದೆ. ಬೇರೆಬೇರೆ ಜಿಲ್ಲೆಗಳಲ್ಲೂ ಇದೇ ವಾಸ್ತವ ಪರಿಸ್ಥಿತಿ. ಈ ಮಧ್ಯೆ ಸಾಲ ಮನ್ನಾ ಯೋಜನೆಗೆ ಜು. 5ಕ್ಕೂ ಮುಂಚೆ ಪಡೆದ ಪಡಿತರ ಚೀಟಿ ಪ್ರತಿಯನ್ನೇ ಲಗತ್ತಿಸಬೇಕು ಎಂದು ಸರಕಾರ ಷರತ್ತು ವಿಧಿಸಿರುವುದು ಯಕ್ಷ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಆಧಾರ ಕಾರ್ಡ್‌ ಹಾಗೂ ಪಡಿತರ ಚೀಟಿಯನ್ನು ಕಡ್ಡಾಯವಾಗಿ ಸಲ್ಲಿಸುವಂತೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೂಲಕ ಈಗಾಗಲೇ ರೈತರಿಗೆ ಸೂಚನೆ ನೀಡಲಾಗುತ್ತಿದೆ. ಅದಕ್ಕೆ ಡಿ. 30ರ ಡೆಡ್‌ಲೈನ್‌ ಕೂಡ ನೀಡಲಾಗಿದೆ. ರೇಷನ್‌ ಕಾರ್ಡ್‌ ಎಲ್ಲರಿಗೂ ಸಿಕ್ಕಿದೆ ಎಂಬುದು ಜಿಲ್ಲಾಧಿಕಾರಿಗಳ ವಾದ. ಆದರೆ, ಆಹಾರ ಇಲಾಖೆ ಅಧಿಕಾರಿಗಳನ್ನು ಕೇಳಿದಾಗ ಸಾವಿರಾರು ಅರ್ಜಿಗಳು ಬಾಕಿ ಇವೆ ಎಂಬ ಉತ್ತರ ಬಂದಿದೆ. ಹೀಗಾಗಿ ರೇಷನ್‌ ಕಾರ್ಡ್‌ ಇಲ್ಲದವರು ಸಾಲ ಮನ್ನಾ ಯೋಜನೆಗೆ ಅನರ್ಹರರೇ ಎಂಬ ಗೊಂದಲ ಮುಂದುವರೆದಿದೆ.

ಈ ಕುರಿತಂತೆ ವಿಕ ಜತೆ ಮಾತನಾಡಿದ ರೈತರು,'' ತಮ್ಮ ಬಳಿ ರೇಷನ್‌ ಕಾರ್ಡ್‌ ಇಲ್ಲ. ತಾತ್ಕಾಲಿಕ ಪಡಿತರ ಚೀಟಿಯೊಂದನ್ನು ಆನ್‌ಲೈನ್‌ನಲ್ಲಿ ಪಡೆಯಲಾಗಿದೆಯಾದರೂ ಅದರಿಂದ ಆರೋಗ್ಯ ಕರ್ನಾಟಕ ಸೌಲಭ್ಯ ಪಡೆಯಲೂ ಕಷ್ಟಸಾಧ್ಯ ಆಗಿದೆ. ಹೀಗಾಗಿ ಸಾಲ ಮನ್ನಾ ಲಾಭ ಪಡೆಯಲು ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ ''ಎಂದು ನಿವೇದಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ