ಆ್ಯಪ್ನಗರ

24 ಗಂಟೆಯೊಳಗೆ ರೈತರ ಸಾಲಮನ್ನಾ

ಕುಂದಗೋಳ : ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಅವರು ಮಣ್ಣಿನ ಮಕ್ಕಳೆಂದು ಬೀಗುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 24 ಗಂಟೆಯೊಳಗೆ ರೈತರ ಸಾಲಮನ್ನಾ ಮಾಡುತ್ತೇವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಭರವಸೆ ನೀಡಿದರು.

Vijaya Karnataka 6 May 2019, 5:00 am
ಕುಂದಗೋಳ : ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಅವರು ಮಣ್ಣಿನ ಮಕ್ಕಳೆಂದು ಬೀಗುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 24 ಗಂಟೆಯೊಳಗೆ ರೈತರ ಸಾಲಮನ್ನಾ ಮಾಡುತ್ತೇವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಭರವಸೆ ನೀಡಿದರು.
Vijaya Karnataka Web DRW-5KND2
ಕುಂದಗೋಳ ಪಟ್ಟಣದ ಶಿವಾನಂದಮಠದ ಶಾಲೆ ಆವರಣದಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡ್ರ ಪರ ಚುನಾವಣೆ ಪ್ರಚಾರದಲ್ಲಿ ವÞಜಿ ಉಪಮುಖ್ಯ ಮಂತ್ರಿ ಕೆ.ಎಸ್‌. ಈಶ್ವರಪ್ಪ ಮಾತನಾಡಿದರು.


ಪಟ್ಟಣದ ಶಿವಾನಂದಮಠದ ಶಾಲೆ ಆವರಣದಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡ್ರ ಪರ ಚುನಾವಣೆ ಪ್ರಚಾರದಲ್ಲಿ ಮಾತನಾಡಿ, ಕಾಂಗ್ರೆಸ್‌-ಜೆಡಿಎಸ್‌ ಈವರೆಗೂ ರೈತರ ಮೂಗಿಗೆ ತುಪ್ಪ ಒರೆಸುವ ಕೆಲಸ ಮಾಡುತ್ತಿವೆ. ಆದರೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ರೈತರ 25 ಸಾವಿರ ರೂ. ಸಾಲಮನ್ನಾ ಮಾಡಿ ನಿಜವಾದ ಮಣ್ಣಿನ ಮಗನಾಗಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ನವರು ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದು ಬಿಂಬಿಸುತ್ತಿದ್ದಾರೆ. ಆದರೆ ನಮ್ಮ ಅಧಿಕಾರದಲ್ಲಿ ಎಲ್ಲ ಸಮುದಾಯಕ್ಕೂ ಕೋಟಿ, ಕೋಟಿ ರೂ. ನೀಡಿದ್ದೇವೆ. ಇದರಿಂದ ರಾಜ್ಯದ ಎಲ್ಲ ಮತದಾರರಿಗೂ ಅರ್ಥವಾಗುತ್ತದೆ ನಿಜವಾದ ಕೋಮುವಾದಿ ಪಕ್ಷ ಯಾವುದು ಎಂಬುದು ಎಂದರು.

'ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿಯಾಗುತ್ತೇನೆ. ಕುಮಾರಸ್ವಾಮಿ ಅವರಪ್ಪನಾಣೆ ಮುಖ್ಯಮಂತ್ರಿ ಆಗಲಾರರು ಎಂದಿದ್ದರು. ಆದರೆ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಿದ್ದಾರೆ. ಸಿದ್ದರಾಮಯ್ಯನವರು ಹೇಳುತ್ತಿರುವುದೆಲ್ಲ ಉಲ್ಟಾಪಲ್ಟಾ ಆಗುತ್ತಿದೆ. ಇಂದು ಕುಸುಮಾವತಿ ಶಿವಳ್ಳಿ ಗೆಲ್ಲುತ್ತಾರೆ ಎನ್ನುತ್ತಿರುವುದರಿಂದ ಇಲ್ಲಿ ಚಿಕ್ಕನಗೌಡ್ರ ಗೆಲ್ಲುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಬಿಜೆಪಿ ಹಿಂದುಳಿದ ವರ್ಗಕ್ಕೆ ಸಾಕಷ್ಟು ಅನುದಾನ ನೀಡಿದೆ. ಸಿದ್ದರಾಮಯ್ಯ ಹಿಂದುಳಿದ ನಾಯಕನೆಂದು ಬೀಗುತ್ತಿದ್ದು, ನಮಗಿಂತಲೂ ಅಧಿಕ ಅನುದಾನವನ್ನು ಯಾವ ವರ್ಗಕ್ಕೆ ನೀಡಿದ್ದಾರೆ ಎಂಬುದನ್ನು ತೋರಿಸಿದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಸವಾಲೆಸೆದರು.

ಬಿಜೆಪಿಯಲ್ಲಿ ಅಹಿಂದಕ್ಕೆ ಟಿಕೆಟ್‌ ಸರಿಯಾಗಿ ಹಂಚಿಕೆಯಾಗಿಲ್ಲ ಎಂದು ಆರೋಪಿಸುವ ಸಿದ್ದರಾಮಯ್ಯ ಸೋಲುವ ಲೋಕಸಭೆ ಕ್ಷೇತ್ರಕ್ಕೆ ಟಿಕೆಟ್‌ ನೀಡಿ ಅಹಿಂದಕ್ಕೆ ಅನ್ಯಾಯವೆಸಗುತ್ತಿದ್ದಾರೆ. ಮೇ 23 ರಂದು ಮೈತ್ರಿ ಪಕ್ಷ ಹಳಸಿದ ಚಿಂದಿ ಚಿತ್ರಾನ್ನವಾಗುತ್ತದೆ ಎಂದು ಭವಿಷ್ಯ ನುಡಿದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶಟ್ಟರ್‌ ಮಾತನಾಡಿ, ರಾಹುಲ್‌ ಗಾಂಧಿ ನಾಲಿಗೆ ಹರಿಬಿಟ್ಟು ಕೋರ್ಟ್‌ನಲ್ಲಿ ಕ್ಷ ಮೆಯಾಚಿಸುತ್ತಿದ್ದು, ಇಂಥ ರಾಷ್ಟ್ರ ನಾಯಕರಂತೆ ರಾಜ್ಯ ನಾಯಕರೂ ನಾಲಿಗೆ ಹರಿಬಿಡುವುದು ಒಳ್ಳೆಯದಲ್ಲ. ದೇವೇಗೌಡರು, ಕುಮಾರಸ್ವಾಮಿ ಅವರು ಹೋಮ-ಹವನಗಳಿಗೆ ವೇಳೆ ನಷ್ಟ ಮಾಡುತ್ತಿದ್ದು, ಅವ್ಯಾವೂ ನಿಖಿಲ ಗೆಲುವಿಗೆ ಸಹಕಾರಿಯಾಗಲಾರವು ಎಂದು ಹೇಳಿದರು.

ಮಾಜಿ ಸಚಿವ ಸಿ.ಸಿ. ಪಾಟೀಲ, ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಅನ್ನಭಾಗ್ಯ ನೀಡಿದ್ದೇವೆ ಎಂದು ಬೀಗುತ್ತಿರುವ ಸಿದ್ದರಾಮಯ್ಯ ಕೇಂದ್ರದಿಂದ ಅಕ್ಕಿ ಪಡೆದು, ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಸಿದ್ದರಾಮಯ್ಯ ಅವರನ್ನು ಕುರಿತು ಕಿಡಿಕಾರಿದರಲ್ಲದೆ ಸಾಲಮನ್ನಾ ಮಾಡಿದ್ದೇವೆ ಎಂದು ಸುಳ್ಳು ಹೇಳುತ್ತಿರುವ ಮೈತ್ರಿ ಸರಕಾರ ಈವರೆಗೂ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ 2596 ಕೋಟಿ ಹಾಗೂ ಸಹಕಾರಿ ಬ್ಯಾಂಕ್‌ನಲ್ಲಿ 9919 ಕೋಟಿ 60 ಲಕ್ಷ ಮಾತ್ರ ಸಾಲಮನ್ನಾ ಮಾಡಿದ್ದು, ಜಾಹೀರಾತಿನಲ್ಲಿ 46 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದೇವೆ ಎಂದು ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡ್ರ, ಮುಖಂಡ ಎಂ.ಆರ್‌. ಪಾಟೀಲ ಮಾತನಾಡಿದರು. ಮಾಜಿ ಸಚಿವ ರೇಣುಕಾಚಾರ್ಯ, ಸಿ.ಎಂ. ನಿಂಬಣ್ಣವರ, ಅಭಯ ಪಾಟೀಲ, ಪ್ರದೀಪ ಶಟ್ಟರ, ಮಹೇಶ ಟೆಂಗಿನಕಾಯಿ, ಶ್ರೀನಿವಾಸ ಪೂಜಾರಿ, ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ನೆಹರೂ ಓಲೇಕಾರ, ಮಾಂತೇಶ ಶಾಗೋಟಿ, ಮಲ್ಲಿಕಾರ್ಜುನ ಕಿರೇಸೂರ, ರಮೇಶ ಕೊಪ್ಪದ ಸೇರಿದಂತೆ ಅನೇಕರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ