ಆ್ಯಪ್ನಗರ

ನನ್ನನ್ನು ಉಚ್ಚಾಟಿಸಲು ಯಾರಿಂದಲೂ ಸಾಧ್ಯವಿಲ್ಲ: ಯತ್ನಾಳ್‌ ಸವಾಲು

ಸಿಎಂ ಯಡಿಯೂರಪ್ಪನವರ ಕುಟುಂಬದ ಸದಸ್ಯರು ಸಿಎಂ ಗೃಹ ಕಚೇರಿ ಕಾವೇರಿಯಲ್ಲಿ ಕುಳಿತು ಒಂದೊಂದು ಇಲಾಖೆ ನಿರ್ವಹಣೆ ಮಾಡುತ್ತಿರುವುದು ಸುಳ್ಳಲ್ಲ. ಹೀಗಾಗಿ ಯಾರಿಂದಲೂ ನನ್ನನ್ನು ಪಕ್ಷದಿಂದ ಹೊರ ಹಾಕಲು ಸಾಧ್ಯವಿಲ್ಲ

Vijaya Karnataka Web 10 Apr 2021, 11:18 pm
ಹುಬ್ಬಳ್ಳಿ/ಧಾರವಾಡ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದೇನೆ. ಈ ಕುರಿತು ಪ್ರಧಾನಮಂತ್ರಿ ಅವರಿಗೂ ಪತ್ರ ಬರೆದು ಗಮನಕ್ಕೆ ತಂದಿದ್ದೇನೆ. ಸತ್ಯವನ್ನೇ ಮಾತನಾಡುವ ನನ್ನನ್ನು ಪಕ್ಷದಿಂದ ಹೊರ ಹಾಕಲು ಹೇಗೆ ಸಾಧ್ಯ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಪ್ರಶ್ನಿಸಿದರು.
Vijaya Karnataka Web ಬಸನಗೌಡ ಪಾಟೀಲ್‌ ಯತ್ನಾಳ
ಬಸನಗೌಡ ಪಾಟೀಲ್‌ ಯತ್ನಾಳ


ಪಕ್ಷದ ನಾಯಕರ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿರುವ ಯತ್ನಾಳ್‌ ಅವರನ್ನು ಶೀಘ್ರವೇ ಪಕ್ಷದಿಂದ ಹೊರಹಾಕಲಾಗುತ್ತೆ ಎಂಬ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ''ಸಿಎಂ ಯಡಿಯೂರಪ್ಪನವರ ಕುಟುಂಬದ ಸದಸ್ಯರು ಸಿಎಂ ಗೃಹ ಕಚೇರಿ ಕಾವೇರಿಯಲ್ಲಿ ಕುಳಿತು ಒಂದೊಂದು ಇಲಾಖೆ ನಿರ್ವಹಣೆ ಮಾಡುತ್ತಿರುವುದು ಸುಳ್ಳಲ್ಲ. ಹೀಗಾಗಿ ಯಾರಿಂದಲೂ ನನ್ನನ್ನು ಪಕ್ಷದಿಂದ ಹೊರ ಹಾಕಲು ಸಾಧ್ಯವಿಲ್ಲ'' ಎಂದು ತಿರುಗೇಟು ನೀಡಿದರು.

''ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣದ ಬಗ್ಗೆ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ, ಸಚಿವ ಕೆ.ಎಸ್‌.ಈಶ್ವರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ. ಮುಂದೆ ಇನ್ನೂ ಅನೇಕ ಮುಖಂಡರು ಧ್ವನಿ ಎತ್ತಲಿದ್ದಾರೆ. ಶೀಘ್ರವೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಲಿದೆ'' ಎಂದು ಪುನರುಚ್ಚರಿಸಿದರು.

ಸಿಎಂ ಸ್ಥಾನ ಅಪೇಕ್ಷಿತರ ಪಟ್ಟಿಯಲ್ಲಿಲ್ಲ

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್‌, ''ನಾನು ಮುಖ್ಯಮಂತ್ರಿ ಸ್ಥಾನದ ಅಪೇಕ್ಷಿತರ ಪಟ್ಟಿಯಲ್ಲಿಇಲ್ಲ. ಆದರೆ ಪಕ್ಷ ಯಾವ ರೀತಿಯ ನಿರ್ಣಯ ತೆಗೆದುಕೊಳ್ಳುತ್ತದೋ ಹೇಳಲಾಗದು. ಖಂಡಿತವಾಗಿಯೂ ಈ ಕುರಿತು ವರಿಷ್ಠರು ನಿರ್ಣಯ ತೆಗೆದುಕೊಳ್ಳಲಿದ್ದು, ಮೇ 2ರ ಹೊತ್ತಿಗೆ ಅದು ಗೊತ್ತಾಗಲಿದೆ'' ಎಂದು ಹೇಳಿದರು.

ನನಗೆ ಅವಕಾಶ ಕೊಟ್ಟರೆ...

ನಾಯಕತ್ವ ಬದಲಾವಣೆಯಾದರೆ ಬೆಂಗಳೂರಿನ ಭಾಗದ ಯಾರೊಬ್ಬರೂ ಮುಖ್ಯಮಂತ್ರಿ ಆಗುವುದಿಲ್ಲ. ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಆಗುವುದು ಶತಸಿದ್ಧ. ಅಟಲ್‌ ಬಿಹಾರಿ ವಾಜಪೇಯಿ ಅವರ ಸರಕಾರದಲ್ಲಿನಾನು ರೈಲ್ವೆ ಮಂತ್ರಿಯಾಗಿ ಉತ್ತಮ ಟ್ರ್ಯಾಕ್‌ ರೆಕಾರ್ಡ್‌ ಹೊಂದಿದ್ದೇನೆ. ನನಗೆ ಅವಕಾಶ ಕೊಟ್ಟರೆ ಮಾದರಿ ರಾಜ್ಯವನ್ನಾಗಿ ಮಾಡಲಿದ್ದೇನೆ ಎಂದು ಬಸನಗೌಡಪಾಟೀಲ್‌ ಯತ್ನಾಳ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ