ಆ್ಯಪ್ನಗರ

ವೈದ್ಯರು, ಸಿಬ್ಬಂದಿಗೆ ಮೂಗುದಾರ

​ಹುಬ್ಬಳ್ಳಿ : ವೈದ್ಯರು ಮತ್ತು ಸಿಬ್ಬಂದಿ ಹಾಜರಿ ಮೇಲೆ ನಿಗಾವಹಿಸಲು ಈಗಾಗಲೇ ಜಾರಿಯಲ್ಲಿರುವ ಬಯೋಮೆಟ್ರಿಕ್‌ಗೆ ಆಧಾರ ಕಾರ್ಡ್‌ ಲಿಂಕ್‌ ಮಾಡುವ ವ್ಯವಸ್ಥೆ ಕಡ್ಡಾಯಗೊಳಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

Vijaya Karnataka 26 Nov 2019, 5:00 am
ಕಲ್ಮೇಶ ಪಟ್ಟಣದವರ
Vijaya Karnataka Web nose to the doctor staff
ವೈದ್ಯರು, ಸಿಬ್ಬಂದಿಗೆ ಮೂಗುದಾರ

ಹುಬ್ಬಳ್ಳಿ : ವೈದ್ಯರು ಮತ್ತು ಸಿಬ್ಬಂದಿ ಹಾಜರಿ ಮೇಲೆ ನಿಗಾವಹಿಸಲು ಈಗಾಗಲೇ ಜಾರಿಯಲ್ಲಿರುವ ಬಯೋಮೆಟ್ರಿಕ್‌ಗೆ ಆಧಾರ ಕಾರ್ಡ್‌ ಲಿಂಕ್‌ ಮಾಡುವ ವ್ಯವಸ್ಥೆ ಕಡ್ಡಾಯಗೊಳಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಆರೋಗ್ಯ ಇಲಾಖೆಯ ಆಡಳಿತ ಯಂತ್ರವನ್ನು ಪಾರದರ್ಶಕವಾಗಿಸಲು ರಾಜ್ಯದ ಎಲ್ಲಪಿಎಚ್‌ಸಿ (ಪ್ರಾಥಮಿಕ ಆರೋಗ್ಯ ಕೇಂದ್ರ)ಗಳಿಂದ ಜಿಲ್ಲಾಸ್ಪತ್ರೆಗಳವರೆಗೆ ವೈದ್ಯರು ಮತ್ತು ಸಿಬ್ಬಂದಿ ಮೇಲೆ ನಿಗಾವಹಿಸಲು ನ.18ರಿಂದ ಸರಕಾರ ಆಧಾರ್‌ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೊಳಿಸಿದೆ. ಈ ಮೂಲಕ ಬಡ ರೋಗಿಗಳಿಗೆ ವೈದ್ಯರು ಮತ್ತು ಸಿಬ್ಬಂದಿ ಲಭ್ಯತೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ.

ಹಾಜರಿ ಹಾಕಿ ಹೊರ ಹೋಗುತ್ತಿದ್ದ ವೈದ್ಯರು ಮತ್ತು ಸಿಬ್ಬಂದಿಗೆ ಈ ನೂತನ ವ್ಯವಸ್ಥೆ ಕಡಿವಾಣ ಹಾಕಲಿದೆ. ಅಲ್ಲದೆ, ಹೊಂದಾಣಿಕೆ ಮೇಲೆ ಕೆಲಸ ಮಾಡುವ ಸಿಬ್ಬಂದಿಗೂ ಈ ವ್ಯವಸ್ಥೆ ಸಂಕಷ್ಟ ತಂದಿದೆ. ಇನ್ಮುಂದೆ ಕಡ್ಡಾಯ ಹಾಜರಾಗುವುದು ಅನಿವಾರ್ಯ ಆಗಲಿದೆ. ನಿತ್ಯ ಹಾಜರಿ ಹಾಕದಿದ್ದರೆ ವೇತನ ಕಡಿತ ಆಗಲಿದೆ. ಈ ಮೂಲಕ ರಾಜ್ಯದ ಎಲ್ಲಸರಕಾರಿ ಆಸ್ಪತ್ರೆಯ ಗುತ್ತಿಗೆ ನೌಕರರನ್ನು ಒಳಗೊಂಡಂತೆ ಎಲ್ಲಸಿಬ್ಬಂದಿಯ ಆಧಾರ್‌ ನಂಬರ್‌ನ್ನು ಬಯೋಮೆಟ್ರಿಕ್‌ಗೆ ಜೋಡಿಸಲಾಗುತ್ತಿದೆ.

ವಿಶೇಷವಾಗಿ ಎಚ್‌ಆರ್‌ಎಂಎಸ್‌ (ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ)ಗೂ ಆಧಾರ್‌ ಜೋಡಣೆ ಮಾಡಿರುವುದರಿಂದ ವೈದ್ಯರು, ಸಿಬ್ಬಂದಿ ಬಯೋಮೆಟ್ರಿಕ್‌ ಹಾಜರಿ ಹಾಕಿದಾಗ ಸಿಬ್ಬಂದಿಯ ನಿಖರ ಸಮಯ ದಾಖಲಾಗುತ್ತದೆ. ಹೀಗಾಗಿ ಎಚ್‌ಆರ್‌ಎಂಎಸ್‌ ವೈದ್ಯರು ಮತ್ತು ಸಿಬ್ಬಂದಿ ಮೇಲೆ ನೇರವಾಗಿ ನಿಗಾವಹಿಸಲಿದೆ. ಬಯೋಮೆಟ್ರಿಕ್‌ಗೆ ಆಧಾರ್‌ ಲಿಂಕ್‌ ಆದವರ ಭಾವಚಿತ್ರ ಹಾಗೂ ಪ್ರತ್ಯೇಕ ಗುರುತಿನ ಸಂಖ್ಯೆ ಕಂಪ್ಯೂಟರ್‌ ಪರದೆ ಮೇಲೆ ಬರಲಿದೆ. ಆ ನಂಬರ್‌ ನಮೂದಿಸಿದಾಗ ಮಾತ್ರ ಹಾಜರಿ ಖಾತರಿಗೊಳ್ಳಲಿದೆ. ಒಂದು ವೇಳೆ ಹಾಜರಾತಿಯಲ್ಲಿವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ಕಂಡುಬಂದಲ್ಲಿವೇತನ ಸಹ ಕಡಿತಗೊಳ್ಳಲಿದೆ.

ಅದರಲ್ಲೂಎಚ್‌ಆರ್‌ಎಂಎಸ್‌ ಜತೆಗೆ ಸ್ಥಳೀಯ ಆರೋಗ್ಯಾಧಿಕಾರಿಗಳು ವೈದ್ಯರು ಮತ್ತು ಸಿಬ್ಬಂದಿ ಹಾಜರಿ ಬಗ್ಗೆ ನಿಗಾವಹಿಸಲು ಅವಕಾಶವಿದೆ. ಪ್ರತಿ ಪಿಎಚ್‌ಸಿ ಸೆಂಟರ್‌ಗಳಲ್ಲಿಯೂ ಅದಕ್ಕಾಗಿ ಅಡ್ಮಿನ್‌ಗಳನ್ನೂ ನಿಯೋಜಿಸಲು ಯೋಚಿಸಿರುವ ಸರಕಾರ, ಪಿಎಚ್‌ಸಿ ಉಪ ಕೇಂದ್ರಗಳಲ್ಲಿನ ಸಿಬ್ಬಂದಿ ಕರ್ತವ್ಯ ನಿರ್ವಹಣೆ ಕುರಿತು ನಿಗಾವಹಿಸಲು ಆದ್ಯತೆ ನೀಡಿದೆ.

ಹೊಸ ಲಿಂಕ್‌ ಸೇರ್ಪಡೆಗೆ ತೊಂದರೆ!
ವರ್ಷದ ಹಿಂದೆಯೇ ಕಿಮ್ಸ್‌ನಲ್ಲಿಬಯೋಮೆಟ್ರಿಕ್‌ಗೆ ಆಧಾರ್‌ ಕಾರ್ಡ್‌ ಲಿಂಕ್‌ ವ್ಯವಸ್ಥೆ ಜಾರಿಯಲ್ಲಿದೆ. ಆದರೆ ಸರ್ವರ್‌ ಸಮಸ್ಯೆಯಿಂದ ಹೊಸ ಲಿಂಕ್‌ ಸೇರ್ಪಡೆಗೆ ತೊಂದರೆಯಾಗುತ್ತಿದೆ. ಹೀಗಾಗಿ ಹೊಸಬರ ಆಧಾರ್‌ ಕಾರ್ಡ್‌ ಲಿಂಕ್‌ ವಿಳಂಬವಾಗುತ್ತಿದೆ. ಇದನ್ನು ಮತ್ತಷ್ಟು ಸುಧಾರಣೆಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಿಮ್ಸ್‌ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ 'ವಿಕ'ಕ್ಕೆ ತಿಳಿಸಿದರು.

ಅನುಕೂಲಗಳೇನು..?

-ವೈದ್ಯರು ಮತ್ತು ಸಿಬ್ಬಂದಿ ಕೆಲಸ ಅಚ್ಚುಕಟ್ಟು

-ರೋಗಿಗಳಿಗೆ ವೈದ್ಯರ, ಸಿಬ್ಬಂದಿ ಲಭ್ಯತೆ ಹೆಚ್ಚಳ

-ಸಿಬ್ಬಂದಿ ಕರ್ತವ್ಯಲೋಪಕ್ಕೆ ಕಡಿವಾಣ

-ಆಡಳಿತ ಮತ್ತು ಹಾಜರಿ ಚುರುಕು

-ಕೆಲಸಕ್ಕೆ ಪೂರಕ ವೇತನ ಪಾವತಿ

-ಕರ್ತವ್ಯ ಪಾರದರ್ಶಕತೆಗೆ ಸಹಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ