ಹುಬ್ಬಳ್ಳಿ: ರಾಜ್ಯ ಸರಕಾರದ ಆದೇಶದನ್ವಯ ಸ್ವಚ್ಛತಾ ಗುತ್ತಿಗೆ ಪದ್ಧತಿ ರದ್ದುಪಡಿಸಿ, ಗುತ್ತಿಗೆ ಪೌರ ಕಾರ್ಮಿಕರಿಗೆ ನೇರ ವೇತನ ಪಾವತಿಸುವಂತೆ ಆಗ್ರಹಿಸಿ ಪೌರ ಕಾರ್ಮಿಕರು ಸೋಮವಾರ ಪಾಲಿಕೆ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಪಾಲಿಕೆ ಆಯುಕ್ತರು ವಿನಾಕಾರಣ ಕಾಲಹರಣ ಮಾಡದೇ ಗುತ್ತಿಗೆ ಪದ್ಧತಿ ರದ್ದುಪಡಿಸಿ ಗುತ್ತಿಗೆ ಪೌರ ಕಾರ್ಮಿಕರಿಗೆ ಪಾಲಿಕೆಯಿಂದ ನೇರ ವೇತನ ಪಾವತಿಸಬೇಕು. ಇಲ್ಲದೇ ಹೋದಲ್ಲಿ ಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಪೌರ ಕಾರ್ಮಿಕರಿಗೆ ಬೆಳಗಿನ ಉಪಾಹಾರ ಪೂರೈಸಬೇಕು. ಗುತ್ತಿಗೆ ಪೌರ ಕಾರ್ಮಿಕರಿಗೆ ಬರಬೇಕಾಗಿರುವ ಕನಿಷ್ಠ ವೇತನ ವ್ಯತ್ಯಾಸ ಬಾಕಿ ಮೊತ್ತ 9 ಕೋಟಿ ರೂ, ಪಿಎಫ್ ಇಲಾಖೆಯ ಆದೇಶಿತ ಬಾಕಿ ಮೊತ್ತ 3 ಕೋಟಿ ರೂ, ಹೆರಿಗೆ ಭತ್ಯೆಯ ಬಾಕಿ 21.70 ಲಕ್ಷ ರೂ, ವಿವಿಧ ಕಾರ್ಮಿಕ ಕಾಯ್ದೆಗಳ ವ್ಯತ್ಯಾಸದ ಬಾಕಿ 250 ಕೋಟಿ ರೂ. ಸೇರಿದಂತೆ ತಿಂಗಳಿನ ತುಟ್ಟಿ ಭತ್ಯೆ ವ್ಯತ್ಯಾಸದ ಬಾಕಿ ಮೊತ್ತವನ್ನು ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿದರು.
ವಿಜಯ ಗುಂಟ್ರಾಳ, ಸೋಮು ಮೊರಬದ, ನಾಗಮ್ಮ ಗೊಲ್ಲರ, ಶರಣಪ್ಪ ಅಮರಾವತಿ, ಕನಕಪ್ಪ ಕೊಟಬಾಗಿ, ಕಸ್ತೂರೆವ್ವ ಬೆಳಗುಂದಿ, ಗಂಗಮ್ಮ ಸಿದ್ರಾಮಪುರ, ಗಾಳೆಪ್ಪ ದ್ವಾಸಲಕೇರಿ, ಆನಂದ ಬಾವೂರ, ಬಸವರಾಜ ನಾಗನೂರ, ಕಮಲವ್ವ ತಿಪ್ಪಲದಿನ್ನಿ, ನೀಲವ್ವ ಬಳ್ಳುಟಗಿ, ಮಹಾದೇವಿ ಮಾದರ ಇತರರು ಇದ್ದರು.