ಆ್ಯಪ್ನಗರ

ಗಿಡದ ಬಡ್ಡಿ ಬಿಟ್ಟು ಕಾಂಕ್ರೀಟ್‌, ಪೇವರ್ಸ್‌ ಹಾಕಿ

ಹುಬ್ಬಳ್ಳಿ : ಅವಳಿ ನಗರದ ರಸ್ತೆ ಬದಿಯಲ್ಲಿ ಪೇವರ್ಸ್‌, ಕಾಂಕ್ರೀಟ್‌ ಹಾಕುವಾಗ ಅಲ್ಲಿದ್ದ ಗಿಡ-ಮರಗಳ ಸುತ್ತಲೂ ಕನಿಷ್ಠ 2 ಅಡಿ ಜಾಗ ಬಿಡಲು ಗುತ್ತಿಗೆದಾರರು, ಎಂಜಿನಿಯರ್‌ಗಳಿಗೆ ಸೂಚಿಸುವಂತೆ ಆಗ್ರಹಿಸಿ ಮದ್ಯ ವಿರೋಧಿ ಆಂದೋಲನದ ಸಂಚಾಲಕಿ ಡಾ.ವೀಣಾ ಟೋಣಪಿ ನೇತೃತ್ವದ ನಾಗರಿಕರ ನಿಯೋಗ ಪಾಲಿಕೆ ಆಯುಕ್ತ ಪ್ರಶಾಂತ ಮಿಶ್ರಾ ಅವರಿಗೆ ಮನವಿ ಸಲ್ಲಿಸಿದೆ.

Vijaya Karnataka 18 Jun 2019, 5:00 am
ಹುಬ್ಬಳ್ಳಿ : ಅವಳಿ ನಗರದ ರಸ್ತೆ ಬದಿಯಲ್ಲಿ ಪೇವರ್ಸ್‌, ಕಾಂಕ್ರೀಟ್‌ ಹಾಕುವಾಗ ಅಲ್ಲಿದ್ದ ಗಿಡ-ಮರಗಳ ಸುತ್ತಲೂ ಕನಿಷ್ಠ 2 ಅಡಿ ಜಾಗ ಬಿಡಲು ಗುತ್ತಿಗೆದಾರರು, ಎಂಜಿನಿಯರ್‌ಗಳಿಗೆ ಸೂಚಿಸುವಂತೆ ಆಗ್ರಹಿಸಿ ಮದ್ಯ ವಿರೋಧಿ ಆಂದೋಲನದ ಸಂಚಾಲಕಿ ಡಾ.ವೀಣಾ ಟೋಣಪಿ ನೇತೃತ್ವದ ನಾಗರಿಕರ ನಿಯೋಗ ಪಾಲಿಕೆ ಆಯುಕ್ತ ಪ್ರಶಾಂತ ಮಿಶ್ರಾ ಅವರಿಗೆ ಮನವಿ ಸಲ್ಲಿಸಿದೆ.
Vijaya Karnataka Web put concrete and pavers away from plant interest
ಗಿಡದ ಬಡ್ಡಿ ಬಿಟ್ಟು ಕಾಂಕ್ರೀಟ್‌, ಪೇವರ್ಸ್‌ ಹಾಕಿ


ಅವಳಿ ನಗರದ ಮುಖ್ಯ ರಸ್ತೆ ಮತ್ತು ಬಡಾವಣೆಗಳಲ್ಲಿ ರಸ್ತೆ ಬದಿಗಳಲ್ಲಿ ಪೇವರ್ಸ್‌ ಇಲ್ಲವೇ ಕಾಂಕ್ರೀಟ್‌ ಹಾಕಲಾಗುತ್ತಿದೆ. ಆದರೆ, ಅಲ್ಲಿರುವ ಮರ ಗಿಡಗಳ ಸುತ್ತಲೂ ಒಂದಷ್ಟೂ ಜಾಗ ಬಿಡದೇ ಪೂರ್ತಿಯಾಗಿ ಸಿಮೆಂಟ್‌, ಪೇವರ್ಸ್‌ ಅಳವಡಿಸಲಾಗುತ್ತಿದೆ. ಹೀಗೆ ಮಾಡುವುದರಿಂದ ಗಿಡಗಳಿಗೆ ನೀರು ಸಿಗದೇ ಕೆಲವೇ ದಿನಗಳಲ್ಲಿ ಬೇರುಗಳ ಸಮೇತ ಒಣಗಿ ಅವು ಸಾಯುವುದು ಖಚಿತ. ದೇಶದಲ್ಲೆಡೆ ಗಿಡ ಮರಗಳನ್ನು ಉಳಿಸಿ ಆಂದೋಲನ ನಡೆಯುತ್ತಿರುವಾಗ ಅವುಗಳನ್ನು ಉಳಿಸಿಕೊಳ್ಳುವುದು ಪಾಲಿಕೆ ಕೆಲಸ. ಇಲ್ಲದಿದ್ದರೆ ಬಿಸಿಲಿನ ತಾಪದಿಂದ ಕುದಿಯುತ್ತಿರುವ ಅವಳಿ ನಗರ ಪೂರ್ಣ ಬೆಂಗಾಡು ಆಗುವುದು ದೂರ ಇಲ್ಲ. ಆದ್ದರಿಂದ ಮರಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

ಶಾರದಾ, ಗೀತಾ ಸಾಲಿಮಠ, ರಾಷ್ಟ್ರೋತ್ಥಾನ ಸೊಸೈಟಿಕಲ್‌ ಸಂಸ್ಥೆ ಸಂತೋಷ ನರಗುಂದ, ಗೋ ಗ್ರೀನ್‌ ಸಂಸ್ಥೆಯ ಯೋಗೀಶ್‌ ಮಹಾಜನ್‌, ದೀಪಾ ಜೋಶಿ, ಪಾರ್ವತಿ ಕೋರಿಶೆಟ್ಟರ್‌ ಸೇರಿದಂತೆ ಹಲವು ನಾಗರಿಕರು ಉಪಸ್ಥಿತರಿದ್ದರು.

ಕ್ರಮದ ಭರವಸೆ
ಮನವಿ ಸ್ವೀಕರಿಸಿದ ಆಯುಕ್ತ ಪ್ರಶಾಂತ ಮಿಶ್ರಾ ಅವರು, ಗಿಡ-ಮರಗಳ ಸುತ್ತಲೂ ಪೇವರ್ಸ್‌ ಮತ್ತು ಕಾಂಕ್ರೀಟ್‌ ಹಾಕಿರುವುದನ್ನು ಎರಡು ದಿನಗಳಲ್ಲಿ ಸಮೀಕ್ಷೆ ನಡೆಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂತೋಷ ನರಗುಂದ ತಿಳಿಸಿದ್ದಾರೆ.

ಕನಿಷ್ಠ ಸಾಮಾನ್ಯ ಜ್ಞಾನ ಬೇಡವೇ ?
ಪಾಲಿಕೆಯು ಅಭಿವೃದ್ಧಿ ನೆಪದಲ್ಲಿ ಅವಳಿ ನಗರದಲ್ಲಿ ಬೆಳೆದು ನಿಂತ ಮರಗಳ ಸುತ್ತಲೂ ಕಾಂಕ್ರಿಟ್‌ ಹಾಕುವ ಮೂಲಕ ನಿಧಾನಗತಿಯಲ್ಲಿ ವಿಷ ಉಣಿಸುತ್ತಿದೆ. ಇದರ ಪರಿಣಾಮ, ನೆರಳು, ಆಮ್ಲಜನಕ ಒದಗಿಸುತ್ತಿರುವ ಮರಗಳು ಗೊತ್ತಿಲ್ಲದಂತೆ ಅಕಾಲಿಕ ಸಾವಿನ ಹಾದಿ ಹಿಡಿಯುತ್ತಿವೆ ಎಂಬುದನ್ನು ವಿಜಯ ಕರ್ನಾಟಕ ಪತ್ರಿಕೆ ಕಳೆದ ವರ್ಷ ಜುಲೈ ತಿಂಗಳಲ್ಲೇ ವಿಶೇಷ ವರದಿ ಪ್ರಕಟಿಸಿತ್ತು. ಇದುವರೆಗಿನ ಆಯುಕ್ತರು, ಅಧಿಕಾರಿಗಳು, ಎಂಜಿನಿಯರ್‌ಗಳು, ಗುತ್ತಿಗೆದಾರರು ಗಮನ ಹರಿಸಿಲ್ಲ ಎಂಬುದು ವೇದ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ