ಆ್ಯಪ್ನಗರ

ಲೈಸೆನ್ಸ್‌, ದಾಖಲು ರಹಿತ ಸವಾರರ ವಿರುದ್ಧ ದಿಢೀರ್‌ ಕಾರ್ಯಾಚರಣೆ

ಧಾರವಾಡ : ಹೆಲ್ಮೆಟ್‌, ಲೈಸೆನ್ಸ್‌, ದಾಖಲಾತಿ ರಹಿತ ಬೈಕ್‌ ಹಾಗೂ ಆಟೊ ಸವಾರರ ವಿರುದ್ಧ ದಿಢೀರ್‌ ಕಾರ್ಯಾಚರಣೆ ಆರಂಭಿಸಿರುವ ಹು-ಧಾ ಮಹಾನಗರ ಪೊಲೀಸ್‌ ಇಲಾಖೆ ಬುಧವಾರದಿಂದಲೇ ಮತ್ತೊಮ್ಮೆ ನೋ ಹೆಲ್ಮೆಟ್‌ ನೋ ಪೆಟ್ರೋಲ್‌ ನಿಯಮ ಜಾರಿಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

Vijaya Karnataka 17 Jan 2019, 5:00 am
ಧಾರವಾಡ : ಹೆಲ್ಮೆಟ್‌, ಲೈಸೆನ್ಸ್‌, ದಾಖಲಾತಿ ರಹಿತ ಬೈಕ್‌ ಹಾಗೂ ಆಟೊ ಸವಾರರ ವಿರುದ್ಧ ದಿಢೀರ್‌ ಕಾರ್ಯಾಚರಣೆ ಆರಂಭಿಸಿರುವ ಹು-ಧಾ ಮಹಾನಗರ ಪೊಲೀಸ್‌ ಇಲಾಖೆ ಬುಧವಾರದಿಂದಲೇ ಮತ್ತೊಮ್ಮೆ ನೋ ಹೆಲ್ಮೆಟ್‌ ನೋ ಪೆಟ್ರೋಲ್‌ ನಿಯಮ ಜಾರಿಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
Vijaya Karnataka Web DRW-16SM-1A
ಧಾರವಾಡದಲ್ಲಿ ವಿಶೇಷ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್‌ ಸಿಬ್ಬಂದಿ.


ಧಾರವಾಡದ ಸಂಗಮ ವೃತ್ತ, ಸಿಬಿಟಿ, ಸುಭಾಷ ರಸ್ತೆ, ಟೋಲ್‌ನಾಕಾ, ಎನ್‌ಟಿಟಿಎಫ್‌, ಶಿವಾಜಿ ವೃತ್ತ, ಓಲ್ಡ್‌ ಎಸ್ಪಿ ವೃತ್ತ ಸೇರಿದಂತೆ ಒಟ್ಟು 15 ಕಡೆ ಪೊಲೀಸರು ಕಾರ್ಯಾಚರಣೆ ನಡೆಸಿ ಬೈಕ್‌ ಸವಾರರ ಹೆಲ್ಮೆಟ್‌, ಲೈಸೆನ್ಸ್‌, ಆಟೊ ಮೀಟರ್‌ ಅಳವಡಿಕೆ ಸೇರಿದಂತೆ ಅಗತ್ಯ ದಾಖಲೆಗಳ ತಪಾಸಣೆ ನಡೆಸಿ 1761 ಪ್ರಕರಣಗಳನ್ನು ದಾಖಲಿಸಿಕೊಂಡು 2,47,350ರೂ. ದಂಡ ವಸೂಲಿ ಮಾಡಿದರು.

ಜನಜಾಗೃತಿ

ಅಪರಾಧ ಮತ್ತು ಸಂಚಾರವ ವಿಭಾಗದ ಡಿಸಿಪಿ ಬಿ.ಎಸ್‌. ನೇಮಗೌಡ ನೇತೃತ್ವದಲ್ಲಿ ಇಬ್ಬರು ಎಸಿಪಿ, 17 ಜನ ಇನ್ಸಪೆಕ್ಟರ್‌ಗಳು, 20 ಜನ ಪಿಎಸ್‌ಐಗಳು, ಎಎಸ್‌ಐ, ಪೇದೆ ಸೇರಿದಂತೆ 100ಕ್ಕೂ ಹೆಚ್ಚು ಸಿಬ್ಬಂದಿ ಬುಧವಾರ ದಿನವೀಡಿ ವಿಶೇಷ ಕಾರ್ಯಾಚರಣೆ ನಡೆಸಿ ಹೆಲ್ಮೆಟ್‌ ಕಡ್ಡಾಯ ಸೇರಿದಂತೆ ಸಂಚಾರ ನಿಯಮಗಳ ಪಾಲನೆ ಕುರಿತು ಜನಜಾಗೃತಿ ಮೂಡಿಸಿದರು.

ಸುಮಾರು 10-12ಜನ ಪೊಲೀಸರ ತಂಡ ಒಂದೊಂದು ಕಡೆ ನಿಂತು ಪ್ರತಿ ವಾಹನವನ್ನೂ ತಪಾಸಣೆಗೊಳಪಡಿಸಿತು. ಅಷ್ಟೇ ಅಲ್ಲದೇ ನಗರದ ಪೆಟ್ರೋಲ್‌ ಬಂಕ್‌ ಬಳಿ ನಿಂತ ಪೊಲೀಸ್‌ ಸಿಬ್ಬಂದಿ ಹೆಲ್ಮೆಟ್‌ ಧರಿಸದೆ ಇರುವವರಿಗೆ ಪೆಟ್ರೋಲ್‌ ಹಾಕದಂತೆ ನೋಡಿಕೊಳ್ಳುತ್ತಿದ್ದರು. ಎಸಿಪಿಗಳಾದ ಎಂ.ಎನ್‌. ರುದ್ರೇಶಪ್ಪ, ಎಂ.ವಿ. ನಾಗನೂರ, ಹುಬ್ಬಳ್ಳಿ ಟ್ರಾಫಿಕ್‌ ಠಾಣೆಯ ಇನ್ಸಪೆಕ್ಟರ್‌ ಶ್ರೀಪಾದ ಜಲ್ದೆ, ಹಾಗೂ ವಿವಿವಿಧೆ ಧಾರವಾಡ ಟ್ರಾಫಿಕ್‌ ಇನ್ಸಪೆಕ್ಟರ್‌ ಮುರುಗೇಶ ಚೆನ್ನಣ್ಣವರ ಸೇರಿದಂತೆ ಸಿವಿಲ್‌ ಪೊಲೀಸ್‌ ಅಧಿಕಾರಿಗಳೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಶೇಷ ಕಾರ್ಯಾಚರಣೆ ವೇಳೆ ಡ್ರಿಂಕ್‌ ಆ್ಯಂಡ್‌ ಡ್ರೈವ್‌, ಲೈಸೆನ್ಸ್‌ ರಹಿತ ವಾಹನ ಸವಾರಿ, ನಿಯಮ ಉಲ್ಲಂಘನೆ, ಮೀಟರ್‌ ಅಳವಡಿಸದ ಆಟೊ ಚಾಲಕರಿಂದಲೂ ದಂಡ ವಸೂಲಿ ಮಾಡಲಾಗಿದೆ. ಒಂದೇ ದಿನ ಹೆಲ್ಮೆಟ್‌ ರಹಿತ ಬೈಕ್‌ ಸವಾರರ ಮೇಲೆ 701 ಪ್ರಕರಣಗಳನ್ನು ದಾಖಲಿಸಲಾಗಿದೆ.

ಈ ಕುರಿತು ವಿಕ ಜತೆ ಮಾತನಾಡಿದ ಡಿಸಿಪಿ ಬಿ.ಎಸ್‌. ನೇಮಗೌಡ ' ಸಂಚಾರ ನಿಯಮ ಪಾಲನೆ ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ನೋ ಹೆಲ್ಮೆಟ್‌ ನೋ ಪೆಟ್ರೋಲ್‌ ಹಾಗೂ ವಾಹನಗಳ ದಾಖಲೆ ಪರಿಶೀಲನೆಗೆ ವಿಶೇಷ ಕಾರ್ಯಾಚರಣೆ ಮುಂದುವರಿಸಲಾಗುವುದು 'ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ