ಆ್ಯಪ್ನಗರ

ರಾಜಾ ನಾಲಾ : ನಿವಾಸಿ ಬದುಕು ಸಹಜ ಸ್ಥಿತಿಯತ್ತ

ಹುಬ್ಬಳ್ಳಿ : 3 ದಿನಗಳ ಬಳಿಕ ರಾಜ ನಾಲಾ ಪಕ್ಕದ ನಿವಾಸಿಗಳ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಮತ್ತೆ ಹೊಸ ಬದುಕು ಕಟ್ಟಿಕೊಳ್ಳಲು ನಿವಾಸಿಗಳು ಹೈರಾಣಾಗಾಗುತ್ತಿದ್ದಾರೆ. ಎರಡು ದಿನಗಳ ಬಳಿಕ ಉಣಕಲ್ಲ ಕೆರೆ ನೀರಿನ ಹರಿವು ಪ್ರಮಾಣ ಕೂಡ ತಗ್ಗಿದ್ದು, ಸಹಜ ಸ್ಥಿತಿಯಲ್ಲಿ ಮುಂದೆ ಸಾಗುತ್ತಿದೆ.

Vijaya Karnataka 10 Aug 2019, 5:00 am
ಹುಬ್ಬಳ್ಳಿ : 3 ದಿನಗಳ ಬಳಿಕ ರಾಜ ನಾಲಾ ಪಕ್ಕದ ನಿವಾಸಿಗಳ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಮತ್ತೆ ಹೊಸ ಬದುಕು ಕಟ್ಟಿಕೊಳ್ಳಲು ನಿವಾಸಿಗಳು ಹೈರಾಣಾಗಾಗುತ್ತಿದ್ದಾರೆ. ಎರಡು ದಿನಗಳ ಬಳಿಕ ಉಣಕಲ್ಲ ಕೆರೆ ನೀರಿನ ಹರಿವು ಪ್ರಮಾಣ ಕೂಡ ತಗ್ಗಿದ್ದು, ಸಹಜ ಸ್ಥಿತಿಯಲ್ಲಿ ಮುಂದೆ ಸಾಗುತ್ತಿದೆ.
Vijaya Karnataka Web DRW-9MANJU6A
ನೆರೆ ಸಂತ್ರಸ್ತರನ್ನು ಭೇಟಿ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಧೈರ್ಯ ತುಂಬಿದರು.


ಉಣಕಲ್ಲ ಕೆರೆ ಉಕ್ಕಿದ ಪರಿಣಾಮ ದೇವಿ ನಗರದ ನಿವಾಸಿಗಳೇ ಹೆಚ್ಚಿನ ಪ್ರಮಾಣದ ತೊಂದರೆಗೊಳಗಾಗಿದ್ದರು. ಬುಧವಾರ ರಾತ್ರಿಯಿಂದ ಬನಶಂಕರಿ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದ ನಿವಾಸಿಗಳು, ಶುಕ್ರವಾರ ಸ್ವ ನಿವಾಸಕ್ಕೆ ದೌಡಾಯಿಸಿ ಮನೆಯನ್ನು ಕ್ಲೀನ್‌ ಮಾಡುತ್ತಿದ್ದರು. ನಾಲಾದಿಂದ ಸುಮಾರು 100 ಅಡಿಯಷ್ಟು ದೂರ ನೀರು ಹರಿದು ಬಂದಿತ್ತು. ಈ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಇದರಿಂದ ಮನೆಯಲ್ಲಿನ ದವಸ ಧಾನ್ಯ, ಬಟ್ಟೆ,ಹಾಸಿಗೆ, ಮಕ್ಕಳ ಪುಸ್ತಕಗಳು ಹಾಗೂ ಇತರ ವಸ್ತುಗಳು ನೀರಿನಲ್ಲಿ ತೋಯ್ದು ತೊಪ್ಪೆಯಾಗಿದ್ದವು. ಮಳೆರಾಯ ಶುಕ್ರವಾರ ಬಿಡುವ ನೀಡಿದ್ದರಿಂದ ತೋಯ್ದ ವಸ್ತುಗಳನ್ನು ಮನೆ ಆವರಣದಲ್ಲಿ ಒಣಗಿಸಲು ಹಾಕುತ್ತಿದ್ದ ದೃಶ್ಯಗಳು ಕಂಡು ಬಂದವು. ಪುಸ್ತಕಗಳು ಸಂಪೂರ್ಣ ನಾಶವಾಗಿದ್ದು, ಕೊಂಡುಕೊಳ್ಳಲು ಶಕ್ತಿಯಿಲ್ಲ ಸಹಾಯ ಮಾಡುವಂತೆ ಅನುಷಾ ಎಂಬ ಬಾಲಕಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಎದುರು ಗೋಗರೆದು ಕೇಳುತ್ತಿದ್ದಳು.

ಶಿಕ್ಷಣಕ್ಕೆ ಸಂಬಂಧಿಸಿ ಮಕ್ಕಳ ಪುಸ್ತಕ, ನೋಟಬುಕ್‌ಗಳನ್ನು ಅದಮ್ಯ ಚೇತನ ಸಂಸ್ಥೆಯಿಂದ ಉಚಿತವಾಗಿ ಪೂರೈಸುವುದಾಗಿ ಸಚಿವರು ಭರವಸೆ ನೀಡಿದರು. ಮನೆಯಲ್ಲಿ ನೀರಿನ ಜತೆಗೆ ಮಣ್ಣು ಕೂಡ ಹರಿದು ಬಂದಿತ್ತು. ಕೊಳಚೆ ನೀರು ಸೇರಿದ್ದರಿಂದ ಮನೆ ದುರ್ವಾಸನೆಯಿಂದ ಕೂಡಿತ್ತು.''ಬುಧವಾರ ರಾತ್ರಿ ಏಕಾಏಕಿ ನೀರು ನುಗ್ಗಿದ್ದರಿಂದ ಏನು ಮಾಡಬೇಕೆಂದು ತೋಚಲಿಲ್ಲ. ನೋಡ ನೋಡುತ್ತಿದ್ದಂತೆ ಮನೆ ತುಂಬೆಲ್ಲ ನೀರು ತುಂಬಿ ಅಕ್ಕಿ, ಬೇಳೆ ಸೇರಿ ದವಸ ಧಾನ್ಯಗಳು, ಹಾಸಿಗೆ, ಬಟ್ಟೆಗಳು ಸಂಪೂರ್ಣ ನೀರಿನಲ್ಲಿ ಮುಳುಗಿದ್ದವು. ಇವುಗಳನ್ನೆಲ್ಲ ಹಾಗೆ ಬಿಟ್ಟು ಬನಶಂಕರಿ ದೇವಸ್ಥಾನಕ್ಕೆ ತೆರಳಿ ಆಶ್ರಯ ಪಡೆದಿದ್ದೇವು. ಇವತ್ತಷ್ಟೇ ಬಂದು ಮನೆ ಕ್ಲೀನ್‌ ಮಾಡುತ್ತಿದ್ದೇವೆ'' ಗೀತಾ ಎಂಬುವವರು ತಿಳಿಸಿದರು.

ಸಚಿವರಿಂದ ಪರಿಸ್ಥಿತಿ ಅವಲೋಕನ
ಕೇಂದ್ರ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ ಜೋಶಿ ಅವರು, ಶುಕ್ರವಾರ ನೆರೆ ಪೀಡಿತ ನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಬನಶಂಕರಿ ದೇವಸ್ಥಾನದಲ್ಲಿ ತೆರೆಯಲಾಗಿದ್ದ ಕಾಳಜಿ ಕೇಂದ್ರದಲ್ಲಿ ನೆರೆ ಪೀಡಿತರನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಆಶ್ರಯ ಮನೆ ಒದಗಿಸಿದರೆ ನೀವೆಲ್ಲ ಹೋಗಲು ತಯಾರಿದ್ದೀರಾ ಎಂದು ಸಚಿವರು ಕೇಳಿದ್ದಕ್ಕೆ, ನಿವಾಸಿಗಳು ಓಕೆ ಹೋಗ್ತೇವಿ ಎಂದರು. ಆರು ತಿಂಗಳಲ್ಲಿ ಈ ಬಗ್ಗೆ ರೂಪುರೇಷೆ ತಯಾರಿಸುವಂತೆ ಆಯುಕ್ತ ಸುರೇಶ ಇಟ್ನಾಳ್‌ ಅವರಿಗೆ ಸೂಚಿಸಿದರು. ನೂತನ ಕೋರ್ಟ್‌, ವಿದ್ಯಾನಗರ ಸೇರಿದಂತೆ ವಿವಿಧ ಪ್ರದೇಶಗಳಿಗೆ ಸಚಿವ ಪ್ರಹ್ಲಾದ್‌ ಜೋಶಿ ಭೇಟಿ ನೀಡಿ ಪರಿಶೀಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ