ಆ್ಯಪ್ನಗರ

ಜನರಿಕ್‌ ಔಷಧಕ್ಕೆ ದರ ನಿಗದಿಯೇ ಕಿರಿಕ್‌!

ಧಾರವಾಡ :ದರ ಏರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಜನೌಷಧ ಕೇಂದ್ರ ಹಾಗೂ ಜನರಿಕ್‌ ಮಳಿಗೆಗಳು ರಾಜ್ಯಾದ್ಯಂತ ಸ್ಥಾಪನೆಗೊಂಡಿವೆ. ಆದರೆ, ಇಲ್ಲಿನ ಔಷಧಕ್ಕೆ ದರ ನಿಗದಿಗೊಳಿಸುವರೇ ಇಲ್ಲದ್ದರಿಂದ ಒಂದೇ ಬಗೆಯ ಔಷಧಿಯು ಜನೌಷಧ ಕೇಂದ್ರಗÜಳಲ್ಲೇ ಭಾರಿ ವ್ಯತ್ಯಾಸದೊಂದಿಗೆ ಬೇರೆ ಬೇರೆ ದರದಲ್ಲಿ ಸಿಗುತ್ತಿದೆ.

Vijaya Karnataka 3 Jul 2018, 5:51 pm
ಧಾರವಾಡ :ದರ ಏರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಜನೌಷಧ ಕೇಂದ್ರ ಹಾಗೂ ಜನರಿಕ್‌ ಮಳಿಗೆಗಳು ರಾಜ್ಯಾದ್ಯಂತ ಸ್ಥಾಪನೆಗೊಂಡಿವೆ. ಆದರೆ, ಇಲ್ಲಿನ ಔಷಧಕ್ಕೆ ದರ ನಿಗದಿಗೊಳಿಸುವರೇ ಇಲ್ಲದ್ದರಿಂದ ಒಂದೇ ಬಗೆಯ ಔಷಧಿಯು ಜನೌಷಧ ಕೇಂದ್ರಗÜಳಲ್ಲೇ ಭಾರಿ ವ್ಯತ್ಯಾಸದೊಂದಿಗೆ ಬೇರೆ ಬೇರೆ ದರದಲ್ಲಿ ಸಿಗುತ್ತಿದೆ.
Vijaya Karnataka Web rate the price for generic drugs
ಜನರಿಕ್‌ ಔಷಧಕ್ಕೆ ದರ ನಿಗದಿಯೇ ಕಿರಿಕ್‌!


ಜನರಿಕ್‌ ಮಳಿಗೆಯಲ್ಲಿ ಸಾಮಾನ್ಯ ಔಷಧ ಅಂಗಡಿಗಳಿಗಿಂತ ಶೇ. 30ರಿಂದ 70ರಷ್ಟು ಕಡಿಮೆ ದರದಲ್ಲಿ ಔಷಧ ಸಿಗಲಿದೆ. ಇದು ಪ್ರಧಾನಮಂತ್ರಿಗಳ ಮಹತ್ವದ ಯೋಜನೆ ಎಂತೆಲ್ಲ ಪ್ರಚಾರ ನೀಡಲಾಗಿದೆ. ಅಲ್ಲದೇ ಎಲ್ಲ ಫಾರ್ಮಸಿಗಳಲ್ಲಿ ಜನರಿಕ್‌ ಔಷಧ ಮಾರಾಟಕ್ಕಿಡಲು ಕೇಂದ್ರ ಔಷಧ ನಿಯಂತ್ರಣಾಲಯ ಸೂಚಿಸಿದೆ. ಆದರೆ, ಮಧುಮೇಹಕ್ಕೆ ಸಂಬಂಧಿಸಿದ ಔಷಧವನ್ನು ಜನೌಷಧಿ ಕೇಂದ್ರಗಳಲ್ಲಿ ಖಾಸಗಿ ಔಷಧ ಅಂಗಡಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ರೋಗಿಗಳನ್ನು ತಬ್ಬಿಬ್ಬುಗೊಳಿಸಿದೆ.

ಧಾರವಾಡ ಜನ್ನತ್‌ನಗರ ನಿವಾಸಿ ರಫೀಕ್‌ ಕಿರಶಾಳ ಎಂಬುವವರು ನಗರದ ಕಾಮನಕಟ್ಟಿಯಲ್ಲಿರುವ ಭಾರತೀಯ ಜನೌಷಧ ಕೇಂದ್ರದಲ್ಲಿ ಹೂಮನ್‌ ಇನ್ಸಾರ್ಡ್‌ 30/70 ಎಂಬ ಮಧುಮೇಹ ಔಷಧವನ್ನು ಖರೀದಿಸಿದರು. ಅಲ್ಲಿ ಪ್ರತಿ ಇನ್ಸೂಲಿನ್‌ ದರವನ್ನು 125 ರೂ. ನಿಗದಿಗೊಳಿಸಲಾಗಿದೆ. ಆದರೆ, ಅದೇ ಔಷಧವನ್ನು ಹುಬ್ಬಳ್ಳಿ ಕಿಮ್ಸ್‌ನಲ್ಲಿರುವ ಜನರಿಕ್‌ ಔಷಧ ಕೇಂದ್ರದಲ್ಲಿ ಪಡೆದಾಗ ಅಲ್ಲಿ 75 ರೂ. ಗಳಿಗೆ ಸಿಕ್ಕಿದೆ. ರಿಯಾಯಿತಿ ದರದ ಖಾಸಗಿ ಔಷಧ ಅಂಗಡಿಗಳಲ್ಲಿ 115ರಿಂದ 120 ರೂ. ಗೆ ಮಾರಾಟವಾಗುತ್ತಿದೆ. ಹೀಗಾಗಿ ಪ್ರಧಾನಮಂತ್ರಿಗಳ ಮಹತ್ವಾಕಾಂಕ್ಷೆಯ ಜನೌಷಧಿ ಕೇಂದ್ರವೂ ಈಗ ಜನರಿಗೆ ದರ ಏರಿಕೆ ಭಾರ ಹೊರೆಸುತ್ತಿದ್ದು, ಕಡಿಮೆ ಬೆಲೆಗೆ ಔಷಧ ಸಿಗಲಿದೆ ಎಂಬ ಜನರ ಕನಸನ್ನು ನುಚ್ಚುನೂರಾಗಿದೆ.

ಪ್ರಧಾನಮಂತ್ರಿ ಜನೌಷಧ ಕೇಂದ್ರದಲ್ಲಿ ಶೇ. 70ರಷ್ಟು ಕಡಿಮೆ ದರದಲ್ಲಿ ಔಷಧ ಸಿಗಲಿದೆ ಎಂಬುದನ್ನು ಸ್ವತಃ ಜನನಾಯಕರೇ ಪ್ರಚುರಪಡಿಸಿದ್ದಾರೆ. ಹೀಗಾಗಿ ಜನರಿಕ್‌ ಔಷಧ ಮಳಿಗೆಗಳಲ್ಲಿ ಜನರ ಸರದಿ ಸಾಲು ಕಾಣುತ್ತಿದೆ. ಆದರೆ, ಬಹುತೇಕ ಔಷಧಗಳು ಸಿಗುತ್ತಿಲ್ಲ. ಈ ಬಗ್ಗೆ ರಿಯಾಲಿಟಿ ಚೆಕ್‌ ನಡೆಸಿದ್ದ 'ವಿಜಯ ಕರ್ನಾಟಕ'ಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ಅನಂತಕುಮಾರ, ಖರೀದಿಸುವವರ ಸಂಖ್ಯೆ ಹೆಚ್ಚಾಗಿ ಸಮಸ್ಯೆ ಆಗಿದೆ ಅಂದಿದ್ದರು. ಅಲ್ಲದೇ ಒಮ್ಮೆಲೆ ಬೇಡಿಕೆ ಸೃಷ್ಟಿ ಹಿಂದೆ ಡ್ರಗ್‌ ಮಾಫಿಯಾ ಕೈವಾಡ ಇರುವುದಾಗಿ ಸಂಶಯ ವ್ಯಕ್ತಪಡಿಸಿದ್ದರು.

ಎನ್‌ಪಿಪಿಎಯತ್ತ ಬೊಟ್ಟು:

ಜನೌಷಧ ಕೇಂದ್ರಗಳಲ್ಲಿ ಈ ಹಿಂದಿನ ಜನರಿಕ್‌ ಮಳಿಗೆ ಹಾಗೂ ಖಾಸಗಿ ಔಷಧ ಅಂಗಡಿಗಳಿಗಿಂತ ಹೆಚ್ಚಿನ ದರ ನಿಗದಿ ಆಗಿರುವ ವಿಚಾರವನ್ನು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಎಪಿಪಿಎ (ಕೇಂದ್ರ ಔಷಧ ನಿಯಂತ್ರಣಾಲಯ)ಯತ್ತ ತಳ್ಳಿ ಹಾಕಿದ್ದಾರೆ. ಎನ್‌ಪಿಪಿಎ ಯಾವ ಔಷಧಕ್ಕೆ ಎಷ್ಟು ದರ ಎಂದು ನಿಗದಿ ಮಾಡುತ್ತದೆ. ಜನೌಷಧ ಕೇಂದ್ರ ಸೇರಿದಂತೆ ಯಾವುದೇ ಔಷಧ ಮಳಿಗೆ ಇರಲಿ ಅವರು ಎಂಆರ್‌ಪಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವಂತಿಲ್ಲ. ಜನೌಷಧ ಕೇಂದ್ರಗಳೂ ಸಾಮಾನ್ಯ ಔಷಧ ಅಂಗಡಿ ಇದ್ದಂತೆ. ಹೀಗಾಗಿ ಕಡಿಮೆ ದರಕ್ಕೆ ಮಾರಾಟ ಮಾಡುವುದು ಅವರ ವಿವೇಚನೆಗೆ ಬಿಟ್ಟಿದ್ದು. ಇಲ್ಲಿ ನಾವೂ ಅಸಹಾಯಕರು ಎಂದು ಜಿಲ್ಲಾ ಔಷಧ ನಿಂಯಂತ್ರಣಾಧಿಕಾರಿ ಸುನೀಲ ಪಾಟೀಲ 'ವಿಕ'ಕ್ಕೆ ಪ್ರತಿಕ್ರಿಯಿಸಿದರು.

ಇದರಿಂದ ಬೇಸರಗೊಂಡಿರುವ ರಫಿಕ್‌ ಜನರಿಕ್‌ ಔಷಧ ಅಂಗಡಿಗಿಂತ ಜನೌಷಧ ಕೇಂದ್ರದಲ್ಲಿ ಹೆಚ್ಚಿನ ಹಣಕ್ಕೆ ಔಷಧ ಮಾರಾಟ ಮಾಡಿರುವ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆಗೆ ದೂರು ನೀಡಿದ್ದಾರೆ. ದೂರು ಆಧರಿಸಿ ದರ ನಿಗದಿ ಕುರಿತಂತೆ ಔಷಧ ನಿಯಂತ್ರಣ ಇಲಾಖೆಗೆ ಡಿಎಚ್‌ಒ ಸ್ಪಷ್ಟೀಕರಣ ಕೇಳಿರುವುದು ಕುತೂಹಲ ಮೂಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ