ಆ್ಯಪ್ನಗರ

ನಂದೇನಿದ್ರೂ ರೋಡ್‌ ಮಾಡ್ಸೋದು, ಬಜೆಟ್‌ಗೆ ತಲೆ ಹಾಕಲ್ಲ: ರೇವಣ್ಣ

ಸಮ್ಮಿಶ್ರ ಸರಕಾರದಲ್ಲಿ ಪೂರ್ಣ ಬಜೆಟ್‌ ಆಗಬೇಕೋ ಇಲ್ಲವೆ ಪೂರಕ ಬಜೆಟ್‌ ಮಂಡಿಸಬೇಕೋ ಎಂಬುದನ್ನು ಮುಖ್ಯಮಂತ್ರಿ ತೀರ್ಮಾನಿಸುತ್ತಾರೆ. ಅದರಲ್ಲಿ ತಲೆ ಹಾಕುವುದಿಲ್ಲ. ನನ್ನದೇನಿದ್ದರೂ ರಸ್ತೆ ಗುಂಡಿ ಮುಚ್ಚುವುದು, ರಸ್ತೆ ಮಾಡೋದಷ್ಟೇ ಕೆಲಸ ಎಂದು ಲೋಕೋಪಯೋಗಿ ಖಾತೆ ಸಚಿವ ಎಚ್‌.ಡಿ. ರೇವಣ್ಣ ಹೇಳಿದರು.

Vijaya Karnataka Web 18 Jun 2018, 9:12 am
ಹುಬ್ಬಳ್ಳಿ : ಸಮ್ಮಿಶ್ರ ಸರಕಾರದಲ್ಲಿ ಪೂರ್ಣ ಬಜೆಟ್‌ ಆಗಬೇಕೋ ಇಲ್ಲವೆ ಪೂರಕ ಬಜೆಟ್‌ ಮಂಡಿಸಬೇಕೋ ಎಂಬುದನ್ನು ಮುಖ್ಯಮಂತ್ರಿ ತೀರ್ಮಾನಿಸುತ್ತಾರೆ. ಅದರಲ್ಲಿ ತಲೆ ಹಾಕುವುದಿಲ್ಲ. ನನ್ನದೇನಿದ್ದರೂ ರಸ್ತೆ ಗುಂಡಿ ಮುಚ್ಚುವುದು, ರಸ್ತೆ ಮಾಡೋದಷ್ಟೇ ಕೆಲಸ ಎಂದು ಲೋಕೋಪಯೋಗಿ ಖಾತೆ ಸಚಿವ ಎಚ್‌.ಡಿ. ರೇವಣ್ಣ ಹೇಳಿದರು.
Vijaya Karnataka Web revanna jpge


ನಗರದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಪೂರ್ಣ ಬಜೆಟ್‌ ಮಂಡಿಸುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ಷೇಪಿಸಿರುವುದಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದರು. ''ನನ್ನ ಇಲಾಖೆ ಬಗ್ಗೆ ಮಾತ್ರ ಮಾತಾಡುತ್ತೇನೆ. ಯಾವ ಬಜೆಟ್‌ ಬೇಕೆನ್ನುವುದನ್ನು ಸಿಎಂ ನಿರ್ಧರಿಸುತ್ತಾರೆ. ಪೂರ್ಣ ಬಜೆಟ್‌ ಅಥವಾ ಪೂರಕ ಬಜೆಟ್‌ ಬಗ್ಗೆ ಸಲಹೆ ಕೇಳಿದ್ರೆ ಹೇಳುತ್ತೇನೆ'' ಎಂದರು.

''ಪಿಡಬ್ಲ್ಯುಡಿ ಇಲಾಖೆಯಲ್ಲಿನ ನಿಯೋಜಿತ ಅಧಿಕಾರಿಗಳನ್ನು ಮಾತೃ ಇಲಾಖೆಗೆ ಕಳಿಸಿದ್ದೇವೆ. ನಮ್ಮ ಇಲಾಖೆಯ ಅಧಿಕಾರಿಗಳನ್ನು ಮರಳಿ ಪಡೆದಿದ್ದೇವೆ. ನೀರಾವರಿ ಇಲಾಖೆಯ ಅಧಿಕಾರಿಗಳ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಮಾಡಿದ್ದರೆ ಕಾಂಗ್ರೆಸ್‌ ಅಧ್ಯಕ್ಷರಾದಿಯಾಗಿ ಯಾವುದೇ ಮುಖಂಡರು ನೇರವಾಗಿ ಕೇಳಿದರೂ ಉತ್ತರಿಸುತ್ತೇನೆ. ಪಿಡಬ್ಲ್ಯುಡಿ ಇಲಾಖೆಗೆ ಸಂಬಂಧಿಸಿದ ಕೆಲಸ ಬಿಟ್ಟು ಬೇರೇನೂ ಮಾಡಿಲ್ಲ. ಡಿ.ಕೆ. ಶಿವಕುಮಾರ ಮತ್ತು ನಾನು ಚೆನ್ನಾಗಿದ್ದೀವಿ. ಸುಮ್ಮನೆ ನಮ್ಮ ನಡುವೆ ಜಗಳ ತಂದಿಡುವ ಕೆಲಸ ನಡೆಯುತ್ತಿದೆ'' ಎಂದು ಹೇಳಿದರು.

ಪುಕ್ಕಟೆ ಪ್ರಚಾರ

''ಮಾಧ್ಯಮಗಳು ಸೂಪರ್‌ ಸಿಎಂ ಎಂದು ಕರೆದು ನನಗೆ ಪುಕ್ಕಟೆ ಪ್ರಚಾರ ನೀಡುತ್ತಿವೆ. ಹಾಗಾಗಿ ಜಾಹೀರಾತು ಕೊಡುವ ಪ್ರಮೆಯವೇ ಬರಲ್ಲ'' ಎಂದು ನಸುನಕ್ಕರು.

''ರಂಗಪ್ಪ ಅವರನ್ನು ಉನ್ನತ ಶಿಕ್ಷಣ ಇಲಾಖೆ ಸಲಹೆಗಾರರಾಗಿ ನೇಮಕ ಮತ್ತು ಸಿಂಧೂರಿ ಅವರನ್ನು ಹಾಸನ ಜಿಲ್ಲಾಧಿಕಾರಿ ಮಾಡುವ ವಿಚಾರ ಸಿಎಂಗೆ ಬಿಟ್ಟದ್ದು'' ಎಂದು ರೇವಣ್ಣ ತಿಳಿಸಿದರು.

ಹೊರಟ್ಟಿ ಮಂತ್ರಿ ಆಗ್ತಾರೆ

ಬಸವರಾಜ ಹೊರಟ್ಟಿ ಪಕ್ಷದ ನಾಯಕರು. ಯಾವ ಖಾತೆ ಕೊಟ್ಟರೂ ನಿರ್ವಹಿಸುವ ಸಾಮರ್ಥ್ಯ‌ ಅವರಿಗಿದೆ. ಮಂತ್ರಿ ಸ್ಥಾನ ನೀಡುವ ಕುರಿತು ದೇವೇಗೌಡರು ಮತ್ತು ಸಿಎಂ ಜತೆ ಚರ್ಚಿಸುತ್ತೇನೆ. ಅವರು ಮಂತ್ರಿ ಆಗೇ ಆಗ್ತಾರೆ ಬಿಡಿ ಎಂದು ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.

5 ವರ್ಷ ಅಧಿಕಾರ


ಒಂದು ವರ್ಷ ಸಿಎಂ ಮತ್ತು ಒಂದು ವರ್ಷದ ಬಳಿಕ ಮುಂದೇನು ಗೊತ್ತಿಲ್ಲ ಎಂಬ ಎಚ್‌.ಡಿ. ಕುಮಾರಸ್ವಾಮಿ ಹಾಗೂ ದೇವೇಗೌಡರ ಹೇಳಿಕೆಯನ್ನು ಮಾಧ್ಯಮದವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ವಾಸ್ತವವಾಗಿ ಒಂದು ವರ್ಷದವರೆಗೂ ಏನೂ ಆಗೊಲ್ಲ ಎಂದಿದ್ದಾರಷ್ಟೇ. ಯಾರು ಏನೇ ಹೇಳಿದ್ರೂ ಐದು ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ. ಅನುಮಾನ ಬೇಡ ಎಂದು ಸಚಿವ ರೇವಣ್ಣ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ