ಹುಬ್ಬಳ್ಳಿ/ಧಾರವಾಡ : ಅವಳಿನಗರದೆಲ್ಲಿ ಮಕರ ಸಂಕ್ರಾಂತಿ ಹಬ್ಬ ಭಾನುವಾರವೋ-ಸೋಮವಾರವೋ ಎಂಬ ಗೊಂದಲ ಮಧ್ಯೆ ಕೆಲವರು ಭಾನುವಾರ ಸಂಭ್ರಮ-ಸಡಗರದಿಂದ ಆಚರಿಸಿದರು.
ಬಹುತೇಕ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಸಂಕ್ರಮಣದ ಅಂಗವಾಗಿ ನಾಗರಿಕರು ಸಿದ್ಧಾರೂಢ ಮಠ, ಶಿವ ಹಾಗೂ ಗಣೇಶ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಕೆಲವರು ಕುಟುಂಬ ಸಮೇತ ಪುಣ್ಯಕ್ಷೇತ್ರಕ್ಕೆ ತೆರಳಿ ಪುಣ್ಯಸ್ನಾನ ಮಾಡಿ ದೇವರಿಗೆ ಅಭಿಷೇಕ, ನೈವೇದ್ಯೆ ನೆರವೇರಿಸಿದರು. ಇನ್ನು ಕೆಲವರು ಮನೆಯಲ್ಲಿಯೇ ಸಂಕ್ರಮಣ ಆಚರಿಸಿದರು.
ಎಳ್ಳು, ಅರಿಷಣ ಸೇರಿಸಿ ಮೈಗೆ ಹಚ್ಚಿಕೊಂಡು ಸ್ನಾನಾದಿಗಳನ್ನು ಪೂರೈಸಿದರು. ಮನೆಯಲ್ಲಿ ವಿಶೇಷ ಪೂಜಾ ವಿಧಿ-ವಿಧಾನಗಳೊಂದಿಗೆ ಸಂಕ್ರಾಂತಿ ಹಬ್ಬದ ಶಾಸ್ತ್ರಗಳನ್ನು ಪೂರೈಸಿದರು. ಎಳ್ಳು-ಬೆಲ್ಲ, ಹಾಗೂ ಗಜ್ಜರಿ, ಹಸಿಕಡಲೆ, ಬದನೆಕಾಯಿ, ಅವರೆಕಾಯಿಗಳನ್ನೊಳಗೊಂಡು 'ಬರ್ತಾ' ಹಾಗೂ ಸಜ್ಜೆ ರೊಟ್ಟಿಯನ್ನು ನೈವೇದ್ಯ ನೆರವೇರಿಸಿದರು. ಬಳಿಕ ಕುಟುಂಬಸ್ಥರು, ನೆರೆಹೊರೆಯವರು, ಪರಿಚಯಸ್ಥರು ಸೇರಿಕೊಂಡು ಸಜ್ಜಿರೊಟ್ಟಿ, ಎಣ್ಣಿಗಾಯಿ ಬದನೆಕಾಯಿ, ಬರ್ತಾ, ಮಾಲ್ದಿ, ಒಸೇರಿದಂತೆ ಇತರೆ ಪದಾರ್ಥಗಳ ಬುತ್ತಿ ಕಟ್ಟಿಕೊಂಡು ಉಣಕಲ್ಲ ಕೆರೆ, ಗ್ಲಾಸ್ಹೌಸ್, ಗಾಯತ್ರಿ ತಪೋವನ, ರಾಕ್ ಗಾರ್ಡ್ನ, ನೃಪತುಂಗ ಬೆಟ್ಟಕ್ಕೆ ತೆರಳಿ ಸಂಕ್ರಮಣದ ಬೋಗಿ ಹಬ್ಬದ ಊಟ ಸವಿದರು.
ಪಾರ್ಕ್ದಲ್ಲೇ ಸಂಜೆವರೆಗೆ ಮಕ್ಕಳು, ಕುಟುಂಬಸ್ಥರು, ಗೆಳೆಯರೊಂದಿಗೆ ನಕ್ಕು ನಲಿದು ಸಂತಸದ ಕ್ಷಣಗಳನ್ನು ಕಳೆದರು. ಗ್ಲಾಸ್ಹೌಸ್ದಲ್ಲಿ ಮಕ್ಕಳು, ಯುವಕ-ಯುವತಿಯರು ವಿರೂಪಗೊಂಡ ಆನೆ, ಝೀರಾಪೆ, ಮಂಗಗಳು, ಹಳ್ಳಿ ಸೊಗಡು ನೆನಪಿಸುವ ರಾಶಿ ಮಾಡುವ ರೈತರು, ಹಳ್ಳಿಕಟ್ಟೆ ಮೇಲೆ ಕುಳಿತ ರೈತರ ಪ್ರತಿಕೃತಿಗಳ ಮುಂದೆ ಸೆಲ್ಫಿ ತೆಗೆದುಕೊಂಡು ಖುಷಿ ಪಟ್ಟರು. ಇನ್ನೊಂದೆಡೆ ಉಣಕಲ್ಲ ಗಾರ್ಡನ್, ನೃಪತುಂಗ ಬೆಟ್ಟದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಮಕ್ಕಳು ಆಟೋಟಗಳಲ್ಲಿ ತಲ್ಲೀನರಾಗಿದ್ದರು.
ಧಾರವಾಡದಲ್ಲೂ ಜನ ಸ್ನೇಹಿತರು ಹಾಗೂ ಕುಟುಂಬ ವರ್ಗದವರೊಡನೆ ಸೇರಿಕೊಂಡು ಬೇಂದ್ರೆ ಉದ್ಯಾನ, ರಾಣಿ ಚೆನ್ನಮ್ಮ ಪಾರ್ಕ್, ಎಸ್ಡಿಎಂ ಬಳಿಯ ಸಂಜೀವೀನಿ ಪಾರ್ಕ್ಗೆ ತರಳಿದರೆ ಇನ್ನು ಹಲವರು ತಮ್ಮ ತಮ್ಮ ಹೊಲ, ತೋಟಕ್ಕೆ ಹೋಗಿ ಭೋಗಿ ಊಟ ಸವಿದರು.
ಎಳ್ಳು-ಬೆಲ್ಲ ವಿನಿಮಯ ಇಂದು
ಸಂಕ್ರಮಣದ ಹಿನ್ನೆಲೆಯಲ್ಲಿ ಸೋಮವಾರವೂ ದೇವಸ್ಥಾನ, ಮನೆಗಳಲ್ಲಿ ವಿಶೇಷ ಪೂಜಾ ವಿಧಾನಗಳು ನೆರವೇರಲಿದ್ದು, ಎಳ್ಳು-ಬೆಲ್ಲ ವಿನಿಮಯ ಕೂಡ ನಡೆಯಲಿದೆ.