ಉಪ್ಪಿನ ಬೆಟಗೇರಿ: ಪಂಚಾಯತ್ ರಾಜ್ಯ ಇಲಾಖೆಗೆ ಸಂಬಂಧಿಸಿದ ಅನೇಕ ಯೋಜನೆಗಳಿಗೆ ಗಣಕಯಂತ್ರದ ಮೂಲಕ ಕಾರ್ಯ ನಿರ್ವಹಿಸುತ್ತಿರುವ ಆನ್ಲೈನ್ ವ್ಯವಸ್ಥೆಯಲ್ಲಿ ಪದೇ ಪದೇ ತಾಂತ್ರಿಕ (ಸರ್ವರ್ಪ್ರಾಬಲಂ) ದೋಷ ಕಾಣಿಸಿಕೊಳ್ಳುತ್ತಿದ್ದು ಸಿಬ್ಬಂದಿ ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ.
ಧಾರವಾಡ ತಾಲೂಕಿನಲ್ಲಿರುವ ಗ್ರಾಮ ಪಂಚಾಯಿತಿಗಳಲ್ಲಿ ಉಲ್ಬಣಗೊಳ್ಳುತ್ತಿದ್ದು ದಿನನಿತ್ಯ ನಿರ್ವಹಿಸುತ್ತಿರುವ ಕೆಲಸ ಕಾರ್ಯಗಳಿಗೆ ಅಡಚಣೆಯುಂಟಾಗುತ್ತಿದೆ. ಸರ್ವರ್ ಸಮಸ್ಯೆ
ತಾಲೂಕಿನಲ್ಲಿ ಒಟ್ಟು 39 ಗ್ರಾಮ ಪಂಚಾಯಿತಿಗಳಿವೆ. ಪಂಚಾಯತ್ ರಾಜ್ಯ ಇಲಾಖೆಗೆ ಸಂಬಂಧಿಸಿದ ನರೇಗಾ,ಪಂಚತಂತ್ರ,ಆಶ್ರಯ ಮನೆ,ಎಂಡು ಟು ಎಂಡ್ ಸೇರಿದಂತೆ ಹತ್ತು ಹಲವಾರು ಯೋಜನೆಗಳಿಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಗಣಕಯಂತ್ರದ ಮೂಲಕ ಆನ್ಲೈನ ವ್ಯವಸ್ಥೆಯಲ್ಲಿಯೇ ನಿರ್ವಹಿಸಲಾಗುತ್ತಿದೆ.ಅನುಷ್ಠಾನಗೊಳ್ಳುತ್ತಿರುವ ಪ್ರತಿಯೊಂದು ಯೋಜನೆಗೆ ಪ್ರತ್ಯೇಕ ಸಾಫ್ಟವೇರ ಅಳವಡಿಸಲಾಗಿದೆ.ಆದರೆ ಇಡೀ ರಾಜ್ಯಕ್ಕೆ ಪಂಚತಂತ್ರ ತಂತ್ರಾಂಶವೊಂದೇ ಕಾರ್ಯ ನಿರ್ವಹಿಸುತ್ತಿರು ಕಾರಣ ಸರ್ವರ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿದೆ ಎಂದು ಗ್ರಾಮ ಪಂಚಾಯಿತಿ ಸಿಬ್ಬಂದಿ ಹೇಳುತ್ತಿದ್ದಾರೆ.
ಇಲಾಖೆ ಮಾಹಿತಿ ಪ್ರಕಾರ ಸದ್ಯ ಅರ್ಧದಷ್ಟು ಪಂಚಾಯಿತಿಗಳು ಅದೇ ಹಳೆ ಕಾಲದ ಸ್ಥಿರ ದೂರವಾಣಿ ಮೂಲಕ ಬ್ರಾಡ ಬ್ಯಾಂಡ್ ಸಂಪರ್ಕ ಪಡೆದು ಕಾರ್ಯ ನಿರ್ವಹಿಸುತ್ತಿದ್ದರೆ ಇನ್ನು ಕೆಲೆವೆಡೆ ವಿವಿಧ ಕಂಪನಿಯ ಸಿಮ್ ಕಾರ್ಡ ಬಳಸಿ ಡೊಂಗಲ್ಗಳನ್ನು ಬಳಸಲಾಗುತ್ತಿದೆ.ಬಿಎಸ್ಎನ್ಎಲ್ ಸಂಪರ್ಕ ಇಲ್ಲದಿರುವವರು ಮತ್ತು ಡೊಂಗಲ್ ಬಳಕೆಯಲ್ಲಿ ನಿಧಾನಗತಿಯಾಗುತ್ತಿರುವವರು ತಮ್ಮ ಕೆಲಸಕ್ಕಾಗಿ ಪಕ್ಕದ ಗ್ರಾಮ ಪಂಚಾಯಿತಿ ಇಲ್ಲವೇ ಧಾರವಾಡದ ತಾಲೂಕ,ಜಿಲ್ಲಾ ಪಂಚಾಯಿತಿಗಳಿಗೆ ತೆರಳುವಂತಾಗಿದೆ. ಕೆಲಸ ವಿಳಂಬವಾಗುತ್ತಿರುವ ಕೆಲಸದಿಂದಾಗಿ ನರೇಗಾ ಕೂಲಿ,ಪಡಿತರ ಚೀಟಿ,ಆಶ್ರಯ ಮನೆ ಹಾಗೂ ಶೌಚಾಲಯ ಹಣವನ್ನು ಫಲಾನುಭವಿಗಳಿಗೆ ತಲುಪಿಸಲು ಕಷ್ಟಕರವಾಗುತ್ತಿದ್ದು ನಿತ್ಯ ಒಂದಿಲ್ಲ ಒಂದು ಕಾರಣಕ್ಕೆ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ವಾಗ್ವಾದ ನಡೆಸುತ್ತಿದ್ದಾರೆ.
ಬಿಬಿಎನ್ಎಲ್ ಅಳವಡಿಕೆಗೆ ಹಿಂದೇಟು: ಆನ್ಲೈನ್ನಲ್ಲಿರುವ ಈ ಸರ್ವರ್ ಸಮಸ್ಯೆ ಹೋಗಲಾಡಿಸಿ ಅನುಷ್ಠಾನಗೊಳ್ಳುತ್ತಿರುವ ಪ್ರತಿಯೊಂದು ಯೋಜನೆಯ ಕೆಲಸ,ಕಾರ್ಯಗಳು ಸರಾಗವಾಗಿ ಸಾಗಲೆಂದು ಮೋದಿಜಿಯವರ ಡಿಜಿಟಲ್ ಪ್ರೋಗ್ರಾಂ ಇಂಡಿಯಾ ಯೋಜನೆಯಡಿ ಬಿಬಿಎನ್ಎಲ್ (ಭಾರತ ಬ್ರಾಡ್ ಬ್ಯಾಂಡ ನಿಗಮ ಲಿಮಿಟೆಡ್) ಹೊಸ ಸೇವೆಯನ್ನು ಪ್ರಾರಂಭಿಸಲಾಗಿದೆ.ಈ ಸೇವೆಯಡಿ ಆಗುತ್ತಿರುವ ತೊಂದರೆಯನ್ನು ಸರಿಪಡಿಸಿಕೊಂಡು ಕಾರ್ಯದ ತೀವ್ರತೆಯನ್ನು ಹೆಚ್ಚಿಸಿಕೊಳ್ಳಲು ಪ್ರತಿ ಗ್ರಾಮ ಪಂಚಾಯಿತಿಯು ಒಎಫ್ಸಿ ( ಓಪ್ಟಿಕಲ್ ಫೈಬರ್ ಕೇಬಲ್)ಯನ್ನು ಅಳವಡಿಸಿಕೊಳ್ಳಬೇಕೆಂದು ಕೆಲ ತಿಂಗಳ ಹಿಂದೆಯೇ ಇಲಾಖೆಯ ಸಿಇಒ ಸಂಬಂಧಿಸಿದ ಎಲ್ಲ ಗ್ರಾ.ಪಂಗಳ ಪಿಡಿಒಗೆ ತಿಳಿಸಿದ್ದಾರೆ.ಒಎಫ್ಸಿಯಲ್ಲಿ ಮೋಡಮ್ ಹಾಗೂ ಸಿಸ್ಟಮನ್ನು ಇಲಾಖೆ ವತಿಯಿಂದ ಅಳವಡಿಸಿಕೊಡಲಾಗುತ್ತಿದ್ದು ಇದನ್ನು ಪಡೆದುಕೊಳ್ಳುವ ಗ್ರಾಮ ಪಂಚಾಯಿತಿಯು ಪ್ರತಿ ತಿಂಗಳಿಗೆ ಕೇವಲ 1445 ರೂ ಪಾವತಿಸಿದರೆ ಸಾಕು ಅನಿಯಮಿತ ಡಾಟಾ ನೀಡಲಾಗುತ್ತದೆ.ಆದರೆ ಇವರೆಗೆ ಕೇವಲ 12 ಗ್ರಾಮ ಪಂಚಾಯಿತಿಯವರು ಮಾತ್ರ ಈ ಸೇವೆಯನ್ನು ಪಡೆದುಕೊಂಡಿದ್ದು ಉಳಿದವರಾರಯರು ಆಸಕ್ತಿ ತೋರಿಸುತ್ತಿಲ್ಲ ಎಂಬುದಾಗಿಯು ಬಿಎಸ್ಎನ್ಎಲ್ನ ಮೇಲಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಪೂಜಿ ಸೇವಾ ಕೇಂದ್ರ ಅಳವಡಿಕೆ: ಕೆಲ ದಿನಗಳ ಹಿಂದೆ ಹೊಸದಾಗಿ ಜಾರಿಯಾಗಿರುವ ಬಾಪೂಜಿ ಸೇವಾ ಕೇಂದ್ರದ ಕಂದಾಯ ಇಲಾಖೆಯ ಸೇವೆಗಳನ್ನು ಇನ್ನು ಮುಂದೆ ಗ್ರಾಮ ಪಂಚಾಯಿತಿಯಲ್ಲಿಯೇ ಒದಗಿಸಬೇಕೆಂದು ತಿಳಿಸಲಾಗಿದೆ.ಈ ವ್ಯವಸ್ಥೆಯನ್ನು ಕೂಡ ಪಂಚಾಯಿತಿ ಪಂಚತಂತ್ರದಲ್ಲಿಯೇ ಅಳವಡಿಸಲು ತಿರ್ಮಾನಿಸಲಾಗಿದ್ದು ಸರ್ವರ ತೊಂದರೆಯಿಂದಾಗಿ ಬೇಸತ್ತಿರುವ ಸಿಬ್ಬಂದಿಗೆ ಇದು ಮತ್ತಷ್ಟು ತಲೆ ನೋವಾಗಿ ಪರಿಣಮಿಸುತ್ತಿದೆ.ಇದರಲ್ಲಿರುವ ನೂರು ಸೇವೆಗಳ ಪೈಕಿ ಸದ್ಯ 39 ಸೇವೆಗಳನ್ನು ಸಾರ್ವಜನಿಕರಿಗೆ ಪೂರೈಸುವಂತೆ ಕೆಲ ದಿನಗಳ ಹಿಂದೆ ಜಿಲ್ಲಾ ಪಂಚಾಯಿತಿಯಲ್ಲಿ ಸಿಬ್ಬಂದಿ ಹಾಗೂ ಪಿಡಿಒಗಳಿಗೆ ಜರುಗಿದ ಸಭೆಯಲ್ಲಿ ತಿಳಿಸಲಾಗಿದೆ.ಸದ್ಯ ಪಂಚಾಯಿತಿಯಲ್ಲಿರುವ ಸಿಬ್ಬಂದಿಯೇ ಈ ಹೊಣೆಯನ್ನು ನಿಭಾಯಿಸಬೇಕಾಗಿ ಬಂದಿದ್ದು ಕೆಲವೆಡೆ ಸಿಬ್ಬಂದಿ ಕೊರತೆಯಿರುವ ಕಾರಣ ಪ್ರತ್ಯೇಕ ಸಿಬ್ಬಂದಿಗಾಗಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ.ಆದರೆ ಈಗಾಗಲೇ ಗ್ರಾ.ಪಂ.ಗಳಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕಳೆದ ಎರಡು ವರ್ಷಗಳಿಂದ ವೇತನ ಬಾಕಿ ಉಳಿಸಿಕೊಂಡಿದ್ದು ಯಾವೊಬ್ಬ ಅಧಿಕಾರಿಯು ತಲೆ ಕೆಡೆಸಿಕೊಳ್ಳುತ್ತಿಲ್ಲ ಎಂದು ಹೆಸರು ಹೇಳಲಿಚ್ಛಸದ ಸಿಬ್ಬಂದಿ ತಮ್ಮ ಅಳಳು ತೋಡಿಕೊಂಡಿದ್ದಾರೆ.