ಆ್ಯಪ್ನಗರ

ದೇಶದ ಗಡಿ ಕಾಯುವ ಸೈನಿಕರು ರೇಪಿಸ್ಟ್‌ಗಳು: ಸಾಹಿತ್ಯ ಸಂಭ್ರಮದಲ್ಲಿ ವಿವಾದಾತ್ಮಕ ಹೇಳಿಕೆ

ಸೈನಿಕರು ದೇಶ ಕಾಯುವವರಲ್ಲ ಅವರು ದೊಡ್ಡ ರೇಪಿಸ್ಟ್‌ಗಳು ಎಂದು ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಚಿಂತಕ ಡಾ.ಶಿವ ವಿಶ್ವನಾಥನ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಗೆ ಗೋಷ್ಠಿಯಲ್ಲಿದ್ದ ಮಾಜಿ ಸೈನಿಕ ಹಾಗೂ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್‌ ಸಿದ್ದಲಿಂಗಯ್ಯ ಹಿರೇಮಠ ಸೇರಿದಂತೆ ಹಲವರು ವಿಶ್ವನಾಥನ್‌ ಅವರ ಈ ಸೈನಿಕ ವಿರೋಧಿ ಹೇಳಿಕೆಯಿಂದ ಕೆರಳಿ ಕೆಂಡಾಮಂಡಲವಾದರು.

Vijaya Karnataka 20 Jan 2019, 9:03 am

ಹೈಲೈಟ್ಸ್‌:

  • ಸೈನಿಕರು ದೇಶ ಕಾಯುವವರಲ್ಲ ರೇಪಿಸ್ಟ್‌ಗಳು
  • ಡಾ.ಶಿವ ವಿಶ್ವನಾಥನ್‌ ವಿವಾದಾತ್ಮಕ ಹೇಳಿಕೆ
  • ಸಾಹಿತ್ಯ ಸಂಭ್ರಮದಲ್ಲಿ ಕೋಲಾಹಲ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web 47551c26-e57f-42c5-b552-bf779092dee6
ಧಾರವಾಡ: ಭಾರತದ ಗಡಿ ಭಾಗದಲ್ಲಿ ದೇಶ ಕಾಯುವ ಸೈನಿಕರಿಂದಲೇ ಅಲ್ಲಿನ ನಿವಾಸಿಗಳ ಮೇಲೆ ಹೆಚ್ಚು ಅತ್ಯಾಚಾರಗಳು ನಡೆಯುತ್ತಿವೆ. ಸೈನಿಕರು ದೇಶ ಕಾಯುವವರಲ್ಲ ಅವರು ದೊಡ್ಡ ರೇಪಿಸ್ಟ್‌ಗಳು. ಈ ಕಾರಣದಿಂದಲೇ ಗಡಿ ಭಾಗದಲ್ಲಿ ಸ್ಥಳೀಯರು ಮತ್ತು ಸೈನಿಕರ ಮಧ್ಯೆ ಸದಾ ಶೀತಲ ಸಮರ ನಡೆಯುತ್ತಿರುತ್ತದೆ ಎಂದು ಚಿಂತಕ ಡಾ.ಶಿವ ವಿಶ್ವನಾಥನ್‌ ಹೇಳಿದ ವಿವಾದಾತ್ಮಕ ಹೇಳಿಕೆ ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಕೋಲಾಹಲವನ್ನೇ ಸೃಷ್ಟಿಸಿತು.
ಗೋಷ್ಠಿಯಲ್ಲಿದ್ದ ಮಾಜಿ ಸೈನಿಕ ಹಾಗೂ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್‌ ಸಿದ್ದಲಿಂಗಯ್ಯ ಹಿರೇಮಠ ಸೇರಿದಂತೆ ಹಲವರು ವಿಶ್ವನಾಥನ್‌ ಅವರ ಈ ಸೈನಿಕ ವಿರೋಧಿ ಹೇಳಿಕೆಯಿಂದ ಕೆರಳಿ ಕೆಂಡಾಮಂಡಲವಾದರು.

''ಸೈನಿಕರು ನಿಸ್ವಾರ್ಥ ಮನೋಭಾವದೊಂದಿಗೆ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಭಯೋತ್ಪಾದಕರು ಅಮಾಯಕ ಹೆಣ್ಣು ಮಕ್ಕಳ ಮೇಲೆ ನಡೆಸುತ್ತಿರುವ ಅತ್ಯಾಚಾರ, ಅನಾಚಾರಗಳನ್ನು ತಡೆಯುತ್ತಿದ್ದಾರೆ. ಆದರೆ, ಪಾಕಿಸ್ತಾನಿ ಮನೋಭಾವ ಹೊಂದಿರುವ ವಿಶ್ವನಾಥನ್‌ ಯೋಧರು ರೇಪಿಸ್ಟ್‌ಗಳು ಎನ್ನುವ ಮೂಲಕ ಭಾರತೀಯ ಸೈನ್ಯವನ್ನು ಅವಮಾನಿಸಿದ್ದು ಖಂಡನೀಯ'' ಎಂದು ಹಿರೇಮಠ ಆಕ್ರೋಶ ಹೊರಹಾಕಿದರು. ಇದಕ್ಕೆ ಅನೇಕರು ಧ್ವನಿಗೂಡಿಸಿದ್ದರಿಂದ ಸಭೆಯಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗುವಂತೆ ಮಾಡಿತು.

''ನಾನು ಕಾರ್ಯನಿರ್ವಹಿಸಿದ ಭಾಗದಲ್ಲಿ ಭಾರತೀಯ ಸೈನಿಕರು ಒಂದೇ ಒಂದು ಅತ್ಯಾಚಾರ ಮಾಡಿದ ಘಟನೆಗಳು ನಡೆದ ಉದಾಹರಣೆಗಳು ಇಲ್ಲ. ತುಂಬಿದ ಸಭೆಯಲ್ಲಿ ಸೈನಿಕರು ರೇಪಿಸ್ಟ್‌ಗಳು ಎಂದಿರುವು ಎಷ್ಟು ಸರಿ'' ಎಂದು ಮೇಜರ್‌ ಸಿದ್ಧಲಿಂಗಯ್ಯ ಕಿಡಿ ಕಾರಿದರು.

''ನೀವು ಕೇವಲ ಭಾರತ ಸೈನಿಕರ ಬಗ್ಗೆ ಮಾತ್ರ ಆರೋಪ ಮಾಡುವುದು ಸರಿಯಲ್ಲ. ಪಾಕಿಸ್ತಾನದ ಬಗ್ಗೆ ನೀವು ತಾಳಿರುವ ಮೃದು ಧೋರಣೆ ಸರಿಯಾದ ನಡೆಯಲ್ಲ. ಇಂಥ ವಿವಾದಾತ್ಮಕ ಹೇಳಿಕೆಯನ್ನು ನೀವು ವಾಪಸ್‌ ಪಡೆಯಬೇಕು'' ಎಂದು ಆಗ್ರಹಿಸಿದರು. ಇದೇ ವೇಳೆ ಎಚ್‌.ಎಸ್‌.ಎಂ.ಪ್ರಕಾಶ ಹಾಗೂ ನೀತಾರಾವ್‌ ಸೇರಿದಂತೆ ಇತರರು ಧ್ವನಿಗೂಡಿಸಿದರು.

ಪಾಕಿಸ್ತಾನಕ್ಕೆ ಹೋಗಿ:

'ನಾಗರಿಕತೆ ಹಾಗೂ ರಾಷ್ಟ್ರೀಯತೆ' ಗೋಷ್ಠಿಯಲ್ಲಿ ಭಾರತವನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿಕೊಂಡು ವಾದ ಮಂಡಿಸಿದ ಡಾ.ಶಿವ ವಿಶ್ವನಾಥನ್‌ ಅಭಿಪ್ರಾಯಕ್ಕೆ ಅನೇಕರು ಕೆರಳಿದರು. ವಿಶ್ವಕ್ಕೆ ನಾಗರಿಕತೆ ಹಾಗೂ ಸಮಾನತೆಯ ಪಾಠ ಬೋಧಿಸಿದ್ದು ಭಾರತ. ಇಂತಹ ವೈವಿಧ್ಯಮಯ ಸಂಸ್ಕೃತಿ, ಸಂಸ್ಕಾರ, ತ್ಯಾಗ, ಬಲಿದಾನಗಳಂತಹ ಉದಾತ್ತ ವಿಚಾರಧಾರೆಗಳನ್ನು ಹೊಂದಿರುವ ಭಾರತವನ್ನು ತುಚ್ಛವಾಗಿ ಕಾಣುವುದು ಸೂಕ್ತವಲ್ಲ. ಪಾಕಿಸ್ತಾನ ಬಗ್ಗೆ ನಿಮಗೆ ಅಷ್ಟೊಂದು ಪ್ರೀತಿ ಇದ್ದರೆ, ನೀವು (ಡಾ.ಶಿವ ವಿಶ್ವನಾಥನ್‌) ಅಲ್ಲಿಗೆ ಹೋಗಿ ನೆಲೆಸಿ ಎಂದು ಸಭಿಕರು ಆಕ್ರೋಶದ ನುಡಿಗಳನ್ನು ಆಡಿದರು.

ವಿವಾದಕ್ಕೆ ತೆರೆ ಹಾಕಿದ ದೇವಿ:

ವಾಗ್ವಾದ ತೀವ್ರ ಸ್ವರೂಪ ತಾಳುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಭಾಷಾ ತಜ್ಞ ಗಣೇಶ ದೇವಿ ವಿವಾದಕ್ಕೆ ತೆರೆ ಎಳೆದರು. ಈ ಸಂದರ್ಭ ಮಾತನಾಡಿದ ಅವರು, ''ರಾಷ್ಟ್ರೀಯತೆ ಹೊಸ ಕಲ್ಪನೆ ಬಗ್ಗೆ ಜಗತ್ತಿಗೆ ಹೊಸ ದಿಕ್ಕು ತೋರಿಸುವ ಶಕ್ತಿ ಭಾರತಕ್ಕಿದೆ. ಇದನ್ನೇಕೆ ನೀವು ಅರ್ಥ ಮಾಡಿಕೊಳ್ಳುತ್ತಿಲ್ಲ. ಪೂರ್ವಾಗ್ರಹ ಪೀಡಿತರಂತೆ ಒಂದೇ ನೇರಕ್ಕೆ ರಾಷ್ಟ್ರೀಯತೆಯನ್ನು ನೋಡುವುದಕ್ಕೆ ನನ್ನ ವಿರೋಧವಿದೆ. ಈ ವಿಷಯದಲ್ಲಿ ನಾನು ಡಾ. ವಿಶ್ವನಾಥನ್‌ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ'' ಎಂದರು.

''ನಾವೆಲ್ಲರೂ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ವ್ಯವಸ್ಥೆ ಹೊರತಾಗಿ ಯಾರೊಬ್ಬರು ಹೊರಗೆ ಉಳಿಯಲು ಸಾಧ್ಯವಿಲ್ಲ. ಹೀಗಾಗಿ ರಾಷ್ಟ್ರೀಯತೆಯನ್ನು ಏಕ ದೃಷ್ಟಿಕೋನದಿಂದ ನೋಡುವುದು ಸೂಕ್ತವಲ್ಲ. ವಿಶಾಲ ದೃಷ್ಟಿಕೋನದಲ್ಲಿ ರಾಷ್ಟ್ರೀಯತೆಯನ್ನು ನೋಡುವುದು ಸೂಕ್ತ. ಗೋಷ್ಠಿಯಲ್ಲಿ ಡಾ.ವಿಶ್ವನಾಥನ್‌ ಉತ್ತಮ ಚರ್ಚೆ ಹುಟ್ಟುಹಾಕಿದ್ದಾರೆ'' ಎಂದು ದೇವಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ