ಆ್ಯಪ್ನಗರ

ರಾಮ ಮಂದಿರ ನಿರ್ಮಾಣದಲ್ಲಿ ಬಿಜೆಪಿ ಮಾತು ತಪ್ಪದು

ಹುಬ್ಬಳ್ಳಿ : ಬಿಜೆಪಿಯು ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಿಸುವ ವಿಚಾರದಲ್ಲಿ ದೇಶದ ಜನತೆಗೆ ಮಾತು ಕೊಟ್ಟಿದೆ. ಈ ಆಶ್ವಾಸನೆ ಮೇಲೆ ಹಿಂದೂಗಳು ಇನ್ನೂ ನಂಬಿಕೆ ಕಳೆದುಕೊಂಡಿಲ್ಲ ಎಂದು ಜಬಲ್ಪುರ ಮಹಾಮಂಡೇಶ್ವರ ಅಖಿಲೇಶ್ವನಂದಗಿರಿ ಸ್ವಾಮೀಜಿ ಹೇಳಿದರು.

Vijaya Karnataka 26 Nov 2018, 5:00 am
ಹುಬ್ಬಳ್ಳಿ : ಬಿಜೆಪಿಯು ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಿಸುವ ವಿಚಾರದಲ್ಲಿ ದೇಶದ ಜನತೆಗೆ ಮಾತು ಕೊಟ್ಟಿದೆ. ಈ ಆಶ್ವಾಸನೆ ಮೇಲೆ ಹಿಂದೂಗಳು ಇನ್ನೂ ನಂಬಿಕೆ ಕಳೆದುಕೊಂಡಿಲ್ಲ ಎಂದು ಜಬಲ್ಪುರ ಮಹಾಮಂಡೇಶ್ವರ ಅಖಿಲೇಶ್ವನಂದಗಿರಿ ಸ್ವಾಮೀಜಿ ಹೇಳಿದರು.
Vijaya Karnataka Web DRW-25MANJU1


ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್‌ ಭಾನುವಾರ ನಗರದ ಮೂರುಸಾವಿರ ಮಠದ ಆವರಣದಲ್ಲಿ ಆಯೋಜಿಸಿದ್ದ ಜನಾಗ್ರಹ ಸಭೆಯಲ್ಲಿ ಮುಖ್ಯಭಾಷಣಕಾರರಾಗಿ ಅವರು ಮಾತನಾಡಿದರು.

ಸುದೀರ್ಘ 45 ನಿಮಿಷಗಳ ಕಾಲ ಹಿಂದಿ ಭಾಷೆಯಲ್ಲಿ ವಾಗ್ಝರಿ ಹರಿಸಿದ ಸ್ವಾಮೀಜಿ, ಭಾಷಣದುದ್ದಕ್ಕೂ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು. ''ಶ್ರೀರಾಮನ ಅಸ್ತಿತ್ವ ಮತ್ತು ರಾಮಸೇತು ಕೇವಲ ಕಾಲ್ಪನಿಕ ಎಂದು ಹೇಳುತ್ತಿದ್ದ ಕಾಂಗ್ರೆಸ್‌ ನೇತಾರರಿಗೆ ಈಗ ಬುದ್ಧಿ ಬಂದಿದೆ. ಜಾತ್ಯತೀತ ಹೆಸರಿನಲ್ಲಿ ತುಷ್ಟೀಕರಣ ಧೋರಣೆ ಅನುಸರಿಸಿ ಬಹುಸಂಖ್ಯಾತರನ್ನು ಕಡೆಗಣಿಸುತ್ತಿದೆ'' ಎಂದು ಆರೋಪಿಸಿದರು.

''ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಶದ ಮೂಲೆ ಮೂಲೆಗಳಿಂದ ಜನ ಹರಿದು ಬರುತ್ತಿದೆ. ಈ ವಿಷಯವು ದೇಶದ ಕೋಟ್ಯಂತರ ಜನರ ಭಾವನೆಗಳ ಜೊತೆ ಬೆಸೆದುಕೊಂಡಿದೆ. ಜನರ ಭಾವನೆಗಳಿಗೆ ಸಂಸತ್‌ ಹಾಗೂ ನ್ಯಾಯಾಲಯ ಸ್ಪಂದಿಸಬೇಕು'' ಎಂದು ಮನವಿ ಮಾಡಿದರು.

''ಅಯೋಧ್ಯೆಯು ಬಾಬರನ ಜನ್ಮಭೂಮಿ ಅಲ್ಲ. ಬಾಬರ್‌ ಒಬ್ಬ ದಾಳಿಕೋರ, ರಾಜ್ಯಭಾರ ಮಾಡಲು ಆಕ್ರಮಣ ಮಾಡಿಕೊಂಡು ಬಂದವನು. ಅಯೋಧ್ಯೆಯು ರಾಮನ ಜನ್ಮಭೂಮಿ ಎಂದು ಅನೇಕ ಸಂಶೋಧನೆಗಳು, ಸಾಕ್ಷ್ಯಾಧಾರಗಳು ಸ್ಪಷ್ಟಪಡಿಸಿವೆ. ಪಂಚಾಯಿತಿ ದಾಖಲೆಯಲ್ಲಿಯೂ ರಾಮ ಮಂದಿರ ಎಂದು ದಾಖಲಾಗಿದೆ. ಇವುಗಳ ಆಧಾರದ ಮೇಲೆ ಮಂದಿರ ನಿರ್ಮಿಸಿ ಎಂದು ಕೇಳುತ್ತಿದ್ದೇವೆ. ಎಲ್ಲಿಯೂ ಬಾಬರ್‌ ಮಸೀದಿ ನಿರ್ಮಿಸಲು ಅವಕಾಶ ಕೊಡುವುದಿಲ್ಲ'' ಎಂದು ಹೇಳಿದರು.

ಬಿಜೆಪಿ ಮೇಲೆ ನಿರೀಕ್ಷೆ ಇದೆ

''ನ್ಯಾಯಾಲಯವು ಈ ವಿಚಾರದಲ್ಲಿ ಕೋಟ್ಯಂತರ ಹಿಂದೂಗಳ ಭಾವನೆಗಳನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಭಾವಿಸಿದ್ದೇವೆ. ಪೂರ್ಣ ಬಹುಮತದಿಂದ ಅಧಿಕಾರ ಬಂದಾಗಿನಿಂದ ಬಿಜೆಪಿ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಆದ್ಯತೆ ವಿಷಯ ಎಂದು ಅರ್ಜಿ ಕೈಗೆತ್ತಿಕೊಳ್ಳುವಂತೆ ಸಾಲಿಸಿಟರ್‌ ಮೂಲಕ ಕೋರ್ಟ್‌ಗೆ ಮನವಿ ಮಾಡಲು ಕೇಂದ್ರ ಸರಕಾರ ಮುಂದಾಗಬೇಕು. ಈ ಮೂಲಕ ಮಂದಿರ ನಿರ್ಮಾಣಕ್ಕೆ ಬದ್ಧತೆ ಪ್ರದರ್ಶಿಸಬೇಕು'' ಎಂದು ಆಗ್ರಹಿಸಿದರು.

''ಮಂದಿರ ನಿರ್ಮಾಣ ವಿಧೇಯಕ ಲೋಕಸಭೆಯಲ್ಲಿ ಪಾಸು ಆದರೂ ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತ ಇಲ್ಲದ್ದರಿಂದ ಅದು ಬಿದ್ದುಹೋಗುತ್ತದೆ. ಅದರಿಂದ ಅವಮಾನವಾದರೂ ಅದನ್ನು ರಾಮಭಕ್ತರು ಅವಮಾನ ಎನ್ನುವುದಿಲ್ಲ'' ಎಂದರು.

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ ಕೊಟ್ಟಿದ್ದು ಸರಿಯೇ ಎಂದು ಆಕ್ಷೇಪಿಸಿದ ಅವರು, ''ಹಾಗಾದ್ರೆ ಜುಮ್ಮಾ ಮಸೀದಿಯಲ್ಲಿ ರುದ್ರಾಭಿಷೇಕ ಮಾಡಲು ಪರವಾನಗಿ ಕೋಡ್ತೀರಾ'' ಎಂದು ಕೇಳಿದರು.

ರಾರಾಜಿಸಿದ ಕೇಸರಿ ತೋರಣ:

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಹುಬ್ಬಳ್ಳಿಯಲ್ಲಿ ಅಪಾರ ಸಂಖ್ಯೆಯ ಜನರು ಶಪಥ ಮಾಡಿದರು. ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಹಾವೇರಿ ಮತ್ತು ಧಾರವಾಡ ಜಿಲ್ಲೆ ಸೇರಿದಂತೆ ನಾನಾ ಕಡೆಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಜನರು ''ಪಣವಿದು ರಾಮನ ಮೇಲಾಣೆ ಮಂದಿರವಲ್ಲೇ ಕಟ್ಟುವೆವು' ಎಂಬ ಪಣ ತೊಟ್ಟರು.

ಮಹಾನಗರದಲ್ಲಿ ಎಲ್ಲೆಡೆ ಭಗವಾಧ್ವಜಗಳ ಹಾರಾಟ, ಭರಾಟೆ ಜೋರಾಗಿತ್ತು. ನಗರದ ದಾಜಿಬಾನ್‌ಪೇಟ, ಅಂಚಟಗೇರಿ ಓಣಿ ಸೇರಿದಂತೆ ಮೂರುಸಾವಿರ ಮಠಕ್ಕೆ ಸಂಪರ್ಕಿಸುವ ರಸ್ತೆಗಳಲ್ಲಿ ಕೇಸರಿ ತೋರಣ ರಾರಾಜಿಸಿದವು. ಧಾರವಾಡದಿಂದ ಹುಬ್ಬಳ್ಳಿ ಮೂರುಸಾವಿರ ಮಠದವರೆಗೆ ಹಿಂದೂ ಕಾರ್ಯಕರ್ತರು ಬೃಹತ್‌ ಬೈಕ್‌ ರಾರ‍ಯಲಿ ನಡೆಸಿದರು. ಜನಾಗೃಹ ಸಭೆಯ ವೇಳೆ ಕೇಸರಿ ಬಾವುಟಗಳು ಹಾಗೂ ಶ್ರೀರಾಮನ ವೇಷಧಾರಿ ವಿಶೇಷ ಗಮನ ಸೆಳೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ