ಆ್ಯಪ್ನಗರ

ಶಿವಳ್ಳಿ, ಚಿಕ್ಕನಗೌಡರ ನಡುವೆ 4ನೇ ಅವಧಿಯ ಜಿದ್ದಾಜಿದ್ದಿ

ಧಾರವಾಡ : ಕುಂದಗೋಳ ವಿಧಾನಸಭಾ ಉಪಚುನಾವಣೆ ಅಖಾಡ ಸಿದ್ಧಗೊಂಡಿದೆ. ಅಲ್ಲೀಗ ಮತ್ತೂ ಶಿವಳ್ಳಿ ವರ್ಸಸ್‌ ಚಿಕ್ಕನಗೌಡರ ಮಧ್ಯೆ ನಾಲ್ಕನೇ ಅವಧಿಯ ರಾಜಕೀಯ ಜಿದ್ದಾಜಿದ್ದಿ ಮುಂದುವರಿದಿದ್ದು, ಯಾರ ಕೈ ಮೇಲಾಗಲಿದೆ ಎಂಬ ಕುತೂಹಲ ಮೂಡಿದೆ.

Vijaya Karnataka 29 Apr 2019, 5:00 am
ಧಾರವಾಡ : ಕುಂದಗೋಳ ವಿಧಾನಸಭಾ ಉಪಚುನಾವಣೆ ಅಖಾಡ ಸಿದ್ಧಗೊಂಡಿದೆ. ಅಲ್ಲೀಗ ಮತ್ತೂ ಶಿವಳ್ಳಿ ವರ್ಸಸ್‌ ಚಿಕ್ಕನಗೌಡರ ಮಧ್ಯೆ ನಾಲ್ಕನೇ ಅವಧಿಯ ರಾಜಕೀಯ ಜಿದ್ದಾಜಿದ್ದಿ ಮುಂದುವರಿದಿದ್ದು, ಯಾರ ಕೈ ಮೇಲಾಗಲಿದೆ ಎಂಬ ಕುತೂಹಲ ಮೂಡಿದೆ.
Vijaya Karnataka Web KUNDGOL 70-1


ಉಪಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸಿ.ಎಸ್‌. ಶಿವಳ್ಳಿ ಅವರ ಪತ್ನಿ ಕುಸುಮಾ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಎಸ್‌.ಐ.ಚಿಕ್ಕನಗೌಡರ ಸ್ಪರ್ಧೆಗಿಳಿಯುತ್ತಿದ್ದಾರೆ. 2008ರಿಂದಲೂ ಸಿ.ಎಸ್‌. ಶಿವಳ್ಳಿ, ಎಸ್‌.ಐ. ಚಿಕ್ಕನಗೌಡರ ಕ್ಷೇತ್ರದ ಕಲಿಗಳಾಗಿ ಸ್ಪರ್ಧಿಸಿ ಸೋಲು- ಗೆಲುವನ್ನು ಕಂಡಿದ್ದಾರೆ. ಈಗ ಸಿ.ಎಸ್‌. ಶಿವಳ್ಳಿ ನಿಧನರಾಗಿದ್ದರಿಂದ ಅವರ ಪತ್ನಿ ಕುಸುಮಾ ಅವರು ಚಿಕ್ಕನಗೌಡರ ಎದುರಾಳಿ ಆಗಿದ್ದರಿಂದ ಕ್ಷೇತ್ರ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ಸಿ.ಎಸ್‌. ಶಿವಳ್ಳಿ ಹಾಗೂ ಎಸ್‌.ಐ. ಚಿಕ್ಕನಗೌಡರ ಏಕಕಾಲದಲ್ಲಿಯೇ ರಾಜ್ಯ ರಾಜಕಾರಣ ಪ್ರವೇಶಿಸಿದವರು. 1994ರಲ್ಲಿ ಶಿವಳ್ಳಿ ಕುಂದಗೋಳ ಕ್ಷೇತ್ರದಿಂದ ಕೆಸಿಪಿ ಅಭ್ಯರ್ಥಿಯಾಗಿ, ಚಿಕ್ಕನಗೌಡರ ಕಲಘಟಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋತಿದ್ದರು. 1999ರ ಚುನಾವಣೆಯಲ್ಲಿ ಉಭಯ ನಾಯಕರು ವಿಧಾನಸಭೆ ಪ್ರವೇಶಿಸಿದ್ದರು. 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾದ ನಂತರ ಚಿಕ್ಕನಗೌಡರ ಕುಂದಗೋಳ ಕ್ಷೇತ್ರದಿಂದ ಸ್ಪರ್ಧಿಸಿ ಶಿವಳ್ಳಿ ಅವರನ್ನು ಸೋಲಿಸಿದ್ದರು. ಅಂದಿನಿಂದ ಇವರ ಮಧ್ಯೆ ನೇರಾನೇರ ಸ್ಪರ್ಧೆ ನಡೆದಿದೆ. 2013, 2018ರಲ್ಲಿ ಚಿಕ್ಕನಗೌಡರನ್ನು ಶಿವಳ್ಳಿ ಸೋಲಿಸಿದ್ದರು.

ಆದರೆ, ಈಗ ಸಿ.ಎಸ್‌. ಶಿವಳ್ಳಿ ನಿಧನದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಈಗಲೂ ಇಲ್ಲಿ ಶಿವಳ್ಳಿ ಕುಟುಂಬವೇ ಚಿಕ್ಕನಗೌಡರಿಗೆ ಪ್ರತಿಸ್ಪರ್ಧಿ. ಇಲ್ಲಿ ಶಿವಳ್ಳಿ ಅವರ ಸಾವಿನ ಅನುಕಂಪ ಕಾಂಗ್ರೆಸ್‌ಗೆ ಇದೆ. 2018ರ ಚುನಾವಣೆಯಲ್ಲಿ ಕೇವಲ 634 ಮತಗಳಿಂದ ಸೋತ ಅನುಕಂಪ ಬಿಜೆಪಿಗೆ ಇದೆ. ಜನರ ಒಲವು ಎತ್ತ ಎಂಬುದು ಗೌಪ್ಯವಾಗಿಯೇ ಉಳಿದಿದೆ.

ಯರಗುಪ್ಪಿಯ ಏಕೈಕ ಕಲಿ

ಕುಂದಗೋಳ ವಿಧಾನಸಭಾ ಚುನಾವಣೆ ಎಂದರೆ ಯರಗುಪ್ಪಿ ಗ್ರಾಮದಲ್ಲಿನ ರಾಜಕೀಯ ಬೆಳವಣಿಗೆಗಳೇ ನಿರ್ಣಾಯಕ. 1994ರಿಂದಲೂ ಯರಗುಪ್ಪಿಯ ಇಬ್ಬರು ಅಭ್ಯರ್ಥಿಗಳು ಪ್ರಮುಖ ಪ್ರತಿಸ್ಪರ್ಧಿಗಳಾಗಿ ಅಖಾಡಕ್ಕಿಳಿದು ಸೋಲು-ಗೆಲುವಿನ ರುಚಿ ಕಂಡಿದ್ದಾರೆ. ಆದರೆ, ಈ ಬಾರಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಯಿಂದಾಗಿ ಇಲ್ಲಿ ಯರಗುಪ್ಪಿಯವರಾದ ಕುಸುಮಾ ಶಿವಳ್ಳಿ ಅವರು ಮಾತ್ರ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.

ಜೆಡಿಎಸ್‌ ಮುಖಂಡರ ಎಂ.ಎಸ್‌. ಅಕ್ಕಿ, ಬಿಜೆಪಿ ಮುಖಂಡ ಎಂ.ಆರ್‌. ಪಾಟೀಲ ಹಾಗೂ ಶಿವಳ್ಳಿ ಅವರು ಯರಗುಪ್ಪಿ ಗ್ರಾಮದವರು. ಇವರು ಮೂರು ಪ್ರಮುಖ ಪಕ್ಷಗಳಲ್ಲಿ ಗುರುತಿಸಿಕೊಂಡವರು. 1994ರಲ್ಲಿ ನಡೆದ ಚುನಾವಣೆಯಲ್ಲಿ ಎಂ.ಎಸ್‌. ಅಕ್ಕಿ ಜನತಾದಳದಿಂದ ಸ್ಪರ್ಧಿಸಿ ಶಾಸಕರಾಗಿದ್ದರು. ಅವರ ಸಮೀಪದ ಪ್ರತಿಸ್ಪರ್ಧಿ ಆಗಿದ್ದು ಸಿ.ಎಸ್‌. ಶಿವಳ್ಳಿ. ಅಂದಿನಿಂದ ಪ್ರತಿ ಚುನಾವಣೆಯಲ್ಲೂ ಇವರು ವಿರೋಧಿ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡುತ್ತಲೇ ಬಂದಿದ್ದಾರೆ. 2013ರಲ್ಲಿ ನಡೆದ ಚುನಾವಣೆಯಲ್ಲಿ ಅದೇ ಗ್ರಾಮದ ಎಂ.ಆರ್‌. ಪಾಟೀಲ ಬಿಜೆಪಿ ಅಭ್ಯರ್ಥಿ ಆಗಿ ಯರಗುಪ್ಪಿಯ ಮೂವರ ಮಧ್ಯೆ ಸ್ಪರ್ಧೆ ನಡೆದಿತ್ತು. ಈ ಮೂಲಕ ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳು ಯರಗುಪ್ಪಿ ಗ್ರಾಮದವರು ಎಂಬ ವಿಶೇಷವಾಗಿತ್ತು. ಹೀಗೆ ಒಟ್ಟು 25 ವರ್ಷಗಳ ರಾಜಕೀಯ ಇತಿಹಾಸದಲ್ಲಿ (2008ರಲ್ಲಿ ಕ್ಷೇತ್ರ ವಿಂಗಡಣೆಯಿಂದಾಗಿ ಬಿಜೆಪಿ ಟಿಕೆಟ್‌ ತಪ್ಪಿದ್ದರಿಂದ ಅಕ್ಕಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು) 2008 ಹೊರತುಪಡಿಸಿ ಇದೇ ಮೊದಲ ಬಾರಿಗೆ ಯರಗುಪ್ಪಿಯ ಒಬ್ಬರೇ ಸ್ಪರ್ಧಿಸುತ್ತಿರುವುದು ಈಗೀನ ಉಪ ಚುನಾವಣೆಯಲ್ಲಿ ಮಾತ್ರ ಎಂಬುದು ಗಮನಾರ್ಹ.

ಕಾಂಗ್ರೆಸ್‌ ಅಭ್ಯರ್ಥಿಗೆ ಜೆಡಿಎಸ್‌ ಬೆಂಬಲ

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಸರಕಾರ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ. ಹೀಗಾಗಿ ಕುಂದಗೋಳ ಹಾಗೂ ಚಿಂಚೋಳಿ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಿದೆ. ಅಲ್ಲದೇ ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ಸೂಚಿಸಲು ತೀರ್ಮಾನಿಸಲಾಗಿದ್ದು, ಕೈ ಪಕ್ಷಕ್ಕೆ ಬಲ ಸಿಕ್ಕಂತಾಗಿದೆ. ಈ ಮೂಲಕ ಸೋಮವಾರ ನಾಮಪತ್ರ ಸಲ್ಲಿಸಲಿರುವ ಕುಸುಮಾ ಶಿವಳ್ಳಿ ಅವರಿಗೆ ಜೆಡಿಎಸ್‌ ವರಿಷ್ಠರಾದ ಬಸವರಾಜ ಹೊರಟ್ಟಿ ಅವರೊಂದಿಗೆ ನಾವು ಸಾಥ್‌ ನೀಡಲಿದ್ದೇವೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎನ್‌.ಎಚ್‌. ಕೋನರಡ್ಡಿ ಅವರು 'ವಿಜಯ ಕರ್ನಾಟಕ'ಕ್ಕೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ