ಕುಂದಗೋಳ:ತಾಲೂಕಿನ ದೇವನೂರ ಗ್ರಾಮದಲ್ಲಿ 'ನಮ್ಮ ಹೊಲ ನಮ್ಮ ರಸ್ತೆ' ಯೋಜನೆಯಡಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಹಣಪಾವತಿಸದ್ದರಿಂದ ಆಕ್ರೋಶಗೊಂಡ ಕಾರ್ಮಿಕರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅಧ್ಯಕ್ಷ , ಸದಸ್ಯರು ಹಾಗೂ ಸಿಬ್ಬಂದಿಯನ್ನು ಕೂಡಿ ಹಾಕಿ ಪ್ರತಿಭಟಿಸಿದ ಘಟನೆ ಶನಿವಾರ ನಡೆದಿದೆ.
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ 'ನಮ್ಮ ಹೊಲ ನಮ್ಮ ರಸ್ತೆ'ಯಡಿ ನಡೆದ ಕಾಮಗಾರಿಯಲ್ಲಿ ನಿತ್ಯ 75 ಕೂಲಿ ಕಾರ್ಮಿಕರು 9 ದಿನ ಕೆಲಸ ಮಾಡಿದ್ದು, 805 ದಿನಗಳ ಕೂಲಿ ಪಾವತಿಸಬೇಕಾಗಿತ್ತು. ಆದರೆ ಇದುವರೆಗೂ ಯಾರಿಗೂ ಕೂಲಿ ಹಣ ನೀಡಿದ್ದರಿಂದ ಕಾರ್ಮಿಕರು ಮಧ್ಯಾಹ್ನ 1 ಗಂಟೆಗೆ ಗ್ರಾಮ ಪಂಚಾಯಿತಿಯಲ್ಲಿ ಎಲ್ಲರನ್ನು ಕೂಡಿ ಹಾಕಿ ಪ್ರತಿಭಟನೆ ನಡೆಸಿದರು. ಸಂಜೆ 6 ಗಂಟೆಗೆ ಅಧ್ಯಕ್ಷ ಮತ್ತು ಪಿಡಿಓ ಬುಧವಾರ ಹಣ ಪಾವತಿಸುವ ವ್ಯವಸ್ಥೆ ಮಾಡುವ ಭರವಸೆ ನೀಡಿದ ನಂತರ ಬೀಗ ತೆರೆದು ಪ್ರತಿಭಟನೆ ನಿಲ್ಲಿಸಿದರು.
ಈ ಕುರಿತು ಗ್ರಾಪಂ ಪಿಡಿಓ ಅವರನ್ನು ಮಾತನಾಡಿಸಿದಾಗ, 35 ಲಕ್ಷ ರೂ. ಕ್ರೀಯಾಯೋಜನೆ ಮಾಡಿದ್ದು, ಈ ರಸ್ತೆ ಕಾಮಗಾರಿಗೆ 10 ಲಕ್ಷ ರೂ. ಯೋಜನೆ ಹಾಕಿಕೊಂಡಿದೆ. ಜಾಬ್ ಕಾರ್ಡ್ ಸಮಸ್ಯೆಯಿಂದ ಹಣ ಪಾವತಿಸುವಲ್ಲಿ ವಿಳಂಬವಾಗಿದೆ. ಹಾಗೂ ಕೆಲ ಹೊಲದ ಮಾಲೀಕರು ತಕರಾರು ಮಾಡಿ ತಹಸೀಲ್ದಾರ್ರಿಗೆ ಮನವಿ ನೀಡಿದ್ದರಿಂದ ಕೆಲಸ ಸ್ಥಗಿತಗೊಳಿಸಲಾಗಿದೆ. ಇದು ಸರಿಯಾದ ತಕ್ಷ ಣ ಮತ್ತೆ ಕೆಲಸ ಪ್ರಾರಂಭಿಸಲಾಗುವುದೆಂದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಬಸಪ್ಪ ಸರಾವರಿ, ಲಕ್ಷ್ಮಣ ಶಿಂಗನಳ್ಳಿ, ಸಾವಕ್ಕ ಶಿಂಗನಳ್ಳಿ, ಶಿವಪ್ಪ ಶಿರೂರ, ಜವಂತಪ್ಪ ಬೈರಪ್ಪನವರ, ಲಕ್ಷ್ಮಣ ಸಿದ್ದನಹಳ್ಳಿ, ಪರಸಪ್ಪ ಬೈರಪ್ಪನವರ ಸೇರಿದಂತೆ ನೂರಾರು ಕೂಲಿ ಕಾರ್ಮಿಕರು ಇದ್ದರು.