ಹುಬ್ಬಳ್ಳಿ:ನಗರದ ರಾಷ್ಟ್ರ ಸೇವಿಕಾ ಸಮಿತಿಯ ಮಾತೃಮಂದಿರದ ವಾರ್ಷಿಕೋತ್ಸವದ ಅಂಗವಾಗಿ ಫೆ.11ರಂದು ಮಧ್ಯಾಹ್ನ 2.30ಕ್ಕೆ ಮಹಿಳೆಯರಿಗಾಗಿ ಅಖಂಡ ವಂದೇ ಮಾತರಂ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರ ಸೇವಿಕಾ ಸಮಿತಿ ಹುಬ್ಬಳ್ಳಿ ನಗರದ ಸಹ ಕಾರ್ಯವಾಹಿಕ ಆಶಾ ನಾಯಕ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಶ್ವಾಪೂರ ಹೇಮಂತನಗರ ಜಕ್ಕಲಿ ಲೇಔಟ್ನಲ್ಲಿನ ಸಮಿತಿಯ ಕಾರ್ಯಾಲಯ ಮಾತೃಮಂದಿರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.
ಸ್ವಾತಂತ್ರ್ಯ ಹೋರಾಟ ಸಮಯದಲ್ಲಿ ಭಾರತೀಯರಲ್ಲಿ ಅದ್ಭುತ ಸಾಹಸಗಳಿಗೆ, ಸಹಸ್ರಾರು ತ್ಯಾಗ ಬಲಿದಾನಗಳಿಗೆ, ಪ್ರೇರಣೆ ನೀಡಿದ ಘೋಷಣೆ ವಂದೆ ಮಾತರಂ. ಬಂಗಾಳಿ ಭಾಷೆಯಲ್ಲಿ ಬಕೀಂ ಚಂದ್ರ ಚಟರ್ಜಿ ಅವರು ರಚಿಸಿದ ಈ ದೇಶಪ್ರೇಮದ ಕಿಚ್ಚನ್ನು ಪ್ರತಿಯೊಬ್ಬರಿಗೂ ಹೊತ್ತಿಸಿದ ಈ ರಾಷ್ಟ್ರಮಂತ್ರ ಚಳವಳಿ ತಾರಕಕ್ಕೆ ಏರಲು ಸ್ಫೂರ್ತಿ ನೀಡಿದೆ ಎಂದರು.
ನಮ್ಮ ಭಾರತ ಸಂಸ್ಕೃತಿಯ ಸಂಪತ್ತು, ಸಮೃದ್ಧಿ, ಸೊಬಗನ್ನು ಸೂಸುವ ಈ ಗೀತೆಯು ದೇಶವನ್ನು ದಾಸ್ಯದಿಂದ ಬಿಡುಗಡೆ ಮಾಡಿದೆ. ಪ್ರತಿಯೊಬ್ಬರಲ್ಲೂ ದೇಶಾಭಿಮಾನ ಬೆಳೆಸಲು, ದೇಶ ಪ್ರೇಮಕ್ಕಾಗಿ ಬಡಿದೆಬ್ಬಿಸುವ ಸದುದ್ದೇಶದಿಂದ ಇಂತಹ ಸ್ಪರ್ಧೆಗಳನ್ನು ಮಹಿಳಾ ಪರ ವಾದ ಹೊಂದಿರುವ ಹಿಂದೂಸ್ಥಾನದ ಪುನರ್ ನಿರ್ಮಾಣಕ್ಕೆ ಬದ್ಧವಾದ ಏಕೈಕ ಮಹಿಳಾ ಸಂಸ್ಥೆ ರಾಷ್ಟ್ರ ಸೇವಿಕಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಂಸ್ಕಾರ, ಸಂಸ್ಕೃತಿ, ಆತ್ಮ ವಿಶ್ವಾಸ, ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮಗಳನ್ನು ಶಾಖೆಯಲ್ಲಿ ನಡೆಯುತ್ತವೆ. ಜತೆಗೆ ಶ್ಲೋಕ, ವೀರಯೋಧರ ಕಥೆ, ದೇಶಭಕ್ತಿಗೀತೆ, ಯೋಗ, ಧ್ಯಾನ, ಮನಸ್ಸಿಗೆ ಮುದ ನೀಡುವ ಉತ್ಸಾಹ ಹೆಚ್ಚಿಸುವ ಸಾಮೂಹಿಕ ಆಟಗಳು, ಉಚಿತ ಸೇವೆಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು.
ಸೂಚನೆ:
6ರಿಂದ 8 ಜನರು ತಂಡವಿರುವವರು ಶುಲ್ಕ ಭರಿಸಿ ತಮ್ಮ ಹೆಸರು ನೋಂದಾಯಿಸಬೇಕು. ನೋಂದಣಿ ಮಾಡಲು ಕೊನೆಯ ದಿನ ಫೆ.6, ಹೆಚ್ಚಿನ ಮಾಹಿತಿಗೆ 96866 89199, 94817 26082ಗೆ ಸಂಪರ್ಕಿಸಲು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಹುಬ್ಬಳ್ಳಿ ಪ್ರಚಾರ ಪ್ರಮುಖ ಸಪ್ನ ಮೊಸಳೆ, ಹುಬ್ಬಳ್ಳಿ ನಗರ ಸಂಚಾಲಕಿ ಭಾರತಿ ನಂದಕುಮಾರಿ ಉಪಸ್ಥಿತರಿದ್ದರು.