ಆ್ಯಪ್ನಗರ

ಜಲಮೂಲಗಳಿಗೆ ಆಪತ್ತು: ಅಂದಕ್ಕೂ ಕುತ್ತು

ಧಾರವಾಡ : ಸುಂದರ ಪರಿಸರದೊಂದಿಗೆ ನವಿಲುಗಳ ತಾಣವಾಗಿದ್ದ ನವಲೂರು ಕೆರೆ ಈಗ ನೀರಿಲ್ಲದೇ ಬರಿದಾಗಿದೆ. ಹೂಳು ತುಂಬಿ ಜಲ ಮೂಲಗಳೂ ಕಡಿತಗೊಂಡು ಕೆರೆ ಅಂದವೇ ಹಾಳಾಗಿದೆ.

ವಿಕ ಸುದ್ದಿಲೋಕ 16 Jul 2017, 4:30 am

ಧಾರವಾಡ : ಸುಂದರ ಪರಿಸರದೊಂದಿಗೆ ನವಿಲುಗಳ ತಾಣವಾಗಿದ್ದ ನವಲೂರು ಕೆರೆ ಈಗ ನೀರಿಲ್ಲದೇ ಬರಿದಾಗಿದೆ. ಹೂಳು ತುಂಬಿ ಜಲ ಮೂಲಗಳೂ ಕಡಿತಗೊಂಡು ಕೆರೆ ಅಂದವೇ ಹಾಳಾಗಿದೆ.

ಹುಬ್ಬಳ್ಳಿ- ಧಾರವಾಡ ರಸ್ತೆ ಬದಿಗೆ ನವಲೂರು ಊರಿಗೆ ಹೋಗುವ ಕೂಡು ರಸ್ತೆಯಲ್ಲಿರುವ ಸುಮಾರು 55 ಎಕರೆ ವಿಸ್ತೀರ್ಣ ಕೆರೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ.

ಜಲಾನಯನ ಅಭಿವೃದ್ಧಿ ಯೋಜನೆ ಅಡಿ ಸಣ್ಣ ನೀರಾವರಿ ಇಲಾಖೆಯ ಸುಪರ್ಧಿಗೆ ಈ ಕೆರೆ ಇದೆ ಎಂದು ನಾಮ ಫಲಕ ಹೇಳುತ್ತದೆ. ಆದರೆ ಕೆರೆಯ ಸಂಪೂರ್ಣ ಅಭಿವೃದ್ಧಿಗೆ ಇಲಾಖೆ ಮಾತ್ರ ಮನಸ್ಸು ಮಾಡುತ್ತಿಲ್ಲ. ಹಿಂದೆ ಚಂದ್ರಕಾಂತ ಬೆಲ್ಲದ ಶಾಸಕರಾಗಿದ್ದ ಸಂದರ್ಭದಲ್ಲಿ ಸುಮಾರು 85 ಲಕ್ಷ ರೂ. ಖರ್ಚು ಮಾಡಿ ಕೆರೆಯನ್ನು ಅಭಿವೃದ್ಧಿಪಡಿಸಿ ಒಳನಾಡು ಮೀನುಗಾರಿಕೆಗೆ ಅನುವು ಮಾಡಿಕೊಡಲಾಗಿತ್ತು. ಆದರೆ ಮೀನುಗಾರಿಕೆಗೆ ಟೆಂಡರ್‌ ಪಡೆದ ಗುತ್ತಿಗೆದಾರರು ಕೆರೆಗೆ ಕೊಳಚೆ ನೀರು ಹರಿಬಿಡುತ್ತಿದ್ದರು ಎಂಬ ಕಾರಣಕ್ಕೆ ಟೆಂಡರ್‌ ರದ್ದುಗೊಳಿಸಲಾಗಿದೆ.

ಕೊಳಚೆ ನೀರು ಸೇರ್ಪಡೆಗೆ ಮೀನುಗಾರಿಕೆ ಮೂಲ

ನವಲೂರು ಕೆರೆಯ ನೀರಿಗೆ ಪ್ರತಿದಿನ ಕೆಎಂಎಫ್‌ ಹಾಗೂ ಗ್ರಾಮದ ಕೊಳಚೆ ನೀರು ಸೇರುತ್ತಿದೆ. ಅದರಿಂದಾಗಿ ಕೆರೆಯ ನೀರು ದುರ್ವಾಸನೆಯ ಜತೆಗೆ ಕಲುಷಿತಗೊಳ್ಳುತ್ತಿದೆ. ಕೊಳಚೆ ನೀರು ಕೆರೆಗೆ ಸೇರಿದಂತೆ ಸಣ್ಣ ನೀರಾವರಿ ಇಲಾಖೆಯ ಸುಸಜ್ಜಿತವಾಗಿ ಕೆರೆಯ ಬದಿಯಲ್ಲಿ ನಾಲಾ ನಿರ್ಮಾಣ ಮಾಡಿದೆ. ಆದರೆ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿರುವ ಕೆಲವರು ಮೀನುಗಳ (ಆಹಾರಕ್ಕೆ) ಬೆಳವಣಿಗೆ ಕೊಳಚೆ ನೀರನ್ನು ಸೇರ್ಪಡೆ ಮಾಡುತ್ತಿದ್ದಾರೆ. ಹಲವಾರು ಬಾರಿ ಮೀನುಗಾರರಿಗೆ ತಾಕೀತು ಮಾಡಿದರೂ ಅದಕ್ಕೆ ಅವರು ಕ್ಯಾರೇ ಅನ್ನುತ್ತಿಲ್ಲ. ಮೀನುಸಾಕಾಣಿಗೆ ಕೆರೆ ಬಳಕೆ ಮಾಡುತ್ತಿರುವುದೇ ಕೆರೆಯ ದುಸ್ಥಿತಿಗೆ ಕಾರಣ ಎಂಬ ಆರೋಪಗಳು ಅಲ್ಲಿನ ಗ್ರಾಮಸ್ಥರಿಂದ ಕೇಳಿ ಬರುತ್ತಿವೆ.

ಜನ-ಜಾನುವಾರುಗಳಿಗೆ ಆಧಾರ

ನವಲೂರು ಹಾಗೂ ರಾಯಾಪೂರ ಗ್ರಾಮದ ರೈತರ ಜಾನುವಾರುಗಳಿಗೆ ಕುಡಿಯಲು ಹಾಗೂ ಗ್ರಾಮದ ಮಹಿಳೆಯರು ಬಟ್ಟೆ ತೊಳೆಯಲು ಇಂದಿಗೂ ಇದೇ ಕೆರೆ ಅವಲಂಬಿಸಿದ್ದಾರೆ. ಒಂದು ಅಂದಾಜಿನ ಪ್ರಕಾರ ಸುಮಾರು 10 ಸಾವಿರ ಜಾನುವಾರುಗಳಿಗೆ ದಾಹ ನೀಗಿಸಲು ಹಾಗೂ ಮೈತೊಳೆಯಲು ಬಳಸಲಾಗುತ್ತಿದೆ. ಆದರೆ ಸದ್ಯ ಮಳೆಗಾಲ ಆರಂಭವಾಗಿ ತಿಂಗಳು ಕಳೆದರೂ ಕೆರೆಯಲ್ಲಿ ಶೇ.10ರಷ್ಟು ನೀರಿನ ಸಂಗ್ರಹವಾಗಿಲ್ಲ.

ರೈತರ ಜಮೀನಿಗೆ, ಜನ-ಜಾನುವಾರುಗಳಿಗೆ ಹಾಗೂ ಗ್ರಾಮಸ್ಥರ ದಿನಬಳಕೆಗೆ ಉಪಯುಕ್ತವಾಗುತ್ತಿದ್ದ ಕೆರೆ ತನ್ನ ಮೊದಲಿನ ಸ್ವರೂಪಕ್ಕೆ ಬರುವುದೇ ? ಎಂಬ ಪ್ರಶ್ನೆ ಪ್ರಜ್ಞಾವಂತರನ್ನು ಕಾಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ