ಆ್ಯಪ್ನಗರ

ನೂತನ ಸಚಿವ ಶೆಟ್ಟರ್‌ಗೆ ಅದ್ಧೂರಿ ಸ್ವಾಗತ

ಹುಬ್ಬಳ್ಳಿ : ರಾಜ್ಯ ಸರಕಾರದ ಸಂಪುಟದಲ್ಲಿ ಸಚಿವ ಸ್ಥಾನ ಪಡೆದು ನಗರಕ್ಕೆ ಬುಧವಾರ ಆಗಮಿಸಿದ ಜಗದೀಶ ಶೆಟ್ಟರ್‌ ಅವರನ್ನು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ಧೂರಿಯಿಂದ ಬರಮಾಡಿಕೊಂಡರು.

Vijaya Karnataka 22 Aug 2019, 5:00 am
ಹುಬ್ಬಳ್ಳಿ : ರಾಜ್ಯ ಸರಕಾರದ ಸಂಪುಟದಲ್ಲಿ ಸಚಿವ ಸ್ಥಾನ ಪಡೆದು ನಗರಕ್ಕೆ ಬುಧವಾರ ಆಗಮಿಸಿದ ಜಗದೀಶ ಶೆಟ್ಟರ್‌ ಅವರನ್ನು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ಧೂರಿಯಿಂದ ಬರಮಾಡಿಕೊಂಡರು.
Vijaya Karnataka Web DRW-21MANJU3F
ಪತ್ನಿ ಶಿಲ್ಪಾ ಸಚಿವರಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು.


ನೂತನ ಸಚಿವರು ಮನೆಗೆ ಆಗಮಿಸುತ್ತಿದ್ದಂತೆಯೇ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮಹಿಳೆಯರು ಆರತಿ ಬೆಳಗಿ ಬರಮಾಡಿಕೊಂಡರು. ಪತ್ನಿ ಶಿಲ್ಪಾ ಹಾಗೂ ಕುಟುಂಬಸ್ಥರು ಸಿಹಿ ತಿನ್ನಿಸಿ ಸಂಭ್ರಮಿಸಿದರು. ಮನೆಯ ದೇವರಿಗೆ ಕೈ ಮುಗಿದ ಶೆಟ್ಟರ್‌, ನಾನಾ ಕಡೆಗಳಿಂದ ಆಗಮಿಸಿದ್ದ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಖುಷಿಪಟ್ಟರು.

ಪ್ರವಾಹ ಹಿನ್ನೆಲೆಯಲ್ಲಿ ಸರಳವಾಗಿ ಹಾಗೂ ಹೂಗುಚ್ಛ ತರಬೇಡಿ ಎಂದಿದ್ದರೂ ಕಾರ್ಯಕರ್ತರು, ಹೂಗುಚ್ಛ ಹಾಗೂ ಹೂ ಮಾಲೆಗಳನ್ನು ತಂದಿದ್ದರು. ನೂತನ ಸಚಿವರು ಅನಿವಾರ್ಯವಾಗಿ ಸ್ವೀಕರಿಸಿದರು. ಏತನ್ಮಧ್ಯೆ ಕೆಲವರು ಬಡಮಕ್ಕಳಿಗೆ ಕೊಡಲು ನೋಟ್‌ಬುಕ್‌ಗಳನ್ನು ಶೆಟ್ಟರ್‌ಗೆ ನೀಡಿ ಅಭಿನಂದನೆ ಸಲ್ಲಿಸಿದರು. ಇದಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲೂ ಅಪಾರ ಸಂಖ್ಯೆಯ ಕಾರ್ಯಕರ್ತರು ಅಭಿನಂದಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಸಚಿವ ಜಗದೀಶ ಶೆಟ್ಟರ್‌, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಭಿವೃದ್ಧಿಗಾಗಿ ಈ ಹಿಂದಿನ ಬೇಡಿಕೆಯ 130 ಕೋಟಿ ರೂ. ಪಿಂಚಣಿ ಹಣ ಬಿಡುಗಡೆಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಮೊದಲ ಹಂತವಾಗಿ 50 ಕೋಟಿ ರೂ. ಶೀಘ್ರದಲ್ಲೇ ಬಿಡುಗಡೆ ಮಾಡಿಸಲು ಪ್ರಯತ್ನಿಸಲಾಗುವುದು. ನಂತರದಲ್ಲಿ ಉಳಿದ ಹಣ ಬಿಡುಗಡೆಗೆ ಕ್ರಮಕೈಗೊಳ್ಳುತ್ತೇವೆ. ಪಿಂಚಣಿ ಹಣದಿಂದ ಆರ್ಥಿಕ ತೊಂದರೆ ಎದುರಿಸುತ್ತಿರುವ ಪಾಲಿಕೆಗೆ ಪ್ರಥಮ ಹಂತದ 50 ಕೋಟಿ ರೂ. ನೆರವಾಗಲಿದೆ. ವಿಶೇಷ ಪ್ಯಾಕೆಜ್‌ ನೀಡುವ ಉದ್ದೇಶವೂ ಇದೆ ಎಂದರು.

ಅವಳಿನಗರದಲ್ಲಿ ಈಗಾಗಲೇ ನಡೆಯುತ್ತಿರುವ ಕಾಮಗಾರಿ ಚಾಲನೆಗೆ ಮೊದಲ ಆದ್ಯತೆ ನೀಡಲಾಗುವುದು. ಆ ನಂತರ ಹೊಸ ಯೋಜನೆಗಳಿಗೆ ಕೈ ಹಾಕುತ್ತೇವೆ. ಈ ಹಿಂದಿನ ಸರಕಾರ ಹುಬ್ಬಳ್ಳಿ-ಧಾರವಾಡದಲ್ಲಿ ಸಿಆರ್‌ಎಫ್‌ನ 8 ರಸ್ತೆಗಳ ಕಾಮಗಾರಿಗಳಿಗೆ ಚಾಲನೆ ನೀಡದೆ ಬಾಕಿ ಉಳಿಸಿತ್ತು. ಕೂಡಲೇ ಬಾಕಿ ಉಳಿದಿರುವ ಕಾಮಗಾರಿಗಳ ಸ್ಥಿತಿಗತಿ ಪರಿಶೀಲನೆ ನಡೆಸಿ ಎದುರಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ತಿಳಿಸಿದರು.

ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯಾಗಿರುವ ರಸ್ತೆ ಅತಿಕ್ರಮಣ ತೆರುವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬಿಆರ್‌ಟಿಎಸ್‌ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾಸಲಾಗುವುದು. ಬೇಂದ್ರೆ ರಹದಾರಿ ಪರವಾನಿಗೆ ಮತ್ತೈದು ವರ್ಷ ವಿಸ್ತರಣೆ ಮಾಡಿರುವ ಕುರಿತು ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ