ಆ್ಯಪ್ನಗರ

ಸ್ಮಾರ್ಟ್‌ಸಿಟಿ ಅಂಧಾದುಂದಿ ವೆಚ್ಚ ?

​ಹುಬ್ಬಳ್ಳಿ : ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಳ್ಳುತ್ತಿರುವ ಕೆಲ ಯೋಜನೆಗಳ ಹೆಸರಿನಲ್ಲಿ ಅಂಧಾದುಂದಿ ವೆಚ್ಚ ಮಾಡಲಾಗುತ್ತಿದೆ? ಇತ್ತೀಚೆಗೆ ಸ್ಮಾರ್ಟ್‌ಸಿಟಿ ಯೋಜನೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ನಡೆದ ಚರ್ಚೆ ಸಂದರ್ಭದಲ್ಲಿ ಇಂಥದ್ದೊಂದು ಅನುಮಾನ ವ್ಯಕ್ತವಾಗುತ್ತಿದೆ. ಇದಕ್ಕೆ ಪೂರಕವಾಗಿ ಜನಪ್ರತಿನಿಧಿಗಳು ಕೂಡ ಅಚ್ಚರಿ ವ್ಯಕ್ತಪಡಿಸಿದ್ದು, ಇಷ್ಟೊಂದು ಏಕೆ ಎಂದು ಆಕ್ಷೇಪ ವ್ಯಕ್ತವಾಗಿದೆ.

Vijaya Karnataka 11 Jul 2019, 5:00 am
ಕಾಶಪ್ಪ ಕರದಿನ
Vijaya Karnataka Web what is smartcity
ಸ್ಮಾರ್ಟ್‌ಸಿಟಿ ಅಂಧಾದುಂದಿ ವೆಚ್ಚ ?

ಹುಬ್ಬಳ್ಳಿ : ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಳ್ಳುತ್ತಿರುವ ಕೆಲ ಯೋಜನೆಗಳ ಹೆಸರಿನಲ್ಲಿ ಅಂಧಾದುಂದಿ ವೆಚ್ಚ ಮಾಡಲಾಗುತ್ತಿದೆ? ಇತ್ತೀಚೆಗೆ ಸ್ಮಾರ್ಟ್‌ಸಿಟಿ ಯೋಜನೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ನಡೆದ ಚರ್ಚೆ ಸಂದರ್ಭದಲ್ಲಿ ಇಂಥದ್ದೊಂದು ಅನುಮಾನ ವ್ಯಕ್ತವಾಗುತ್ತಿದೆ. ಇದಕ್ಕೆ ಪೂರಕವಾಗಿ ಜನಪ್ರತಿನಿಧಿಗಳು ಕೂಡ ಅಚ್ಚರಿ ವ್ಯಕ್ತಪಡಿಸಿದ್ದು, ಇಷ್ಟೊಂದು ಏಕೆ ಎಂದು ಆಕ್ಷೇಪ ವ್ಯಕ್ತವಾಗಿದೆ.

ಧಾರವಾಡದಲ್ಲಿ ಕೇಂದ್ರ ಸರಕಾರದ ಅನುದಾನದಡಿಯಲ್ಲಿ ಒಳಕ್ರೀಡಾಂಗಣಕ್ಕೆ 14 ಕೋಟಿ ರೂ. ವೆಚ್ಚದಲ್ಲಿ 11 ಕ್ರೀಡೆಗಳು ಮತ್ತು ಕ್ರೀಡಾಪಟುಗಳು, ಕೋಚ್‌ಗಳಿಗೆ ಬೇಕಾದ ಸೌಲಭ್ಯ ಕಲ್ಪಿಸಲಾಗುತ್ತಿದೆ. ಆದರೆ, ಸ್ಮಾರ್ಟ್‌ಸಿಟಿ ಅಡಿಯಲ್ಲಿ ಕೇವಲ 6 ಕ್ರೀಡೆಗಳು ಮತ್ತು ಪೂರಕವಾಗಿ ಕೆಲವೇ ಕೆಲ ಸೌಲಭ್ಯಗಳಿಗೆ 28 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಏಕೆ ಈ ಅನುಮಾನ, 28 ಕೋಟಿಯಲ್ಲೇನಿದೆ?:

ಹುಬ್ಬಳ್ಳಿ ನೆಹರು ಮೈದಾನದಲ್ಲಿ ಈಗಾಗಲೇ ಇರುವ ಶಟಲ್‌ ಬ್ಯಾಡ್ಮಿಂಟನ್‌(2 ಕೋರ್ಟ್‌) ಮತ್ತು ಟೇಬಲ್‌ ಟೆನಿಸ್‌ ಕೋರ್ಟ್‌, ಬಾಸ್ಕೆಟ್‌ಬಾಲ್‌ ಕ್ರೀಡಾಂಗಣಗಳ ನವೀಕರಣ, ಇದರ ಜತೆಗೆ ಕುಸ್ತಿ, ಜಿಮ್‌, ವಾಲಿಬಾಲ್‌ ಮತ್ತು ಖೋಖೋ ಕ್ರೀಡಾಂಗಣವನ್ನು ಸ್ಮಾರ್ಟ್‌ಸಿಟಿ ಅಡಿ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಲ್ಲದೆ ಕೋಚ್‌ ರೆಸ್ಟ್‌ ರೂಂ ಹಾಗೂ ಕ್ರೀಡಾಪಟುಗಳ ಡ್ರೆಸ್ಸಿಂಗ್‌ ರೂಂ ನಿರ್ಮಾಣ ಯೋಜನೆ ಹಾಕಿಕೊಳ್ಳಲಾಗಿದೆ. ಪಾರ್ಕಿಂಗ್‌, ಗ್ಯಾಲರಿ, ಪೆವಿಲಿಯನ್‌, ವಿಐಪಿ ಗೇಟ್‌ ಬದಲಾವಣೆ ಮಾಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಬರೋಬ್ಬರಿ 28 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ.

14 ಕೋಟಿಯಲ್ಲೇನಿದೆ?:
ಆದರೆ, ಧಾರವಾಡದಲ್ಲಿ 14 ಕೋಟಿ ರೂ.ನಲ್ಲಿ ಸ್ವೀಮಿಂಗ್‌ಪೂಲ್‌, ಜಿಮ್‌, ಶಟಲ್‌ ಬ್ಯಾಡ್ಮಿಂಟನ್‌ (4ಕೋರ್ಟ್‌), ಟೇಬಲ್‌ ಟೆನಿಸ್‌(4ಕೋರ್ಟ್‌), ಸ್ಕ್ವಾಶ್‌, ಕುಸ್ತಿ (2ಕೋರ್ಟ್‌), ಕರಾಟೆ, ಟ್ವೇಕಾಂಡೊ, ಕಬಡ್ಡಿ, ಅರ್ಚರಿ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಇದರ ಜತೆಗೆ ಡಾಮೇಟರ್‌ (ಎರಡು), ಕೋಚ್‌ ರೆಸ್ಟ್‌ ರೂಂ, ಡ್ರೆಸ್ಸಿಂಗ್‌ ರೂಂ, ಫಿಸಿಯೋಥೆರಪಿಸ್ಟ್‌ ಕೋಣೆ ಹಾಗೂ ಕ್ರೀಡಾ ಸಮುಚ್ಛಯ ನಿರ್ವಹಣೆಗೆ ಕಚೇರಿ ಹಾಗೂ ಕ್ರೀಡಾ ಸಾಮಗ್ರಿ ಮಾರಾಟದ 5 ಅಂಗಡಿಗಳನ್ನು ನಿರ್ಮಿಸಲಾಗುತ್ತಿದೆ.

ಹೇಗಿದೆ ವ್ಯತ್ಯಾಸ?:
14 ಕೋಟಿ ರೂ.ಗಿಂತ ದುಪ್ಪಟ್ಟು ಹಣ ವ್ಯಯಿಸಿ ಸಣ್ಣ ಕ್ರೀಡಾಂಗಣ ಮತ್ತು ಕಡಿಮೆ ಸೌಲಭ್ಯಗಳು ಸಿಗುತ್ತವೆ. 14 ಕೋಟಿ ರೂ.ನಲ್ಲಿ ದೊಡ್ಡ ಕ್ರೀಡಾಂಗಣ ಹಾಗೂ ಹೆಚ್ಚು ಸೌಲಭ್ಯಗಳು ದೊರೆಯುತ್ತಿವೆ. ಇದರಲ್ಲಿ ಎಷ್ಟೊಂದು ಅಂಧಾದುಂದಿ ಖರ್ಚು ಮಾಡಲಾಗುತ್ತಿದ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.

ಇತ್ತೀಚೆಗೆ ಹುಬ್ಬಳ್ಳಿ ಸರ್ಕಿಟ್‌ ಹೌಸ್‌ನಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕ್ರೀಡಾಂಗಣ ಅಭಿವೃದ್ಧಿ ಚರ್ಚೆಗೆ ಬಂದಾಗ ಈ ವಿಷಯ ಬಹಿರಂಗವಾಗಿದೆ. ಈ ವೇಳೆ ಶಾಸಕ ಅರವಿಂದ ಬೆಲ್ಲದ ಅವರು, ''ನಾವು 14 ಕೋಟಿ ರೂ.ನಲ್ಲಿ ಇಷ್ಟೊಂದು ಒಳಕ್ರೀಡಾಂಗಣ ಕಟ್ಟುತ್ತಿದ್ದೇವೆ, ನೀವು ನೋಡಿದರೆ, ಶಟಲ್‌ ಬ್ಯಾಡ್ಮಿಂಟನ್‌ (2ಕೋರ್ಟ್‌), ಟೇಬಲ್‌ ಟೆನಿಸ್‌ ಕೋರ್ಟ್‌ಗಳ ನವೀಕರಣ ಸೇರಿ 6 ಕ್ರೀಡೆಗಳ ಒಳ ಕ್ರೀಡಾಂಗಣ ಕಟ್ಟಲು 28 ಕೋಟಿ ರೂ. ಬೇಕಾ'' ಎಂದು ನೇರವಾಗಿ ಅಧಿಕಾರಿಗಳನ್ನು ಪ್ರಶ್ನಿಸಿದ್ದರು.

ಹೆಚ್ಚುವರಿಯಾಗಿ ಸೇರಿಸ್ತಿವಿ:
ಶಾಸಕ ಬೆಲ್ಲದ ಅವರ ಪ್ರಶ್ನೆಗೆ ತಬ್ಬಿಬ್ಬರಾದ ಸ್ಮಾರ್ಟ್‌ಸಿಟಿ ಎಂಡಿ ಶಕೀಲ್‌ ಅಹ್ಮದ್‌, ಮೈದಾನ ಅಭಿವೃದ್ಧಿ ಯೋಜನೆ ಇನ್ನೂ ಕಾರ‍್ಯ ಸಾಧ್ಯತೆ ವರದಿ (ಫಿಜಿಬಿಲಿಟಿ ರಿಪೋರ್ಟ್‌) ಹಂತದಲ್ಲಿದೆ. ನೀವು ಹೇಳಿದಂತೆ ಇನ್ನೂ ಹೆಚ್ಚುವರಿ ಕೋರ್ಟ್‌ ಮತ್ತು ಕ್ರೀಡೆಗಳನ್ನು ಸೇರಿಸಿಕೊಳ್ಳುತ್ತೇವೆ ಎಂದು ಸಭೆಯಲ್ಲೇ ವಾಗ್ದಾನ ಮಾಡಿದ್ದಾರೆ. ಹೆಚ್ಚುವರಿ ಸೇರಿಸಲು ಈಗಲೂ ಅವಕಾಶವಿದ್ದರೆ, ಅಧಿಕಾರಿಗಳು ಮೊದಲೇ ಯೋಜನಾ ವರದಿ ತಯಾರಿಸುವ ಸಂದರ್ಭದಲ್ಲಿ ಏಕೆ ಸೇರಿಸಲಿಲ್ಲ. ಒಂದು ವೇಳೆ ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಒಪ್ಪಿಗೆ ನೀಡಿದರೆ, ಸ್ಮಾರ್ಟ್‌ಸಿಟಿ ಯೋಜನೆ ಹೆಸರಿನಲ್ಲಿ ಅಂಧಾದುಂದಿ ಹಣ ಖರ್ಚು ಮಾಡುವುದೋ ಅಥವಾ ದುಡ್ಡು ಹೊಡೆಯುವ ಹುನ್ನಾರವೋ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ