ಧಾರವಾಡ : ಪ್ರಸ್ತುತ ಮಳೆಗಾಲದಲ್ಲಿ ಹು-ಧಾ ಬಿಆರ್ಟಿಎಸ್ ಕಂಪನಿ ನಿಯಮಿತವು ಕೈಗೊಂಡಿರುವ ಸುರಕ್ಷ ತಾ ಕ್ರಮಗಳ ಕುರಿತು ಸಾರ್ವಜನಿಕರಿಗೆ ಮಾಹಿತಿಯ ಪ್ರಕಟಣೆಯನ್ನು ಹೊರಡಿಸಲಾಗಿದೆ.
ಈಗಾಗಲೇ ಅನುಷ್ಠಾನದಲ್ಲಿರುವ ಬಿಆರ್ಟಿಎಸ್ ಯೋಜನೆಯ ವಿವಿಧ ಕಾಮಗಾರಿಗಳಾದ ಮಿಶ್ರಪಥ ಕಾಮಗಾರಿ, ಪಾದಚಾರಿ ಮೇಲ್ಸೇತುವೆ ಕಾಮಗಾರಿ ಹಾಗೂ ಬಿಆರ್ಟಿಎಸ್ ಬಸ್ ನಿಲ್ದಾಣ ಸ್ಥಳಗಳಲ್ಲಿ ಮಳೆಗಾಲದಿಂದಾಗುವ ಅವಘಡಗಳನ್ನು ತಡೆಗಟ್ಟಲು ಬಿಆರ್ಟಿಎಸ್ ಕಂಪæನಿಯು ಬದ್ದವಾಗಿದ್ದು, ಈ ಹಿನ್ನೆಲೆಯಲ್ಲಿ ಹಲವಾರು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ.
ವಿಶೇಷವಾಗಿ ಹುಬ್ಬಳ್ಳಿ ನಗರ ವ್ಯಾಪ್ತಿಯಲ್ಲಿ ಹೊಸೂರನಿಂದ ಬೈರಿದೇವರಕೊಪ್ಪದವರೆಗೆ 10 ಬಸ್ ನಿಲ್ದಾಣಗಳ ಕಾಮಗಾರಿ ಹಾಗೂ ಧಾರವಾಡ ನಗರ ವ್ಯಾಪ್ತಿಯಲ್ಲಿ 7 ಬಿಆರ್ಟಿಎಸ್ ಬಸ್ ನಿಲ್ದಾಣಗಳ ಕಾಮಗಾರಿಯನ್ನು ಕೈಗೊಂಡಿದ್ದು, ಕಾಮಗಾರಿಯ ನಡೆಯುವ ಸ್ಥಳಗಳ ಇಕ್ಕೆಲಗಳಲ್ಲಿ ತಾತ್ಕಾಲಿಕ ಬದಲಿ ರಸ್ತೆಯನ್ನು ನಿರ್ಮಿಸಲಾಗಿದೆ. ರಸ್ತೆಯ ಮಧ್ಯೆದಲ್ಲಿ ನಡೆಯುತ್ತಿರುವುದರಿಂದ ಕಾಮಗಾರಿಯು ಸುತ್ತಲೂ ಸೂಕ್ತ ಬ್ಯಾರಿಕೇಡ್ ವ್ಯವಸ್ಥೆ ಇದ್ದು, ವಾಹನಗಳ ಸಂಚಾರಕ್ಕೆ ಅವಶ್ಯಕ ಮಾರ್ಗದರ್ಶಕ ಫಲಕಗಳನ್ನು ಅಳವಡಿಸಲಾಗಿದೆ. ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಲ್ಲದಂತೆ ಕ್ರಮಗಳನ್ನು ಕೈಗೊಳ್ಳಲಾಗುವುದು. ಕಾಮಗಾರಿಯ ಸ್ಥಳಗಳಲ್ಲಿಯ ರಸ್ತೆಗಳಲ್ಲಿ ಗುಂಡಿಗಳಿದ್ದಲ್ಲಿ ಅದನ್ನು ಮುಚ್ಚಲಾಗುವುದು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ದೂರಗಳು/ಸಮಸ್ಯೆಗಳನ್ನು ನೋಂದಾಯಿಸಲು ಹುಬ್ಬಳ್ಳಿ ಧಾರವಾಡ ಬಿಆರ್ಟಿಎಸ್ ಕಂಪನಿಯು ಮಳೆಗಾಲದ ನಿಮಿತ್ತ ಸಹಾಯವಾಣಿಯನ್ನು ತೆರೆದಿದ್ದು, ಸಹಾಯವಾಣಿ ಸಂಖ್ಯೆ: 9900082184ಗೆ ಕರೆ ಮಾಡಬಹುದು. ಬಿಆರ್ಟಿಎಸ್ ಯೋಜನೆಯಡಿಯಲ್ಲಿ ಹು-ಧಾ ನಗರಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಬಸ್ನಿಲ್ದಾಣಗಳ ಸ್ಥಳಗಳ ಮಾಹಿತಿ ಹೊಸೂರ್ ಕ್ರಾಸ್, ಮಹಿಳಾ ವಿದ್ಯಾಪೀಠ, ಜೆ.ಜೆ. ಕಾಲೇಜ್, ಸುಶ್ರತ ಹಾಸ್ಪಿಟಲ್ ಹತ್ತಿರ, ಬಿವಿಬಿ ಕಾಲೇಜ್, ಪ್ರೇರಣಾ ಕಾಲೇಜ್, ಉಣಕಲ್ ಗ್ರಾಮ, ಉಣಕಲ್ ಕೆರೆ, ಸನಾ ಕಾಲೇಜ್, ಭೈರಿದೇವರಕೊಪ್ಪ, ಗಾಂಧಿನಗರ, ವಿದ್ಯಾಗಿರಿ, ಟೋಲನಾಕಾ, ಬಾಗಲಕೋಟ ಪೆಟ್ರೋಲ್ ಪಂಪ್, ಲಕ್ಷ್ಮಿ ಥಿಯೇಟರ್ ಹತ್ತಿರ, ಕೋರ್ಟ್ ಸರ್ಕಲ್, ಜ್ಯುಬಿಲಿ ಸರ್ಕಲ್ಗಳಲ್ಲಿ ಬಸ್ ನಿಲ್ದಾಣಗಳು ಇರುತ್ತವೆ ಎಂದು ಬಿಆರ್ಟಿಎಸ್ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.